ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಆರೋಗ್ಯ ಸೇವಾ ಸಂಗಮದ ಸಮಾರೋಪ ಹಾಗೂ ಸಂಘದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಶ್ಲಾಘನೆ
ಮಂಗಳೂರು: ಸ್ಥಾಪನೆಯಾಗಿ 14 ವರ್ಷಗಳಲ್ಲಿ ಭಾರಿ ವೇಗದಲ್ಲಿ ಅಭಿವೃದ್ಧಿ ಸಾಧಿಸುವ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಪರಿವರ್ತನೆ ಮಾಡಬಹುದು ಎಂಬುದನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಜಿಲ್ಲೆಯಲ್ಲೂ ಆತ್ಮಶಕ್ತಿ ಸಹಕಾರ ಸಂಘಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಶ್ಲಾಘಿಸಿದರು.
https://chat.whatsapp.com/FCEnlTkAKCC0MGPhXtX4i4
ಮಂಗಳೂರಿನ ಪಡೀಲಿನ ಬೈರಾಡಿ ಕೆರೆ ಸಮೀಪದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿ ಆತ್ಮಶಕ್ತಿ ಸೌಧದಲ್ಲಿ ಭಾನುವಾರ ನಡೆದ ಆರೋಗ್ಯ ಸೇವಾ ಸಂಗಮದ ಸಮಾರೋಪ ಹಾಗೂ ಸಂಘದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ತುಳುನಾಡಿನ ಹಲವಾರು ಸಹಕಾರಿ ಸಂಘಗಳು ಸ್ಥಾಪನೆಯಾಗಿ 50 ವರ್ಷ ಕಳೆದರೂ ದುಡಿಯುವ ಬಂಡವಾಳ, ಠೇವಣಾತಿ ಸಂಗ್ರಹ, ಗಳಿಸಿದ ಲಾಭ, ಮಾಡಿದ ಶಾಖೆಗಳ ಸಂಖ್ಯೆ, ನೀಡಿದ ಡಿವಿಡೆಂಡ್ಗಳನ್ನು ತುಲನೆ ಮಾಡಿದರೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು 14 ವರ್ಷಗಳಲ್ಲಿ ಈ ವಿಷಯಗಳಲ್ಲಿ ಮಾಡಿದ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಗಮನಿಸಬೇಕು. ಆದರೆ ಚಿತ್ತರಂಜನ್ ಬೋಳಾರ್ ಅವರು ಕೇವಲ ಆತ್ಮಶಕ್ತಿಯ ಬ್ಯಾಂಕ್ ಶಾಖೆಗಳನ್ನು ವಿಸ್ತರಿಸುತ್ತ ಹೋಗಿಲ್ಲ, ಸಹಕಾರಿ ಕ್ಷೇತ್ರದಲ್ಲಿ ಯಾವೆಲ್ಲ ವ್ಯವಸ್ಥೆಯನ್ನು ಜೋಡಿಸಬಹುದೋ ಅದನ್ನು ಮಾಡಿಕೊಂಡು ಸಾಧಿಸಿ ತೋರಿಸಿದ್ದಾರೆ ಎಂದು ವೇದವ್ಯಾಸ್ ಕಾಮತ್ ಹೇಳಿದರು. ಸಹಕಾರಿ ಸಂಘವೊಂದು ಹೇಗೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎಂಬುದನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಾಡಿ ತೋರಿಸಿದೆ. ಇದರ ಜೊತೆಗೆ ಹತ್ತು ಹಲವಾರು ಸಂಘ ಸಂಸ್ಥೆಗಳೂ ಈ ಕಾರ್ಯದಲ್ಲಿ ಜೋಡಿಸಿಕೊಂಡಿವೆ. ಬೇರೆ ಬೇರೆ ಕಡೆಯ ಜನರನ್ನು ಇಲ್ಲಿಗೆ ಕರೆಸಿ, ಹಲವಾರು ಸಂಘ ಸಂಸ್ಥೆಗಳನ್ನು ಜೊತೆ ಸೇರಿಸಿಕೊಂಡು ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಚಿತ್ತರಂಜನ್ ಬೋಳಾರ್ ಅವರು, ಜನರಿಗೆ ಬ್ಯಾಂಕಿಂಗ್ನ ಪರಿಚಯವನ್ನು ಮಾಡಿಕೊಡುವ ದೂರದೃಷ್ಟಿಯ ಚಿಂತನೆ ವ್ಯಕ್ತಪಡಿಸಿದ್ದಾರೆ. ಆತ್ಮಶಕ್ತಿ ಸಹಕಾರ ಸಂಘವು ಆತ್ಮಶಕ್ತಿ ಸೌಧ ಹಾಗೂ 33 ಶಾಖೆಗಳನ್ನು ಹೊಂದಿದೆ. ಸ್ವಂತ ಕಚೇರಿ ಮಾಡುವಾಗ ಆ ಆರ್ಥಿಕ ವರ್ಷ ದಲ್ಲಿ ಲಾಭ ಗಳಿಕೆಯ ಪ್ರಮಾಣ ಕಡಿಮೆಯಾಗಬಹುದು. ಆದರೆ ಲಾಭ ಕಡಿಮೆಯಾಗಬಾರದು ಎಂಬ ದೃಷ್ಟಿಯಿಂದ ಹೆಚ್ಚು ಠೇವಣಿ ಸಂಗ್ರಹಿಸಿ ಎರಡರಲ್ಲೂ ಸಮತೋಲನ ಕಾಯ್ದುಕೊಂಡು ಬರುತ್ತಿರುವುದು ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ನೇತೃತ್ವದ ಆತ್ಮಶಕ್ತಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಬಹುದೊಡ್ಡ ಸಾಧನೆ. 