ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಕಟಿಸಿರುವ, ಚಿಂತಕ ಹಾಗೂ ಶಿಕ್ಷಕರಾದ ಅರವಿಂದ ಚೊಕ್ಕಾಡಿಯವರು ಕರಾವಳಿಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಕುರಿತು ರಚಿಸಿರುವ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಆಗಸ್ಟ್ 30ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಕೆ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿದೆ.
https://chat.whatsapp.com/FCEnlTkAKCC0MGPhXtX4i4
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಕೃತಿ ಬಿಡುಗಡೆ ಮಾಡಿ ಸಮಗ್ರ ವಿಶ್ಲೇಷಣೆ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಿಳಾ ಸಬಲೀಕರಣದ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ವಿಷಯದ ಬಗ್ಗೆ ಉಡುಪಿಯ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿಯ ಪ್ರಾಂಶುಪಾಲರಾದ ಡಾ.ನಿಕೇತನ, ಶೈಕ್ಷಣಿಯ ಕೊಡುಗೆಯ ನೆಲೆಯಲ್ಲಿ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ವಿಷಯದ ಬಗ್ಗೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೋಹಿಣಾಕ್ಷ ಶಿರ್ಲಾಲು ವಿಷಯ ಮಂಡನೆ ಮಾಡಲಿದ್ದಾರೆ. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎಸ್ ಆರ್ ಹರೀಶ್ ಆಚಾರ್ಯ ಉಪಸ್ಥಿತರಿರಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲರಾದ ಪ್ರೊ. ಜಯವಂತ ನಾಯಕ್ ಅಧ್ಯಕ್ಷತೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಅರವಿಂದ ಚೊಕ್ಕಾಡಿಯವರು ಸಮನ್ವಯಕಾರರಾಗಿದ್ದು, ಮಂಗಳೂರಿನ ಹಿರಿಯ ಲೆಕ್ಕಪರಿಶೋಧಕರಾದ ಸಿಎ ಚಂದ್ರಕಾಂತ್ ರಾವ್, ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕರಾದ ಬಿ.ಕೆ ಸಲೀಮ್, ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಹಿರಿಯ ಸಹಕಾರಿಗಳಾದ ರಾಧಾಕೃಷ್ಣ ಕೋಟೆ ಭಾಗವಹಿಸಲಿದ್ದಾರೆ.
ಸಹಕಾರ ಚಳುವಳಿಯ ಮೂಲಕ ಸಮಾಜ ನಿರ್ಮಾಣದ ಕನನು ಕಂಡ, ಅದನ್ನು ಕಾರ್ಯರೂಪಕ್ಕೆ ತಂದ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರ ಜೀವನ ಮತ್ತು ಸಾಧನೆಯ ವಿವಿಧ ಆಯಾಮಗಳನ್ನು ಪರಿಚಯಿಸಿದ ಈ ಕೃತಿ ಮೊಳಹಳ್ಳಿ ಶಿವರಾಯರ ವ್ಯಕ್ತಿತ್ವ, ಸಹಕಾರ ತತ್ವ, ಸಾಮಾಜಿಕ ಕಾಳಜಿ ಹಾಗೂ ದೂರದೃಷ್ಟಿಯ ಚಿಂತನೆಗಳನ್ನು ಅರಿಯಲು ಮತ್ತು ಇಂದಿನ ಸಹಕಾರ ಕ್ಷೇತ್ರಕ್ಕೆ ಅವರ ಆದರ್ಶಗಳ ಪ್ರಸ್ತುತತೆಯನ್ನು ಚರ್ಚಿಸಲು ಈ ಕಾರ್ಯಕ್ರಮವು ಒಂದು ಮಹತ್ವದ ವೇದಿಕೆಯಾಗಲಿದೆ.


