ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ: ಗ್ರಾಮದ ಎಂಟು ಸಾಧಕರಿಗೆ ಸನ್ಮಾನ
ಪುತ್ತೂರು: ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ₹1,32,30,718.91 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.14ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು.
https://chat.whatsapp.com/FCEnlTkAKCC0MGPhXtX4i4
ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ 3,398 ಸದಸ್ಯರು ಇದ್ದು, ₹3,61,18,065 ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ₹39,70,38,276.94 ಠೇವಣಿ ಇದ್ದು, ಸದಸ್ಯರಿಗೆ ವಿವಿಧ ರೀತಿಯಲ್ಲಿ ನೀಡಿರುವ ಸಾಲದ ಮೊತ್ತ ₹46,73,23,720 ಆಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ಸಂಘದಿಂದ ಸಲ್ಲತಕ್ಕ ಸಾಲದ ಮೊತ್ತ ₹17,89,87,761 ಆಗಿದೆ. ಸಂಘದ ಮೂಲಕ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣಗಳು, ಅಡುಗೆ ಅನಿಲ ಹಾಗೂ ಪಡಿತರ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಈ ವಿಭಾಗದಲ್ಲಿ ₹13,39,985.07 ವ್ಯಾಪಾರ ಲಾಭ ಗಳಿಸಲಾಗಿದೆ. ಸಂಘವು ಲೆಕ್ಕಪರಿಶೋಧನೆಯಲ್ಲಿ ‘ಎ’ ತರಗತಿ ಪಡೆದಿದೆ ಎಂದರು.
ಸಾಲ ಮರುಪಾವತಿಸದವರ ವಿರುದ್ಧ ಕಠಿಣ ಕ್ರಮ
ಸಂಘದ ಸದಸ್ಯರಿಗೆ ವಿವಿಧ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ. ಆದರೆ ಕೆಲವು ಸದಸ್ಯರಿಂದ ಸಾಲ ಮರುಪಾವತಿಯಾಗದಿರುವುದು ಗಮನಕ್ಕೆ ಬಂದಿದೆ. ಸಾಲ ಮರುಪಾವತಿಸದ 3–4 ಮಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಶಿಕುಮಾರ್ ರೈ ಎಚ್ಚರಿಕೆ ನೀಡಿದರು. ಸಂಘದ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರನ್ನು ಸದಸ್ಯರು ಚುನಾವಣೆಯ ಮೂಲಕ ಆಯ್ಕೆ ಮಾಡಿದ್ದಾರೆ. ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ ಎಂದ ಅವರು, ತಮ್ಮನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಈ ಬಾರಿ ರಾಜ್ಯದಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಸಂಸ್ಥೆಯಾಗಿದೆ ಎಂದೂ ಮಾಹಿತಿ ನೀಡಿದರು.

ಹೊಸ ಕಮರ್ಷಿಯಲ್ ಕಟ್ಟಡಕ್ಕೆ ಆದ್ಯತೆ
ಮಹಾಸಭೆಯಲ್ಲಿ ಸದಸ್ಯರು ಸಂಘದ ಲಾಭದ ಹಿನ್ನೆಲೆಯಲ್ಲಿ ಹೆಚ್ಚಿನ ಡಿವಿಡೆಂಡ್ ಹಾಗೂ ಸದಸ್ಯರಿಗೆ ಉಡುಗೊರೆ ನೀಡುವಂತೆ ಒತ್ತಾಯಿಸಿದರು. ಸದಸ್ಯ ಪ್ರಕಾಶ್ ರೈ ಅವರು ಈ ಬಾರಿ ಸಂಘ ಉತ್ತಮ ಲಾಭ ಗಳಿಸಿರುವುದರಿಂದ ಶೇ.16ರಷ್ಟು ಲಾಭಾಂಶ ನೀಡಬೇಕು ಹಾಗೂ ಸದಸ್ಯರಿಗೆ ಗಿಫ್ಟ್ ನೀಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಶಿಕುಮಾರ್ ರೈ, ಸಂಘದ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ತೆರವುಗೊಳಿಸಿ ಹೊಸ ಕಮರ್ಷಿಯಲ್ ಕಟ್ಟಡ ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ಕಟ್ಟಡ ನಿಧಿಗೆ ಹಣ ಮೀಸಲಿಡಬೇಕಾಗಿರುವುದರಿಂದ ಹೆಚ್ಚಿನ ಪ್ರಮಾಣದ ಡಿವಿಡೆಂಡ್ ನೀಡಲು ಸಾಧ್ಯವಾಗುತ್ತಿಲ್ಲ. ಸದಸ್ಯರು ಸಹಕರಿಸಬೇಕು ಎಂದರು. ಸದಸ್ಯ ದೇವಿಕಿಶೋರ್ ಕೋನಡ್ಕ ಅವರು ಹೊಸ ಕಮರ್ಷಿಯಲ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಪಡೆಯುವ ಸಾಧ್ಯತೆ ಪರಿಶೀಲಿಸಬೇಕು ಹಾಗೂ ಲಾಭಾಂಶದ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಸರ್ಕಾರದಿಂದ ಅನುದಾನ ಪಡೆಯುವುದು ಕಷ್ಟವಾಗಿದ್ದು, ಲಾಭದ ಹಣದಲ್ಲಿ ವಿವಿಧ ನಿಧಿಗಳಿಗೆ ನಿಗದಿತ ಪ್ರಮಾಣದ ಮೊತ್ತ ಮೀಸಲಾಗಬೇಕಿರುವುದರಿಂದ ಕಟ್ಟಡ ನಿಧಿಯ ಮೂಲಕವೇ ನಿರ್ಮಾಣ ಕಾರ್ಯ ಕೈಗೊಳ್ಳಬೇಕಾಗುತ್ತದೆ ಎಂದರು.

