12% ಡಿವಿಡೆಂಡ್ ವಿತರಣೆ: ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಘೋಷಣೆ
ಮಂಗಳೂರು: ಗುರುಪುರ ಕೈಕಂಬದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಫಲ ಸೌಹಾರ್ದ ಸಹಕಾರಿ ಸಂಘವು 82.85 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 12% ಡಿವಿಡೆಂಡ್ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಗುರುಪುರ ಕೈಕಂಬದ ಮಾತೃಭೂಮಿ ಗ್ರ್ಯಾಂಡ್ ಗ್ಯಾಲಕ್ಸಿಯಲ್ಲಿ ಭಾನುವಾರ ಜರುಗಿದ ಸಂಘದ ಆರನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಐದು ವರ್ಷಗಳ ಅವಧಿಯಲ್ಲಿ ಐದು ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ 3.08 ಕೋಟಿ ಪಾಲು ಬಂಡವಾಳವಿದ್ದು, 29.42 ಕೋಟಿ ರೂ. ಡೆಪಾಸಿಟ್ ಇದೆ. 26.13 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಆನೇಕಲ್ ಗೋಪಾಲ್ ಮತ್ತು ಪುಷ್ಪಾ ಗೋಪಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಸಿಬ್ಬಂದಿಗಳಾದ ಸುಕೇಶ್, ಹರ್ಷಿತಾ, ಹಿತಾಕ್ಷಿ, ನಿಶಾ ಪ್ರಾರ್ಥಿಸಿದರು. ನಿರ್ದೇಶಕರಾದ ಮಹಾಬಲ ಅಡ್ಯಾರ್ ಸ್ವಾಗತಿಸಿದರು. ಸಂಘದ ಸಿಇಒ ಪ್ರಮೋದ್ ವಾರ್ಷಿಕ ವರದಿ ವಾಚಿಸಿದರು. ಪ್ರಕಾಶ್ ಹೊಸಬೆಟ್ಟು, ರವೀಂದ್ರ ಸಪಲ್ಯ ಸದಸ್ಯರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸುಂದರ್ ಶೆಟ್ಟಿ, ಪ್ರಕಾಶ್ ಹೊಸಬೆಟ್ಟು, ಚಂದ್ರಶೇಖರ್ ಎಡಪದವು, ಪದ್ಮನಾಭ ಪಜೀರು, ಯು.ಬಿ ವಿಜಯಕುಮಾರ್ ಪ್ರಶ್ನೆಗಳನ್ನು ಕೇಳಿದರು. ನಿರ್ದೇಶಕರ ಪರವಾಗಿ ಮೋಹಿನಿ ಎಚ್ ಅಭಿಪ್ರಾಯ ಮಂಡಿಸಿದರು. ಡೆಡ್ಲಿಫ್ಟ್ ವಿಶ್ವಚಾಂಪಿಯನ್ ಆದರ್ಶ್ ಬಿ.ಅತ್ತಾವರ ಅವರನ್ನು ಸನ್ಮಾನಿಸಲಾಯಿತು. ಮಾಜಿ ನಿರ್ದೇಶಕ ರಮೇಶ್ ಎಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹರಿದಾಸ್ ಯು ವಂದಿಸಿದರು.