14 ವರ್ಷ ಗಳಲ್ಲಿ ಚಿತ್ತರಂಜನ್ ಬೋಳಾರ್ ಅವರ ತಂಡ ಮಾಡಿರುವ ಸಾಧನೆ ಬಹಳ ದೊಡ್ಡದು. ಇವರ ಜೊತೆಗೆ ಆತ್ಮಶಕ್ತಿ ಸಹಕಾರಿ ಸಂಘದ ಸಿಬ್ಬಂದಿಗಳೂ ಸದಾಕಾಲ ನಗುಮುಖದ ಸೇವೆ ಒದಗಿಸುತ್ತ ಸಂಘದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹೀಗೆಯೇ ಮುಂದುವರಿದು 33 ಶಾಖೆಗಳು 133 ಶಾಖೆಗಳು ಆಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರು ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಸರ್ವರನ್ನು ಅಭಿನಂದಿಸಿ ಸಂಘದ ಆಡಳಿತ ಮಂಡಳಿಯ ಕಾರ್ಯಯೋಜನೆಯಿಂದ, ಸಿಬ್ಬಂದಿಗಳ ಶ್ರಮದಿಂದ, ಸಲಹಾ ಸಮಿತಿ ಸದಸ್ಯರು ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಠೇವಣಿಗಳ ಸಂಗ್ರಹಣೆಯಲ್ಲಿ, ಸಾಲ ನೀಡುವಿಕೆಯಲ್ಲಿ ಹಾಗೂ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಸಂಘದಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ಪಡೆದು ಇದರ ಸದುಪಯೋಗವನ್ನು ಸದಸ್ಯರು ಹಾಗೂ ಸಾರ್ವಜನಿಕರು ಪಡೆಯಬೇಕಾಗಿ ವಿನಂತಿಸಿದರು. ಶಾಖೆಯ ಪ್ರಗತಿಗೆ ಕಾರಣರಾದ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು.

ಈ ಸಮಾರಂಭದಲ್ಲಿ ಸಂಘದ ಶಾಖೆಗಳ ವಿವಿಧ ಸೇವೆಯ ಪ್ರಗತಿಗೆ ಕಾರಣಕರ್ತರಾದ ಶಾಖೆಯ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸಾಧನಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಸಂಘವು ನಡೆಸಿರುವ 100 ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿರುವ ವೈದ್ಯರಿಗೆ, ಆರೋಗ್ಯ ಸೇವಾ ಕಾರ್ಯಕರ್ತರನ್ನು ಈ ಸಮಾರೋಪ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಆತ್ಮಶಕ್ತಿ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ನಿರ್ದೇಶಕರಾದ ಶ್ರೀ ಬಿ.ಪರಮೇಶ್ವರ ಪೂಜಾರಿ, ಶ್ರೀ ಆನಂದ ಎಸ್. ಕೊಂಡಾಣ, ಶ್ರೀ ಸೀತಾರಾಮ ಎನ್., ಶ್ರೀ ರಮಾನಾಥ ಸನಿಲ್, ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀ ದಿವಾಕರ್ ಬಿ.ಪಿ., ಶ್ರೀ ಗೋಪಾಲ್ ಎಂ., ಶ್ರೀಮತಿ ಚಂದ್ರಾವತಿ, ಶ್ರೀಮತಿ ಉಮಾವತಿ, ಮೊದಲಾದವರು ಉಪಸ್ಥಿತರಿದ್ದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯಾ ವಿಜಯ್ ರವರು ವಂದಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಶ್ರೀ ವಿಶ್ವನಾಥ ರೆಂಜಾಳ ಹಾಗೂ ಸಂಘದ ಶಾಖಾಧಿಕಾರಿ ಶ್ರೀಮತಿ ಧನಲಕ್ಷ್ಮಿ ರವರು ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

