ಆರ್ಬಿಐ ಸಮಿತಿ ಸಭೆಯಲ್ಲಿ ದಕ್ಷಿಣ ಭಾರತದ ಸಹಕಾರಿ ಬ್ಯಾಂಕ್ಗಳ ಪ್ರಮುಖ ಆಕ್ಷೇಪ
ಬೆಂಗಳೂರು: ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳಿಗೆ (ಯುಸಿಬಿ) ಪ್ರಸ್ತಾಪಿಸಲಾಗಿರುವ ಮಾದರಿ ಬೈಲಾಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಮಿತಿ ದಕ್ಷಿಣ ಭಾರತದ ಸಹಕಾರಿ ಬ್ಯಾಂಕುಗಳು ಹಾಗೂ ಒಕ್ಕೂಟಗಳ ಪ್ರತಿನಿಧಿಗಳೊಂದಿಗೆ ಬೆಂಗಳೂರಿನ ಆರ್ಬಿಐ ಪ್ರಾದೇಶಿಕ ಕಚೇರಿಯಲ್ಲಿ ಗುರುವಾರ ಮಹತ್ವದ ಸಮಾಲೋಚನೆ ನಡೆಸಿತು. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಪ್ರತಿನಿಧಿಗಳು ಭಾಗವಹಿಸಿ ಪ್ರಸ್ತಾವಿತ ಮಾದರಿ ಬೈಲಾಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಆತಂಕಗಳನ್ನು ಮಂಡಿಸಿದರು.
https://chat.whatsapp.com/FCEnlTkAKCC0MGPhXtX4i4
ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿ ಏಕ-ರಾಜ್ಯ (Uni-State) ಮತ್ತು ಬಹು-ರಾಜ್ಯ (Multi-State) ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳಿಗೆ ಪ್ರತ್ಯೇಕ ಮಾದರಿ ಬೈಲಾಗಳ ಅಗತ್ಯ ಎಂಬ ವಿಚಾರ ಮುನ್ನೆಲೆಗೆ ಬಂತು. ಎರಡೂ ವರ್ಗದ ಬ್ಯಾಂಕುಗಳು ವಿಭಿನ್ನ ಕಾನೂನು ಚೌಕಟ್ಟಿನಡಿ ಕಾರ್ಯನಿರ್ವಹಿಸುವುದರಿಂದ ಒಂದೇ ಮಾದರಿ ಬೈಲಾಗಳನ್ನು ಕಡ್ಡಾಯವಾಗಿ ಅನ್ವಯಿಸುವುದು ಪ್ರಾಯೋಗಿಕವಾಗುವುದಿಲ್ಲ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಆಂಧ್ರಪ್ರದೇಶ ಸ್ಟೇಟ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ಸ್ ಆ್ಯಂಡ್ ಕ್ರೆಡಿಟ್ ಸೊಸೈಟೀಸ್ ಫೆಡರೇಷನ್ನ ಕಾರ್ಯದರ್ಶಿ ಹಾಗೂ NAFCUB ನಿರ್ದೇಶಕ ಚಲಸಾನಿ ರಾಘವೇಂದ್ರ ರಾವ್, ಪ್ರಸ್ತಾಪಿತ ಮಾದರಿ ಬೈಲಾಗಳನ್ನು ಕಡ್ಡಾಯಗೊಳಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಹಕಾರಿ ಬ್ಯಾಂಕುಗಳು ರಾಜ್ಯ ಅಥವಾ ಕೇಂದ್ರ ಸಹಕಾರ ಸಂಘಗಳ ಕಾಯ್ದೆಗಳ ಅಡಿಯಲ್ಲಿ ನೋಂದಾಯಿತ ಸ್ವಾಯತ್ತ ಸಂಸ್ಥೆಗಳಾಗಿವೆ. ಬ್ಯಾಂಕಿಂಗ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ Banking Regulation Act ಅನ್ನು ಸಹಕಾರಿ ಬ್ಯಾಂಕುಗಳಿಗೆ ವಿಸ್ತರಿಸಿರುವ ಉದ್ದೇಶವು ಮುಖ್ಯವಾಗಿ ಬ್ಯಾಂಕಿಂಗ್ ವ್ಯವಹಾರವನ್ನು ನಿಯಂತ್ರಿಸುವುದೇ ಹೊರತು, ಸಹಕಾರಿ ಸಂಸ್ಥೆಗಳ ಆಡಳಿತದ ಮೇಲೆಯೇ ಆರ್ಬಿಐಗೆ ಸಂಪೂರ್ಣ ನಿಯಂತ್ರಣ ನೀಡುವುದಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿ ಆರ್ಬಿಐ ನಿರ್ದೇಶನವನ್ನು ಕಡ್ಡಾಯವಾಗಿ ಬೈಲಾಗಳಲ್ಲಿ ಅಳವಡಿಸಬೇಕೆಂಬ ವ್ಯವಸ್ಥೆ ಜಾರಿಗೆ ಬಂದರೆ, ಸಹಕಾರಿ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಪ್ರಜಾಸತ್ತಾತ್ಮಕ ಸ್ವರೂಪ ದುರ್ಬಲವಾಗುವ ಸಾಧ್ಯತೆಯಿದೆ ಎಂದು ರಾವ್ ಎಚ್ಚರಿಸಿದರು. ಬೈಲಾಗಳು ಸದಸ್ಯ-ಷೇರುದಾರರ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳ ಪ್ರತಿಬಿಂಬವಾಗಿದ್ದು, ಸಂಬಂಧಿತ ಸಹಕಾರಿ ಕಾನೂನುಗಳ ಚೌಕಟ್ಟಿನಲ್ಲಿಯೇ ಅವುಗಳನ್ನು ನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.

