ಆರ್ಥಿಕ ಒಳಗೊಳ್ಳುವಿಕೆಯನ್ನು ಗಟ್ಟಿಗೊಳಿಸಿ, ಸುಸ್ಥಿರ ಅಭಿವೃದ್ಧಿ ಸಾಧಿಸಲು ಅಗತ್ಯ: ಸತೀಶ್ ಮರಾಠೆ ಪ್ರತಿಪಾದನೆ
ನವದೆಹಲಿ: ಭಾರತದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು (Financial Inclusion) ಇನ್ನಷ್ಟು ಗಟ್ಟಿಗೊಳಿಸಲು, ದೇಶದ ಜಿಡಿಪಿಯ ಬೆಳವಣಿಗೆಯನ್ನು ತ್ವರಿತಗೊಳಿಸಲು ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರ ಬ್ಯಾಂಕಿಂಗ್ ಜಾಲವನ್ನು ವ್ಯಾಪಕವಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಸದಸ್ಯ ಹಾಗೂ ಹಿರಿಯ ಸಹಕಾರ ಚಿಂತಕ ಸತೀಶ್ ಮರಾಠೆ ಪ್ರತಿಪಾದಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಕೆ.ಕೆ.ತ್ರಿಪಾಠಿ ಹಾಗೂ ಇತರರು ರಚಿಸಿರುವ Cooperative Management – The Indian Perspective ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯು ಗಮನಾರ್ಹವಾಗಿ ವಿಸ್ತರಿಸಿದೆ. 2011ರಲ್ಲಿ ಸುಮಾರು ಶೇ.50ರಷ್ಟಿದ್ದ ಬ್ಯಾಂಕ್ ಖಾತೆ ಹೊಂದಿರುವ ಜನರ ಪ್ರಮಾಣವು ಇಂದು ಶೇ.80ರ ಸಮೀಪಕ್ಕೆ ಏರಿದೆ. ಆದಾಗ್ಯೂ, ಗ್ರಾಮೀಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸೇವೆ ಸಲ್ಲಿಸುವ ತಳಮಟ್ಟದ ಬ್ಯಾಂಕಿಂಗ್ ಸಂಸ್ಥೆಗಳ, ವಿಶೇಷವಾಗಿ ಸಹಕಾರ ಬ್ಯಾಂಕುಗಳ ಕೊರತೆ ಇನ್ನೂ ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಸುಮಾರು 100 ನಗರಗಳಲ್ಲಿ ಇನ್ನೂ ಪಟ್ಟಣ ಸಹಕಾರ ಬ್ಯಾಂಕುಗಳ ಸೇವೆ ಲಭ್ಯವಿಲ್ಲ ಎಂದು ಅವರು ಹೇಳಿದರು.
700ಕ್ಕೂ ಹೆಚ್ಚು ಜಿಲ್ಲೆಗಳಿರುವ ಭಾರತದಲ್ಲಿ ಕೇವಲ 350 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಮರ್ಪಕ ಭೌಗೋಳಿಕ ವ್ಯಾಪ್ತಿಯನ್ನು ಒದಗಿಸಲು ಕನಿಷ್ಠ 600 ಸಾಮರ್ಥ್ಯವುಳ್ಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸತೀಶ್ ಮರಾಠೆ ಪ್ರತಿಪಾದಿಸಿದರು. ಪಟ್ಟಣ ಸಹಕಾರ ಬ್ಯಾಂಕಿಂಗ್ ಕ್ಷೇತ್ರದ ವಿಸ್ತರಣೆಯೂ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದ ಮರಾಠೆ, ಭಾರತದ ಜನಸಂಖ್ಯೆ ಮತ್ತು ಆರ್ಥಿಕ ಅಗತ್ಯಗಳನ್ನು ಪರಿಗಣಿಸಿದರೆ ದೇಶದಲ್ಲಿ ಕನಿಷ್ಠ 2,500 ಪಟ್ಟಣ ಸಹಕಾರ ಬ್ಯಾಂಕುಗಳು ಇರಬೇಕು. ಸ್ಥಳೀಯವಾಗಿ ನಿರ್ವಹಿಸಲ್ಪಡುವ ಇಂತಹ ಬ್ಯಾಂಕುಗಳು ದುರ್ಬಲ ವರ್ಗಗಳು, ಸಣ್ಣ ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಹಾಗೂ ವಾಣಿಜ್ಯ ಬ್ಯಾಂಕುಗಳ ಸೇವೆಯಿಂದ ವಂಚಿತರಾಗಿರುವ ಜನರಿಗೆ ಪರಿಣಾಮಕಾರಿಯಾಗಿ ಹಣಕಾಸು ಸೇವೆಗಳನ್ನು ತಲುಪಿಸಲು ಅತ್ಯಂತ ಸೂಕ್ತವಾಗಿವೆ ಎಂದು ತಿಳಿಸಿದರು.
ಸಹಕಾರ ಬ್ಯಾಂಕುಗಳು ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಇನ್ನಷ್ಟು ಪರಿಣಾಮಕಾರಿ ಪಾತ್ರ ವಹಿಸಲು ಕಾನೂನು ಮತ್ತು ನಿಯಂತ್ರಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯವಾಗಿದೆ. ಜೊತೆಗೆ, ಸಹಕಾರ ಬ್ಯಾಂಕುಗಳಿಗೆ ಹೆಚ್ಚಿನ ಹಣಕಾಸು ಸಂಪನ್ಮೂಲಗಳು ಮತ್ತು ಅನುಕೂಲಕರ ನೀತಿ ವಾತಾವರಣವನ್ನು ಒದಗಿಸಬೇಕೆಂದು ಸತೀಶ್ ಮರಾಠೆ ಕರೆ ನೀಡಿದರು.


