ಪ್ಯಾಕ್ಸ್ಗಳ ಆರ್ಥಿಕ ಸಂಕಷ್ಟಕ್ಕೆ ಸರ್ಕಾರವೇ ಹೊಣೆ
ಬೆಂಗಳೂರು: ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್) ಮೂಲಕ ರೈತರಿಗೆ ನೀಡಲಾಗಿದ್ದ ಸಾಲಮನ್ನಾ ಯೋಜನೆಯಡಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಣವನ್ನು ಕೂಡಲೇ ಸಂಪೂರ್ಣವಾಗಿ ಬಿಡುಗಡೆ ಮಾಡುವಂತೆ ಸಹಕಾರ ಭಾರತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
https://chat.whatsapp.com/FCEnlTkAKCC0MGPhXtX4i4
2018–19ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರಿಗೆ ತಲಾ ₹1 ಲಕ್ಷದವರೆಗೆ ಸಾಲಮನ್ನಾ ಘೋಷಿಸಿತ್ತು. ಆದರೆ, ಸರ್ಕಾರದ ಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ರಾಜ್ಯದ ಅನೇಕ ಪ್ಯಾಕ್ಸ್ಗಳಿಗೆ ಸಾಲಮನ್ನಾ ಮೊತ್ತದ ಸಂಪೂರ್ಣ ಹಣ ಇನ್ನೂ ಬಿಡುಗಡೆಯಾಗಿಲ್ಲ.
ರೈತರು ‘ಗ್ರೀನ್ ಲಿಸ್ಟ್’ನಲ್ಲಿ ಇದ್ದರೂ, ಅವರಿಗೆ ಸಂಬಂಧಿಸಿದ ಸಾಲಮನ್ನಾ ಹಣ ಸಂಘಗಳಿಗೆ ಪಾವತಿಯಾಗದೆ ಉಳಿದಿರುವುದು ಗಂಭೀರ ವಿಚಾರವಾಗಿದೆ. ಬುಕ್ಕಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರಲ್ಲೇ ಸುಮಾರು ₹22.15 ಲಕ್ಷ ಸಾಲಮನ್ನಾ ಹಣ ಬಾಕಿ ಇದೆ. ಇದೇ ರೀತಿ ರಾಜ್ಯದಾದ್ಯಂತ ನೂರಾರು ಸಂಘಗಳಲ್ಲಿ ಕೋಟ್ಯಂತರ ರೂಪಾಯಿ ಬಾಕಿ ಉಳಿದಿರುವ ಮಾಹಿತಿ ಲಭ್ಯವಾಗಿದ್ದು, ಇದರಿಂದ ಪ್ಯಾಕ್ಸ್ಗಳ ಹಣಕಾಸಿನ ಸ್ಥಿತಿ ಹದಗೆಡುತ್ತಿದೆ.
ಸಾಲಮನ್ನಾ ಹಣವನ್ನು ಸರ್ಕಾರವೇ ಘೋಷಿಸಿರುವ ಹಿನ್ನೆಲೆಯಲ್ಲಿ, ಅದರ ಮೊತ್ತವನ್ನು ಸಂಘಗಳ ಮೇಲೆ ಹೊರೆಯಾಗಿಸುವುದು ಸರಿಯಲ್ಲ. ಬಾಕಿ ಹಣಕ್ಕಾಗಿ ಸಂಘಗಳು ಬಡ್ಡಿ ಮತ್ತು ಇತರ ಹಣಕಾಸಿನ ಹೊರೆ ಅನುಭವಿಸುವಂತಾಗಿರುವುದು ಸಹಕಾರ ಕ್ಷೇತ್ರದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವು ಸಂಘಗಳಿಗೆ ಸಿಬ್ಬಂದಿ ವೇತನ ಸೇರಿದಂತೆ ದೈನಂದಿನ ಆಡಳಿತ ವೆಚ್ಚ ನಿರ್ವಹಿಸುವುದಕ್ಕೂ ಹಣಕಾಸಿನ ತೊಂದರೆ ಎದುರಾಗುತ್ತಿದೆ.
ಇದಲ್ಲದೆ, ಸರ್ಕಾರದ ವಿವಿಧ ಯೋಜನೆಗಳಡಿ ಪ್ಯಾಕ್ಸ್ಗಳಿಗೆ ಬಿಡುಗಡೆಯಾಗಬೇಕಾದ ಮಾರ್ಜಿನ್ ಹಣ ಹಾಗೂ ಇತರ ಅನುದಾನಗಳನ್ನು ಹಳೆಯ ಬಾಕಿ ಅಥವಾ ಚಾಲ್ತಿ ಖಾತೆಯ ಹೊಂದಾಣಿಕೆಗೆ ಬಳಸಲಾಗುತ್ತಿದೆ ಎಂಬ ಅಸಮಾಧಾನವೂ ಸಂಘಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದರಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪ್ಯಾಕ್ಸ್ಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚುತ್ತಿದೆ.

