ತಿರುವನಂತಪುರಂ: ದೇಶದ ಕಾರ್ಮಿಕ ಸಹಕಾರ ಚಳವಳಿಯ ಪ್ರಮುಖ ನಾಯಕರಲ್ಲೊಬ್ಬರಾದ, ಅಗ್ರ ಕಾರ್ಮಿಕ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಯುಎಲ್ಸಿಸಿಎಸ್ (ಉರಾಲುಂಗಲ್ ಕಾರ್ಮಿಕ ಒಪ್ಪಂದ ಸಹಕಾರ ಸಂಘ) ಅಧ್ಯಕ್ಷರೂ ಆಗಿದ್ದ ರಮೇಶನ್ ಪಾಲೇರಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಯಕೃತ್ತಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ಕೋಯಿಕ್ಕೋಡ್ನ ಯುಎಲ್ ಸೈಬರ್ ಪಾರ್ಕ್ನಲ್ಲಿ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ವಡಕರದಲ್ಲಿ ನಡೆಯಲಿದೆ.
1960ರಲ್ಲಿ ಜನಿಸಿದ್ದ ರಮೇಶನ್ ಪಾಲೇರಿ, ಭಾರತೀಯ ಸಹಕಾರ ಕ್ಷೇತ್ರದಲ್ಲಿ ದೂರದೃಷ್ಟಿಯ ನಾಯಕ, ಸಮರ್ಥ ಆಡಳಿತಗಾರ ಹಾಗೂ ಕಾರ್ಮಿಕ ಹಿತಾಸಕ್ತಿಗಳ ಪ್ರಬಲ ಪ್ರತಿಪಾದಕರಾಗಿ ಗುರುತಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಯುಎಲ್ಸಿಸಿಎಸ್ ಸಹಕಾರ ಮೌಲ್ಯಗಳನ್ನು ಅಡಿಪಾಯವಾಗಿಟ್ಟುಕೊಂಡು ಮೂಲಸೌಕರ್ಯ, ನಿರ್ಮಾಣ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ದೇಶದ ಅತ್ಯಂತ ಯಶಸ್ವಿ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ಬಂದಿತ್ತು. ಉದ್ಯೋಗ ಸೃಷ್ಟಿ, ಕಾರ್ಮಿಕರ ಕಲ್ಯಾಣ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ. ವಿಶೇಷವಾಗಿ, ಮಲಬಾರ್ ಪ್ರದೇಶದ ಮೊದಲ ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ (IT SEZ) ಆಗಿರುವ ಯುಎಲ್ ಸೈಬರ್ ಪಾರ್ಕ್ ಸ್ಥಾಪನೆಗೆ ಅವರು ತೆಗೆದುಕೊಂಡಿದ್ದ ನಾಯಕತ್ವವು ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದರೊಂದಿಗೆ ಪ್ರದೇಶದ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಿದ್ದವು. ರಮೇಶನ್ ಪಾಲೇರಿ ದೂರದೃಷ್ಟಿಯುಳ್ಳ ನಾಯಕರಾಗಿದ್ದು, ಸ್ಫೂರ್ತಿದಾಯಕ ಮಾರ್ಗದರ್ಶಕ ಹಾಗೂ ಸಹಕಾರ ತತ್ವಗಳಿಗೆ ಜೀವನವನ್ನೇ ಸಮರ್ಪಿಸಿದ್ದ ವ್ಯಕ್ತಿ ಎಂದು ಸಹಕಾರ ಕ್ಷೇತ್ರದ ಪ್ರಮುಖರು ಬಣ್ಣಿಸಲಾಗಿದೆ. ರಮೇಶನ್ ಪಾಲೇರಿ ಅವರ ನಿಧನವು ಭಾರತೀಯ ಸಹಕಾರ ಚಳವಳಿಗೆ ಹಾಗೂ ಕಾರ್ಮಿಕ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ಯುಎಲ್ಸಿಸಿಎಸ್ ಸಂಸ್ಥೆ ಹಾಗೂ ಸಹಕಾರ ವಲಯದ ಮುಖಂಡರು ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ.


