₹484.78 ಕೋಟಿ ವಹಿವಾಟು, ₹54.25 ಲಕ್ಷ ಲಾಭ; ಶೇ.97.5ರಷ್ಟು ಸಾಲ ವಸೂಲಿ
ಹಳೆಯಂಗಡಿ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯರಿಗೆ ಶೇ.9.5ರಷ್ಟು ಡಿವಿಡೆಂಡ್ ನೀಡಲು ಘೋಷಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾರ್ಡ್ ಮಾತನಾಡಿ, 2025-26ನೇ ಸಾಲಿನಲ್ಲಿ ಸೊಸೈಟಿ ₹484.78 ಕೋಟಿ ವಹಿವಾಟು ನಡೆಸಿದ್ದು, ₹54.25 ಲಕ್ಷ ಲಾಭ ಗಳಿಸಿದೆ. ಪ್ರಸ್ತುತ ₹70 ಲಕ್ಷ ಪಾಲು ಬಂಡವಾಳ ಹೊಂದಿದ್ದು, 3,184 ಸದಸ್ಯರನ್ನು ಹೊಂದಿದೆ. ಒಟ್ಟು ₹44.93 ಕೋಟಿ ಠೇವಣಿ ಸಂಗ್ರಹವಾಗಿದ್ದು, ₹37 ಕೋಟಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.97.5ರಷ್ಟಿದ್ದು, ಈ ಸಾಲಿನಲ್ಲಿಯೂ ಸೊಸೈಟಿಗೆ ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆ ದೊರೆತಿದೆ ಎಂದು ಹೇಳಿದರು.

ಎಚ್.ನಾರಾಯಣ ಸನಿಲ್ ಮರಣೋತ್ತರ ನಿಧಿ
ಸೊಸೈಟಿಯ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಗೆ ನೆರವಾಗುವ ಉದ್ದೇಶದಿಂದ ‘ಎಚ್.ನಾರಾಯಣ ಸನಿಲ್ ಮರಣೋತ್ತರ ನಿಧಿ’ ಸ್ಥಾಪಿಸಲಾಗಿದೆ. ಈ ನಿಧಿಯ ಮೂಲಕ ಸದಸ್ಯರ ಮರಣದ ಸಂದರ್ಭದಲ್ಲಿ ₹10,000 ನೆರವು ನೀಡಲಾಗುವುದು ಎಂದು ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ಘೋಷಿಸಿದರು.
ಉಡುಪಿಯಲ್ಲಿ ಹೊಸ ಶಾಖೆ
ಪ್ರಸ್ತುತ ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ ಹಾಗೂ ಮೂಡುಬಿದಿರೆಗಳಲ್ಲಿ ಸೊಸೈಟಿಯ ನಾಲ್ಕು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ಹಂತದಲ್ಲಿ ಉಡುಪಿಯಲ್ಲಿ ಹೊಸ ಶಾಖೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ವಸಂತ್ ಬೆರ್ನಾರ್ಡ್ ತಿಳಿಸಿದರು. ಸೊಸೈಟಿಯ ಈ ಸಾಧನೆಗೆ ನಿರ್ದೇಶಕರ ಮಾರ್ಗದರ್ಶನ, ಸದಸ್ಯರು ಹಾಗೂ ಗ್ರಾಹಕರ ಸಹಕಾರ ಮತ್ತು ಸಿಬ್ಬಂದಿಯ ನಿರಂತರ ಪರಿಶ್ರಮ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರಿಗೆ ಸನ್ಮಾನ
ಮಹಾಸಭೆಯ ಅಂಗವಾಗಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಪ್ರಿಯದರ್ಶಿನಿ ಸ್ವಸಹಾಯ ಸಂಘಗಳ ಪೈಕಿ ಉತ್ತಮ ಸಾಧನೆ ಮಾಡಿದ ಎರಡು ಸ್ವಸಹಾಯ ಸಂಘಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸೊಸೈಟಿಯ ನಿರ್ದೇಶಕರಾದ ಡಾ. ಶೆರಿಲ್ ಅಯೋನ ಐಮನ್ ಅವರು ಪಿಎಚ್ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ವಿಜಯ್ ಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈಕೃಷ್ಣ ಕೋಟ್ಯಾನ್, ಡಾ.ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್. ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜೀಯಾ ಬಾನು ಹಾಗೂ ಕರಿಯ ಕಾಡಿಗ ಉಪಸ್ಥಿತರಿದ್ದರು.
ಪಡುಬಿದ್ರೆ ಶಾಖೆಯ ಸಿಬ್ಬಂದಿ ರಕ್ಷಿತ್ ಪ್ರಾರ್ಥನೆ ನೆರವೇರಿಸಿದರು. ಕಿನ್ನಿಗೋಳಿ ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು ಹಿರಿಯ ಶಾಖಾ ಪ್ರಬಂಧಕ ಮೋಹನದಾಸ್ ನಿರ್ವಹಿಸಿದರು. ವಿದ್ಯಾರ್ಥಿಗಳ ಗೌರವಾರ್ಪಣೆ ಕಾರ್ಯಕ್ರಮವನ್ನು ಮೂಡುಬಿದಿರೆ ಶಾಖಾ ಪ್ರಬಂಧಕಿ ಅಭಿಷ್ಟಾ ಕುಮಾರಿ ಹಾಗೂ ಪಡುಬಿದ್ರೆ ಶಾಖಾ ಪ್ರಬಂಧಕಿ ಅಂಜಲಿ ಉಳ್ಳಾಲ್ ಎಸ್. ನಿರ್ವಹಿಸಿದರು. ಸ್ವಸಹಾಯ ಸಂಘಗಳ ಪದಾಧಿಕಾರಿಗಳ ಗೌರವಾರ್ಪಣೆ ಕಾರ್ಯಕ್ರಮವನ್ನು ಹಳೆಯಂಗಡಿ ಶಾಖಾ ಪ್ರಬಂಧಕಿ ಪ್ರಜ್ಞಾಶ್ರೀ ನಡೆಸಿಕೊಟ್ಟರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ಸ್ವಾಗತಿಸಿದರು. ಲೆಕ್ಕಾಧಿಕಾರಿ ಲೋಲಾಕ್ಷಿ ವಂದಿಸಿದರು.


