‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಪುಸ್ತಕ ಬಿಡುಗಡೆ ಸಮಾರಂಭದ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತ
ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ಮಂಗಳೂರು ಪ್ರಕಟಿಸಿರುವ ಚಿಂತಕರು ಹಾಗೂ ಶಿಕ್ಷಕರಾದ ಅರವಿಂದ ಚೊಕ್ಕಾಡಿ ರಚಿಸಿರುವ ‘ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಕೆ. ಶಿವರಾಮ ಕಾರಂತ ಸಭಾಭವನದಲ್ಲಿ ಭಾನುವಾರ ಜರುಗಿತು. ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಸಹಕಾರ ಸಂಸ್ಥೆಗಳಲ್ಲಿ ಆಯಾ ಸಂಸ್ಥೆಗಳ ಸಂಸ್ಥಾಪಕರ ದಿನ ಆಚರಣೆಗೆ ಸೂಕ್ತ ನಿಯಮ ಜಾರಿಗೆ ಬರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
https://chat.whatsapp.com/FCEnlTkAKCC0MGPhXtX4i4
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕ ಬಿಡುಗಡೆ ಮಾಡಿ, ಕೃತಿಯ ಸಮಗ್ರ ವಿಶ್ಲೇಷಣೆ ಮಾಡಿದರು. ಸಹಕಾರ ಚಳುವಳಿಯ ಮೂಲಕ ಸಮಾಜ ನಿರ್ಮಾಣದ ಕನಸು ಕಂಡು, ಅದನ್ನು ಕಾರ್ಯರೂಪಕ್ಕೆ ತಂದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರ ಜೀವನ ಮತ್ತು ಸಾಧನೆಯ ವಿವಿಧ ಆಯಾಮಗಳನ್ನು ಪರಿಚಯಿಸುವ ಈ ಕೃತಿ, ಇಂದಿನ ಸಹಕಾರ ಕ್ಷೇತ್ರಕ್ಕೆ ಅವರ ಆದರ್ಶಗಳ ಪ್ರಸ್ತುತತೆಯನ್ನು ಚರ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸ ಮಲ್ಯ, ಕಾರ್ನಾಡ್ ಸದಾಶಿವರಾಯರು, ಬಿ.ವಿ. ಕಕ್ಕಿಲ್ಲಾಯ, ಶಿವರಾಮ ಕಾರಂತರು, ಬೆನಗಲ್ ನರಸಿಂಹರಾಯರು, ಕುದ್ಮುಲ್ ರಂಗರಾಯರು, ಅಮೆಂಬಳ ಸುಬ್ಬರಾಯ ಪೈ, ಹಾಜಿ ಅಬ್ದುಲ್ಲಾ, ಟಿ.ಎಂ.ಎ. ಪೈ ಸೇರಿದಂತೆ ಕರಾವಳಿಯನ್ನು ಕಟ್ಟಿದ ಮಹನೀಯರ ಸಾಲಿನಲ್ಲಿ ಮೊಳಹಳ್ಳಿ ಶಿವರಾಯರು ಕೂಡ ಪ್ರಮುಖರಾಗಿ ಗುರುತಿಸಿಕೊಂಡಿದ್ದು, ಇವರೆಲ್ಲರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರನ್ನು ಸದಾ ಸ್ಮರಿಸಿಕೊಳ್ಳುವಂತಹ ಕೃತಿಗಳು ಹೊರಬರಬೇಕಿದೆ ಎಂದರು.

ಕರಾವಳಿಯ ನಗರಗಳ ಅಭಿವೃದ್ಧಿಗೆ ಶ್ರೀನಿವಾಸ ಮಲ್ಯರ ಕೊಡುಗೆ ಇರುವಂತೆ, ಗ್ರಾಮಗಳ ಅಭಿವೃದ್ಧಿಯಲ್ಲಿ ಮೊಳಹಳ್ಳಿ ಶಿವರಾಯರ ಪಾತ್ರ ಗುರುತರವಾಗಿದ್ದು, ಅವರು ಪ್ರಾರಂಭಿಸಿದ ಬಹುತೇಕ ಶಾಲೆಗಳಿಗೆ ಖಾತಾ ಪತ್ರಗಳೇ ಇರಲಿಲ್ಲ. ಅವತ್ತು ಸರ್ಕಾರಿ ಶಾಲೆ ಸ್ಥಾಪಿಸಲು ಉಚಿತವಾಗಿ ನೀಡಿದ್ದ ಜಾಗದಲ್ಲಿ ಪ್ರಾರಂಭವಾದ ಶಾಲೆಗಳಲ್ಲಿ ಕೆಲವೊಂದು ಇಂದು ಮಕ್ಕಳಿಲ್ಲದೆ ಮುಚ್ಚಿ ಹೋಗಿವೆ. ಈಗ ಕೊಡುಗೆ ನೀಡಿದ ದಾನಿಗಳ ಮೊಮ್ಮಕ್ಕಳು ತಮ್ಮ ಹೆಸರಿನಲ್ಲಿರುವ ಆ ಭೂಮಿಯನ್ನು ಬೇರೆಯವರಿಗೆ ಪರಭಾರೆ ಮಾಡುತ್ತಿರುವ ಬೆಳವಣಿಗೆಗಳು ನಡೆದಿವೆ. ಇದೀಗ ಆ ಸಮಸ್ಯೆಯನ್ನು ಹಂತಹಂತವಾಗಿ ಸುಧಾರಿಸಿಕೊಂಡು ಬರಲಾಗುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.





ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು ಅತಿಥಿಗಳಾಗಿ ಭಾಗವಹಿಸಿ, ಮೊಳಹಳ್ಳಿ ಶಿವರಾಯರ ಸೇವೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಇಂದಿನ ಸಹಕಾರಿ ಕ್ಷೇತ್ರಕ್ಕಿದೆ ಎಂದು ತಿಳಿಸಿದರು.
ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲೆ ಡಾ. ನಿಕೇತನ ಅವರು ‘ಮಹಿಳಾ ಸಬಲೀಕರಣದ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ವಿಷಯದ ಕುರಿತು ಹಾಗೂ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಅವರು ‘ಶೈಕ್ಷಣಿಕ ಕೊಡುಗೆಯ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ವಾರುಣಿ ನಾಗರಾಜ್ ನಿರೂಪಿಸಿದರು. ಪುಸ್ತಕದ ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಹೊಸ ಚಿಂತನೆಗಳ ದಿಕ್ಕು ತೋರಿದ ಸಂವಾದ
ಕೃತಿ ಬಿಡುಗಡೆಯ ಬಳಿಕ ಸಂವಾದ ನಡೆಯಿತು. ಪ್ರತೀ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಅದರ ಸ್ಥಾಪಕರ ಕೊಡುಗೆ ಮತ್ತು ಪರಿಶ್ರಮ ಅಪಾರವಿರುತ್ತದೆ. ಇಂದು ಬಹುತೇಕ ಸಹಕಾರಿ ಸಂಸ್ಥೆಗಳಿಗೆ ಜಾಗಗಳನ್ನು ಕೂಡ ಅದರ ಸ್ಥಾಪಕರೇ ಉಚಿತವಾಗಿ ನೀಡಿ ಕಟ್ಟಿ ಬೆಳೆಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತೀ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಕೊಡುಗೆಯನ್ನು ನೆನಪಿಸಿಕೊಳ್ಳಲು ಸಂಸ್ಥಾಪಕರ ದಿನವನ್ನು ಪ್ರತೀ ವರ್ಷ ಆಚರಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿಯಮ ಜಾರಿಗೆ ತರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ರಾಜಕೀಯದಿಂದ ಹೊರತಾದ ಸಹಕಾರಿ ಕ್ಷೇತ್ರದಿಂದ ಜನಸೇವೆ ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಪಾಣೆಮಂಗಳೂರು ಸೇತುವೆ, ಮಂಗಳೂರು ಆಕಾಶವಾಣಿ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಗೆ ಸಹಕಾರಿ ಕ್ಷೇತ್ರದ ದಿಗ್ಗಜರ ಹೆಸರನ್ನಿಟ್ಟು, ಅವರ ಕೊಡುಗೆಯನ್ನು ಮುಂದಿನ ತಲೆಮಾರಿಗೂ ಮಾದರಿಯಾಗುವಂತೆ ಮಾಡುವ ಕೆಲಸ ನಡೆಯಬೇಕು. ಮೊಳಹಳ್ಳಿ ಶಿವರಾಯರ ಕುರಿತು ಸಹಕಾರಿ ಸಂಘ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಅವರ ಚಿಂತನೆಯನ್ನು ಸಮಾಜಕ್ಕೆ ತಲುಪಿಸುವ ಕೆಲಸ ಆಗಬೇಕು ಎಂಬ ಅಭಿಪ್ರಾಯಗಳು ಸಂವಾದದಲ್ಲಿ ವ್ಯಕ್ತವಾದವು.
ಹಿರಿಯ ಲೆಕ್ಕಪರಿಶೋಧಕ ಸಿ.ಎ. ಚಂದ್ರಕಾಂತ್ ರಾವ್, ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ.ಕೆ. ಸಲೀಮ್, ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ ಅವರು ಸಂವಾದದಲ್ಲಿ ಭಾಗವಹಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಲೇಖಕ ಅರವಿಂದ ಚೊಕ್ಕಾಡಿ ಸಮನ್ವಯಕಾರರಾಗಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಅಧ್ಯಕ್ಷತೆ ವಹಿಸಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

