ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯ
ಮಂಗಳೂರು: ದೇಶದ ಸಂವಿಧಾನ ಪ್ರತಿಯೋರ್ವ ನಾಗರಿಕನಿಗೂ ಅವರದ್ದೇ ಆದ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಅವರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಕೂಡಾ ನಿಭಾಯಿಸುವುದು ಅಗತ್ಯವಾಗಿದೆ. ಹಕ್ಕು ಮತ್ತು ಜವಾಬ್ದಾರಿಯಿಂದ ಕೂಡಿದ ಕರ್ತವ್ಯಗಳು ನಾಣ್ಯದ ಎರಡು ಮುಖಗಳು ಇದ್ದಂತೆ. ಇದನ್ನು ದೇಶದ ನಾಗರಿಕರು ಅರಿತರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಮಂಗಳೂರು ಇದರ ಪ್ರಧಾನ ಕಚೇರಿಯಲ್ಲಿ ನಡೆದ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
https://chat.whatsapp.com/EbVKVnWB6rlHT1mWtsgbch


ಮುಂದುವರಿದು ಮಾತನಾಡಿದ ಅವರು ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ದೀರ್ಘ ಸಮಯದ ಹೋರಾಟದ ಬಳಿಕ ನಮಗೆ ಸ್ವಾತಂತ್ರ್ಯ ಲಭಿಸಿದೆ. ನಮಗೆ ಲಭಿಸಿದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸದೆ ದೇಶ ರಕ್ಷಣೆಯ ಕೈಂಕರ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು. ಸಹಕಾರ ಕ್ಷೇತ್ರದಿಂದ ದೇಶದ ಜಿಡಿಪಿಗೆ ದೊಡ್ಡ ಪ್ರಮಾಣದ ಕೊಡುಗೆ ಲಭಿಸುತ್ತಿದ್ದು, ಅದನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು. ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದ್ದು, ವಿಶ್ವಗುರು ಸ್ಥಾನದಲ್ಲಿ ನಾವು ಭಾರತವನ್ನು ಕಾಣುವ ದಿನ ದೂರವಿಲ್ಲ. ದೇಶದ ಸ್ವಾತಂತ್ರ್ಯದ ರಕ್ಷಣೆ ಎಂದರೆ ಗಡಿಯಲ್ಲಿ ಯುದ್ಧ ಮಾಡಿ ದೇಶವನ್ನು ಕಾಯುವುದು ಮಾತ್ರವಲ್ಲ, ದೇಶದ ಉತ್ತಮ ನಾಗರಿಕರಾಗಿ ನೈಸರ್ಗಿಕ ಸಂಪತ್ತನ್ನು ಅನಗತ್ಯವಾಗಿ ಬಳಸದೆ ಪೋಲು ಮಾಡುವುದನ್ನು ಕಡಿಮೆ ಮಾಡುವುದು ಕೂಡ ದೇಶಕ್ಕೆ ನಾವು ನೀಡುವ ಕೊಡುಗೆಯೇ ಆಗಿದೆ ಎಂದು ಬಣ್ಣಿಸಿದರು.


ನಿವೃತ್ತ ಯೋಧ ಟಿ.ಕೆ ಪುರುಷೋತ್ತಮ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಸರ್ಕಾರ ಕೂಡ ರಕ್ಷಣಾ ವ್ಯವಸ್ಥೆಗೆ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದೆ. ಹೆಚ್ಚು ಹೆಚ್ಚು ಯುವಕರು ದೇಶ ರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಅಗ್ನಿವೀರ್, ಅಗ್ನಿಪಥ ಇಂಥ ವ್ಯವಸ್ಥೆಗಳನ್ನು ಸರ್ಕಾರ ಪರಿಚಯಿಸಿದೆ ಎಂದು ಹೇಳಿದರು.
ಶ್ರೀ ವಿನಾಯಕ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿಯಾದ ಶ್ರೀ ಉಮೇಶ್ ಆಚಾರ್ಯ ಪಾಂಡೇಶ್ವರ ಧ್ವಜಾರೋಹಣವನ್ನು ನೆರವೇರಿಸಿದರು. ಬ್ಯಾಂಕಿನ ಗ್ರಾಹಕರಾದ ಶ್ರೀ ರಾಜೇಶ್ ಬಾಳಿಗಾ ಶ್ರೀ ರಾಜೇಂದ್ರ ಪೇಜಾವರ, ಶ್ರೀ ಮ. ವೆಂಕಟೇಶ್ ಆಚಾರ್ಯ, ಶ್ರೀ ಕಾಳಿಕಾ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಗದೀಶ್ ಸಿದ್ಧಕಟ್ಟೆ, ನಿರ್ದೇಶಕರಾದ ಶ್ರೀ ಹರಿಪ್ರಸಾದ್, ಶ್ರೀ ಭರತ್ ನಿಡ್ಪಳ್ಳಿ, ಶ್ರೀಮತಿ ರೇಷ್ಮಾ ಚಂದನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಸಂತ ಅಡ್ಯಂತಾಯ ಮುಂತಾದವರು ಭಾಗವಹಿಸಿದ್ದರು.
ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಸಂತ ಅಡ್ಯಂತಾಯ ಸ್ವಾಗತಿಸಿದರು. ಬ್ಯಾಂಕಿನ ಮಾರಾಟಾಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