ಮಳೆಮಾಪನ ಸಲಕರಣೆ ದುರಸ್ತಿ ಮಾಡುವಂತೆ ಒತ್ತಾಯ
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಳೆ ಪ್ರಮಾಣ ದಾಖಲಿಸಲು ಬಳಸುವ ಮಳೆಮಾಪನ ಸಲಕರಣೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯ ಚಂದ್ರಶೇಖರ್ ರೈ ಬಾಲ್ಯೊಟ್ಟು ಸಭೆಯ ಗಮನಕ್ಕೆ ತಂದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಸಂಘದ ಕಚೇರಿಯ ಕ್ಯಾಶ್ ಕೌಂಟರ್ನಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತರಬೇಕು. ಕೆಲವೊಮ್ಮೆ ಸದಸ್ಯರು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಬೇಗ ಬಂದವರಿಗೆ ಬೇಗ ಹಣ ಸಿಗದ ಪರಿಸ್ಥಿತಿ ಇದೆ ಎಂದು ಚಂದ್ರಶೇಖರ್ ರೈ ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧ್ಯಕ್ಷರು ತಿಳಿಸಿದರು. ಕೆ.ಪಿ. ಭಟ್ ಕೋನಡ್ಕ ಸೇರಿದಂತೆ ಹಲವು ಸದಸ್ಯರು ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು.
2025-26ರ ಲೆಕ್ಕಪರಿಶೋಧನಾ ವರದಿ ಅನುಮೋದನೆ
ಮಹಾಸಭೆಯಲ್ಲಿ 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿಯನ್ನು ಪರಿಶೀಲಿಸಲಾಯಿತು. ಬಜೆಟ್ಗಿಂತ ಹೆಚ್ಚಿನ ಖರ್ಚಾಗಿರುವ ವಿವರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. 2025-26ನೇ ಸಾಲಿನ ನಿವ್ವಳ ಲಾಭದ ವಿಲೇವಾರಿ ಹಾಗೂ 2026-27ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದಿಸಲಾಯಿತು.


ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ರಂಗನಾಥ ರೈ
ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಂಗನಾಥ ರೈ ಗುತ್ತು ಮಾತನಾಡಿ, ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಮಹಾಸಭೆಯಲ್ಲಿಯೂ ಸಂಘಕ್ಕೆ ಪ್ರೋತ್ಸಾಹ ಬಹುಮಾನ ದೊರೆತಿದೆ ಎಂದರು. ಸಹಕಾರಿ ಸಂಘಕ್ಕೆ ಅದರದೇ ಆದ ಬೈಲಾ ಇದ್ದು, ಅದರಂತೆ ಸಾಮಾಜಿಕ ಕಾರ್ಯಗಳನ್ನೂ ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ವ್ಯವಹಾರದ ಜತೆಗೆ ಹಲವು ಜನಪರ ಕಾರ್ಯಗಳನ್ನು ಸಂಘ ನಡೆಸುತ್ತಿದೆ. ಮುಂದೆಯೂ ಸದಸ್ಯರು ಸಂಘಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಊರಿನ ಎಂಟು ಸಾಧಕರಿಗೆ ಸನ್ಮಾನ
ಮಹಾಸಭೆಯ ಅಂಗವಾಗಿ ಇರ್ದೆ-ಬೆಟ್ಟಂಪಾಡಿ ಗ್ರಾಮದ ಹಿರಿಯ ಹಾಗೂ ಕಿರಿಯ ಸೇರಿದಂತೆ ಎಂಟು ಮಂದಿ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಹಾಗೂ ಹಿರಿಯರಾದ ಗಣಪತಿ ಭಟ್ ಕೋನಡ್ಕ, ಮೋನಪ್ಪ ಗೌಡ ಮಿತ್ತಡ್ಕ, ಮಹಮ್ಮದ್ ಹಾಜಿ ಅಜ್ಜಿಕಲ್ಲು, ಡಾ.ವೇದಾವತಿ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಮುರಳೀಧರ ನಾಯಕ್ ನೆಲ್ಯಾರ್ಣೆ, ನಿವೃತ್ತ ಅಂಚೆಪಾಲಕ ನಾರಾಯಣ ನಾಯಕ್, ಝೀ ಕನ್ನಡದ ‘ಸರಿಗಮಪ’ ಖ್ಯಾತಿಯ ಸಮನ್ವಿ ರೈ ಮದಕ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಕೀರ್ತಿ ಗುಮ್ಮಟೆಗದ್ದೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ನೋಟಿಸ್ ಓದಿ ದಾಖಲಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ್, ಸಂಘದ ಉಪಾಧ್ಯಕ್ಷ ಹರೀಶ್ ಗೌಡ ಗುಮ್ಮಟೆಗದ್ದೆ ಹಾಗೂ ನಿರ್ದೇಶಕರಾದ ಶಂಭು ಭಟ್ ಡಿ., ಜಗನ್ನಾಥ ರೈ ಕೆ., ನಾಗರಾಜ ಕೆ., ದಿವಾಕರ ಬಲ್ಲಾಳ್ ಬಿ., ರಾಧಾಕೃಷ್ಣ ಭಟ್ ಕೆ., ಮೊಯಿದು ಕುಂಞ ಕೆ., ಪರಮೇಶ್ವರ ನಾಯಕ್, ನಿಖಿತಾ ಕೆ.ಯು., ನೀಲಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅತಿಥಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಹಿರಿಯ ಗುಮಾಸ್ತ ಆರ್.ಬಿ. ಸುವರ್ಣ ವಂದಿಸಿದರು. ಸದಸ್ಯ ಮಂಜುನಾಥ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.






