ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರತಿಷ್ಟಿತ, ರಾಜ್ಯ ಪ್ರಶಸ್ತಿ ವಿಜೇತ ಸಹಕಾರ ಸಂಸ್ಥೆ ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾಗಿ ಯುವ ಸಹಕಾರಿ ಜಿ.ವೆಂಕಟೇಶ್ ಭಾಸ್ಕರ್ ಶೆಣೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಸಂಘದ ಎಚ್.ಎಲ್. ಕಾಮತ್ ಆಡಳಿತ ಮಂಡಳಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿ.ಎಮ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ವೆಂಕಟೇಶ್ ಭಾಸ್ಕರ ಶೆಣೈಯವರು ಕಳೆದ 10 ವರ್ಷಗಳಿಂದ ಸಹಕಾರಿಯ ನಿರ್ದೇಶಕರಾಗಿ, ಕಳೆದ 18 ತಿಂಗಳುಗಳಿಂದ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಸಂಘದ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಸುಂದರ ಕಟ್ಟಡವನ್ನು ಸಂಘಕ್ಕೆ ನಿರ್ಮಿಸಿಕೊಡುವುದರಲ್ಲಿ ಮಹತ್ವದ ಪಾತ್ರ ವಹಿಸಿರುತ್ತಾರೆ.
ಆಡಳಿತ ಮಂಡಳಿ ಸದಸ್ಯರ ಸಹಕಾರದೊಂದಿಗೆ ಸಂಘದ ಠೇವಣಿಯನ್ನು 100 ಕೋಟಿಯ ಗಡಿ ದಾಟಿಸಿದ್ದು, ಪ್ರತಿ ತಿಂಗಳು ಆಧಾರ್ ಕಾರ್ಡ್ ಪರಿಷ್ಕರಣೆ ಶಿಬಿರ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿರುವುದು ಇವರ ಸಾಧನೆಗಳಲ್ಲಿ ಕೆಲವು ಮಾತ್ರ.
ಸಂಘದ ಸಾಧನೆಯನ್ನು ಪರಿಗಣಿಸಿ ಕಳೆದ ನವಂಬರ್ ತಿಂಗಳು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಘದ ಉಪಾಧ್ಯಕ್ಷರಾಗಿ ಜಿ.ವಿಶ್ವನಾಥ ಆಚಾರ್ಯ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಸಂಘದ ನಿರ್ದೇಶಕರಾಗಿ, 10 ವರ್ಷಗಳಿಂದ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
ಸಭೆಯಲ್ಲಿ ನಿರ್ದೇಶಕರಾದ ಎನ್. ಮಾಧವ ಕಿಣಿ, ಕೆ. ಪರಮೇಶ್ವರ ನಾಯಕ್, ರಾಮನಾಥ್ ಚಿತ್ತಾಲ್, ನಾಗಪ್ರಸಾದ್ ಪೈ ಎಮ್ ಜಿ., ನಗರ್ ಅಶ್ವಿನ್ ಕುಮಾರ್ ನಾಯಕ್, ಗೀತಾ ಜಿ ನಾಯಕ್, ದೀಪಲಕ್ಷ್ಮಿ ನಾಯಕ್, ಮಹಾಬಲ ಪೂಜಾರಿ, ಕಿರಣ್ ಪಿಲಿಪ್ ಪಿಂಟೋ ಹಾಗೂ ಜಿ. ಸುರೇಶ್ ಹಾಜರಿದ್ದರು.
ಚುನಾವಣೆ ಪ್ರಕ್ರಿಯೆ ಯನ್ನು ಯಶಸ್ವಿಯಾಗಿ ನಿರ್ವಹಿಸಿದ ರಿಟರ್ನಿಂಗ್ ಅಧಿಕಾರಿ ಸುನಿಲ್ ಕುಮಾರ್ ಸಿ ಎಮ್ ಅವರನ್ನು ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಹಿರಿಯ ಸಹಕಾರಿಗಳು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಎಚ್. ಗಣೇಶ್ ಕಾಮತ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

