ಸಹಕಾರ ಸಂಘಗಳಿಗೆ ತ್ವರಿತ ಹಾಗೂ ಹೆಚ್ಚು ಸುಗಮ ಹಣಕಾಸು ನೆರವು ಒದಗಿಸುವ ಉದ್ದೇಶ
ನವದೆಹಲಿ: ಸಹಕಾರ ಸಂಘಗಳಿಗೆ ಹಣಕಾಸು ನೆರವು ಒದಗಿಸುವ ವ್ಯವಸ್ಥೆಯನ್ನು ಮತ್ತಷ್ಟು ವೇಗವಾಗಿ ಹಾಗೂ ಹೊಂದಿಕೊಳ್ಳುವಂತೆ ಮಾಡಲು ಉದ್ದೇಶಿಸಿರುವ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ಸಿಡಿಸಿ) ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆ ಮಂಗಳವಾರ ಧ್ವನಿಮತದ ಮೂಲಕ ಅಂಗೀಕರಿಸಿದೆ.
https://chat.whatsapp.com/FCEnlTkAKCC0MGPhXtX4i4
ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರ ಪರವಾಗಿ ಸಹಕಾರ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಮಸೂದೆ ಮಂಡಿಸಿದರು. 1962ರ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಕಾಯ್ದಗೆ (National Co-operative Development Corporation Act) ತಿದ್ದುಪಡಿ ತರಲು ಈ ಮಸೂದೆ ಉದ್ದೇಶಿಸಿದೆ.
ದೇಶದ ಸಹಕಾರ ಸಂಘಗಳಿಗೆ ಹಣಕಾಸು ನೆರವು ಹಾಗೂ ಉತ್ತೇಜನ ನೀಡುವಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಅಧೀನದಲ್ಲಿರುವ ಕಾನೂನುಬದ್ಧ ಸಂಸ್ಥೆಯಾದ ಎನ್ಸಿಡಿಸಿಯ ಪಾತ್ರವನ್ನು ವಿಸ್ತರಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಸಹಕಾರ ಸಂಘಗಳ ವಿವಿಧ ಚಟುವಟಿಕೆಗಳಿಗೆ ಅಗತ್ಯವಿರುವ ಹಣಕಾಸು ನೆರವು ತ್ವರಿತವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುಗಮವಾಗಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಎನ್ಸಿಡಿಸಿಯ ಹಣಕಾಸು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ತಿದ್ದುಪಡಿ ಪ್ರಸ್ತಾಪಿಸಲಾಗಿದೆ.
ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಅಂಗೀಕಾರ
ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ನಿರಂತರ ಘೋಷಣೆಗಳನ್ನು ಕೂಗುತ್ತಿದ್ದ ಹಿನ್ನೆಲೆಯಲ್ಲಿ ಮಸೂದೆ ಕುರಿತು ವಿಸ್ತೃತ ಚರ್ಚೆ ನಡೆಯಲಿಲ್ಲ. ಜುಲೈ 20ರಂದು ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸದನಕ್ಕೆ ಹಾಜರಾಗಿ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಸದನದ ಅಧ್ಯಕ್ಷ ಸ್ಥಾನದಲ್ಲಿದ್ದ ಕೃಷ್ಣಪ್ರಸಾದ್ ತೆನ್ನೇಟಿ ಅವರು ಹಲವು ಬಾರಿ ಸದಸ್ಯರು ಶಿಸ್ತು ಕಾಪಾಡಿ ಸದನದ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಎನ್ಸಿಡಿಸಿ ತಿದ್ದುಪಡಿ ಮಸೂದೆ ಧ್ವನಿಮತದ ಮೂಲಕ ಅಂಗೀಕಾರಗೊಂಡಿತು.