ರಾಜ್ಯಗಳ ಅಧಿಕಾರಕ್ಕೆ ಗೌರವ ನೀಡುವಂತೆ ಮನವಿ
ಸಹಕಾರವು ಸಂವಿಧಾನದ ಏಳನೇ ಅನುಸೂಚಿಯ ರಾಜ್ಯ ಪಟ್ಟಿಯ Entry 32ರಲ್ಲಿ ಒಳಗೊಂಡಿರುವ ವಿಷಯವಾಗಿದ್ದು, 97ನೇ ಸಂವಿಧಾನ ತಿದ್ದುಪಡಿಯಿಂದ ರೂಪುಗೊಂಡಿರುವ ಕಾನೂನು ಮಿತಿಗಳನ್ನು ಗೌರವಿಸಬೇಕು ಎಂದು ಸಭೆಯಲ್ಲಿ ಪ್ರತಿನಿಧಿಗಳು ತಿಳಿಸಿದರು. ಮಾದರಿ ಬೈಲಾಗಳನ್ನು ಸಲಹಾತ್ಮಕ (Advisory) ಸ್ವರೂಪದಲ್ಲಿಯೇ ಇರಿಸಬೇಕು. ಅವುಗಳನ್ನು ಕಡ್ಡಾಯಗೊಳಿಸದೆ, ಸಂಬಂಧಿತ ಸಹಕಾರಿ ಸಂಸ್ಥೆಯ ಸಾಮಾನ್ಯ ಸಭೆಗೆ ತನ್ನ ಬೈಲಾಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ತಿದ್ದುಪಡಿ ಮಾಡುವ ಅಧಿಕಾರ ಮುಂದುವರಿಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು.
ದ್ವಂದ್ವ ನಿಯಂತ್ರಣದ ಬಗ್ಗೆ ಆತಂಕ
ಆರ್ಬಿಐ ನಿರ್ದೇಶನಗಳು ಮತ್ತು ಸಹಕಾರಿ ಕಾಯ್ದೆಗಳ ನಡುವೆ ಉಂಟಾಗಬಹುದಾದ ಸಂಘರ್ಷದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಹಕಾರಿ ಬ್ಯಾಂಕುಗಳು ಆರ್ಬಿಐ ಮತ್ತು ಸಹಕಾರ ಇಲಾಖೆಯ ದ್ವಂದ್ವ ನಿಯಂತ್ರಣಕ್ಕೆ (Dual Control) ಒಳಪಡುವ ಸಂದರ್ಭದಲ್ಲಿ ನಿಯಮಗಳ ಅನುಷ್ಠಾನದಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯನ್ನು ಪ್ರತಿನಿಧಿಗಳು ವಿವರಿಸಿದರು. ಇದರ ಜೊತೆಗೆ, ಸಹಕಾರಿ ಸಂಘಗಳ ನೋಂದಣಾಧಿಕಾರಿಗಳ (ಆರ್ಸಿಎಸ್) ಕಚೇರಿಗಳಿಂದ ಅಗತ್ಯ ಅನುಮೋದನೆ ಪಡೆಯುವಲ್ಲಿ ಆಗುತ್ತಿರುವ ವಿಳಂಬವೂ ಬ್ಯಾಂಕುಗಳ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಪ್ರತಿನಿಧಿಗಳು ಗಮನ ಸೆಳೆದರು.
ಶಾಶ್ವತ ಸಮಿತಿ ರಚನೆಗೆ ಪ್ರಸ್ತಾವ
ಆರ್ಬಿಐ, ಕೇಂದ್ರ ಸಹಕಾರ ಸಚಿವಾಲಯ, ಸಹಕಾರಿ ಸಂಘಗಳ ನೋಂದಣಾಧಿಕಾರಿ (RCS) ಅಧಿಕಾರಿಗಳು, NAFCUB ಹಾಗೂ ವಿವಿಧ ಸಹಕಾರಿ ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳನ್ನು ಒಳಗೊಂಡ ಶಾಶ್ವತ ಸ್ಟ್ಯಾಂಡಿಂಗ್ ಸಮಿತಿ ರಚಿಸಬೇಕು ಎಂಬ ಪ್ರಸ್ತಾವವನ್ನೂ ಸಭೆಯಲ್ಲಿ ಮುಂದಿಡಲಾಯಿತು. ಹೊಸ ಆರ್ಬಿಐ ನಿರ್ದೇಶನಗಳು ಅಥವಾ ನಿಯಮಗಳನ್ನು ಜಾರಿಗೆ ತರುವ ಮೊದಲು ಉಂಟಾಗಬಹುದಾದ ಕಾನೂನು ಮತ್ತು ಆಡಳಿತಾತ್ಮಕ ಸಂಘರ್ಷಗಳನ್ನು ಈ ಸಮಿತಿ ಪರಿಶೀಲಿಸಿ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು ಎಂದು ಪ್ರತಿನಿಧಿಗಳು ಸಲಹೆ ನೀಡಿದರು.
ಕರ್ನಾಟಕದ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಹಲವು ಪಟ್ಟಣ ಸಹಕಾರಿ ಬ್ಯಾಂಕುಗಳು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸಹಕಾರಿ ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.









