ಐದು ಶಾಖೆಗಳೂ ಲಾಭದಲ್ಲಿ; ಆರೋಗ್ಯ, ಶಿಕ್ಷಣ, ಸಾಹಿತ್ಯ ಹಾಗೂ ಸೈನಿಕರ ಕಲ್ಯಾಣಕ್ಕೆ ಆದ್ಯತೆ
ಮಂಗಳೂರು: ಹಂಪನಕಟ್ಟೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಂಗಳೂರಿನ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಸೊಸೈಟಿಯು ಸೆಪ್ಟೆಂಬರ್ 6ರಂದು ಪದವಿನಂಗಡಿಯಲ್ಲಿ ತನ್ನ 6ನೇ ಶಾಖೆಯನ್ನು ಆರಂಭಿಸಲಿದೆ. ಶ್ರೀಶಾ ಸೌಹಾರ್ದ ಸೊಸೈಟಿಯು ಪ್ರಸ್ತುತ ಐದು ಶಾಖೆಗಳ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದು, ಶಿಸ್ತುಬದ್ಧ ಹಾಗೂ ಪಾರದರ್ಶಕ ವ್ಯವಹಾರದ ಮೂಲಕ ಗ್ರಾಹಕರ ವಿಶ್ವಾಸ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.
https://chat.whatsapp.com/FCEnlTkAKCC0MGPhXtX4i4
ಪದವಿನಂಗಡಿ ಹಾಗೂ ಕಾವೂರು ಭಾಗದ ಸದಸ್ಯರ ಬಹುದಿನಗಳ ಬೇಡಿಕೆ ಹಾಗೂ ಒತ್ತಾಸೆಯ ಹಿನ್ನೆಲೆಯಲ್ಲಿ ಇದೀಗ ಆರನೇ ಶಾಖೆ ಆರಂಭಿಸಲಾಗುತ್ತಿದೆ. ಪದವಿನಂಗಡಿಯ ಏರ್ಪೋರ್ಟ್ ರಸ್ತೆಯಲ್ಲಿರುವ ‘ಸನ್ನಿಧಿ ಎನ್ಕ್ಲೇವ್’ನ ಮೊದಲನೇ ಮಹಡಿಯಲ್ಲಿ, ಇತ್ತೀಚೆಗೆ ಖರೀದಿಸಿರುವ ಸುಮಾರು 1,500 ಚದರ ಅಡಿ ವಿಸ್ತೀರ್ಣದ ಸ್ಥಳದಲ್ಲಿ ನೂತನ ಶಾಖೆ ಕಾರ್ಯಾರಂಭ ಮಾಡಲಿದೆ. ಶ್ರೀಶಾ ಸೌಹಾರ್ದ ಸೊಸೈಟಿ ಆರಂಭವಾಗಿ ಏಳು ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ 6ನೇ ಶಾಖೆಯ ಉದ್ಘಾಟನೆ ನಡೆಯುತ್ತಿರುವುದು ಸಂಸ್ಥೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ವಿಶೇಷವೆಂದರೆ, ಸಂಸ್ಥೆಯ ಪ್ರಸ್ತುತ ಐದು ಶಾಖೆಗಳೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪದವಿನಂಗಡಿಯಲ್ಲಿ ಹೊಸ ಶಾಖೆ ಆರಂಭವಾಗುವುದರಿಂದ ಈ ಭಾಗದ ಸದಸ್ಯರು ಹಾಗೂ ಗ್ರಾಹಕರಿಗೆ ಶ್ರೀಶಾ ಸೌಹಾರ್ದ ಸೊಸೈಟಿಯ ಸೇವೆಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ. ಸಂಸ್ಥೆಯ ವಿಸ್ತರಣೆಯೊಂದಿಗೆ ಗ್ರಾಹಕ ಸ್ನೇಹಿ ಹಾಗೂ ಪಾರದರ್ಶಕ ಸಹಕಾರಿ ಸೇವೆಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶವನ್ನು ಶ್ರೀಶಾ ಸೌಹಾರ್ದ ಸೊಸೈಟಿ ಹೊಂದಿದೆ.
ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ
ವ್ಯವಹಾರದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಿಗೂ ಶ್ರೀಶಾ ಸೌಹಾರ್ದ ಸೊಸೈಟಿ ವಿಶೇಷ ಆದ್ಯತೆ ನೀಡುತ್ತಿದೆ. ಸಂಸ್ಥೆಯು ವಾರ್ಷಿಕವಾಗಿ ಗಳಿಸುವ ಲಾಭದ ಗಮನಾರ್ಹ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ. ಮುಖ್ಯವಾಗಿ ಆರೋಗ್ಯ, ಶಿಕ್ಷಣ ಹಾಗೂ ಸಾಹಿತ್ಯ ಪ್ರಚಾರ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕಲ್ಯಾಣಕ್ಕೂ ಸಂಸ್ಥೆ ನೆರವಿನ ಹಸ್ತ ಚಾಚುತ್ತಿದೆ.