“ರೈತರ ಸಾಲಮನ್ನಾ ಸರ್ಕಾರದ ನಿರ್ಧಾರವಾಗಿದ್ದು, ಅದರ ಹಣವನ್ನು ಪ್ಯಾಕ್ಸ್ಗಳು ತಮ್ಮ ಸಂಪನ್ಮೂಲಗಳಿಂದ ಭರಿಸುವುದು ಸಾಧ್ಯವಿಲ್ಲ. ಸರ್ಕಾರ ತನ್ನ ಬದ್ಧತೆಯನ್ನು ನಿಭಾಯಿಸಿ, ಬಾಕಿ ಇರುವ ಪ್ರತಿಯೊಂದು ರೂಪಾಯಿಯನ್ನೂ ಕೂಡಲೇ ಬಿಡುಗಡೆ ಮಾಡಬೇಕು” ಎಂದು ಸಹಕಾರ ಭಾರತಿ ಆಗ್ರಹಿಸಿದೆ.
ರಾಜ್ಯದ ಪ್ಯಾಕ್ಸ್ಗಳು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳಾಗಿದ್ದು, ಲಕ್ಷಾಂತರ ರೈತರಿಗೆ ಕೃಷಿ ಸಾಲ, ರಸಗೊಬ್ಬರ, ಬೀಜ ಹಾಗೂ ವಿವಿಧ ಸಹಕಾರ ಸೇವೆಗಳನ್ನು ಒದಗಿಸುತ್ತಿವೆ. ಇಂತಹ ಸಂಘಗಳ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾದರೆ ಅದರ ನೇರ ಪರಿಣಾಮ ರೈತರ ಮೇಲೆಯೇ ಬೀಳಲಿದೆ. ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ವಿಳಂಬವಿಲ್ಲದೆ ರಾಜ್ಯದಾದ್ಯಂತ ಬಾಕಿ ಉಳಿದಿರುವ ಸಾಲಮನ್ನಾ ಹಣದ ಸಂಪೂರ್ಣ ಮೊತ್ತವನ್ನು ಪ್ಯಾಕ್ಸ್ಗಳಿಗೆ ಬಿಡುಗಡೆ ಮಾಡಬೇಕು. ಬಾಕಿ ಮೊತ್ತದ ಜಿಲ್ಲಾವಾರು ಹಾಗೂ ಸಂಘವಾರು ವಿವರಗಳನ್ನು ಪರಿಶೀಲಿಸಿ, ಅರ್ಹ ರೈತರ ಸಾಲಮನ್ನಾ ಹಣವನ್ನು ತಕ್ಷಣ ಪಾವತಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಭಾರತಿಯು ಸರ್ಕಾರವನ್ನು ಒತ್ತಾಯಿಸಿದೆ.
ಸಾಲಮನ್ನಾ ಬಾಕಿ ಹಣ ಬಿಡುಗಡೆ ಮಾಡುವ ಕುರಿತು ಸ್ಪಷ್ಟ ಕಾಲಮಿತಿ ನಿಗದಿಪಡಿಸಿ, ಪ್ಯಾಕ್ಸ್ಗಳ ಮೇಲಿರುವ ಅನಗತ್ಯ ಆರ್ಥಿಕ ಹೊರೆಯನ್ನು ನಿವಾರಿಸಬೇಕು. ಈ ವಿಚಾರದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ರಾಜ್ಯದ ಸಹಕಾರ ಕ್ಷೇತ್ರದ ಪರವಾಗಿ ಮುಂದಿನ ಹಂತದ ಹೋರಾಟಕ್ಕೆ ಸಹಕಾರ ಭಾರತಿ ಮುಂದಾಗಲಿದೆ ಎಂದು ಸಹಕಾರ ಭಾರತೀಯ ರಾಜ್ಯಾಧ್ಯಕ್ಷರಾದ ಪ್ರಭುದೇವ. ಆರ್. ಮಾಗನೂರು ಮತ್ತು ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಜಂಟಿ ಪತ್ರಿಕಾ ಹೇಳಿಕೆಯ ಮೂಲಕ ಎಚ್ಚರಿಸಿದ್ದಾರೆ.

