ಮಂಗಳೂರು: ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಂಸಿಸಿ ಬ್ಯಾಂಕ್ನ ಮಾರ್ಗನ್ಸ್ಗೇಟ್ ಶಾಖೆಯನ್ನು ಮಂಗಳೂರಿನ ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ ಮಹಡಿಯಲ್ಲಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭ ಶಾಖೆಯು 31 ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ ಸಂಭ್ರಮವನ್ನೂ ಆಚರಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ನೂತನ ಶಾಖಾ ಕಚೇರಿಯನ್ನು ಕಾಸ್ಸಿಯಾ ಸಂತ ರೀಟಾ ಚರ್ಚ್ ಧರ್ಮಗುರು ವಂದನೀಯ ಫಾ| ರಿತೇಶ್ ರೋಡ್ರಿಗಸ್ ಆಶೀರ್ವದಿಸಿ ಮಾತನಾಡಿ, ಸೌಹಾರ್ದ, ಸರ್ವಧರ್ಮ ಸಮಭಾವ ಮತ್ತು ಸಮೃದ್ಧಿಯ ಮಹತ್ವ ಈ ಕಾಲದಲ್ಲಿ ಬಹಳ ಅಗತ್ಯವಿದೆ. ಬ್ಯಾಂಕಿನ ಗ್ರಾಹಕರಾಗಿ ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ನೇರವಾಗಿ ನೋಡಿದ್ದು, ಬ್ಯಾಂಕ್ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಎಂಸಿಸಿ ಬ್ಯಾಂಕ್ನ ಮಾಜಿ ನಿರ್ದೇಶಕ ಹಾಗೂ ಮಾಜಿ ಕಾರ್ಪೊರೇಟರ್ ಜೇಮ್ಸ್ ವಿಕ್ಟರ್ ಡಿಮೆಲ್ಲೊ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ, 1912ರಲ್ಲಿ ಸ್ಥಾಪನೆಯಾದ ಎಂಸಿಸಿ ಬ್ಯಾಂಕ್ ಮೊದಲ 106 ವರ್ಷಗಳಲ್ಲಿ ನಿಧಾನಗತಿಯಲ್ಲಿ ಬೆಳವಣಿಗೆ ಕಂಡಿದ್ದರೂ, 2018ರ ಬಳಿಕ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ಕಳೆದ ಎಂಟು ವರ್ಷಗಳಲ್ಲಿ ಆರು ಹೊಸ ಶಾಖೆಗಳು ಆರಂಭಗೊಂಡಿದ್ದು, ಬ್ಯಾಂಕಿನ ವಹಿವಾಟು ₹500 ಕೋಟಿಯಿಂದ ₹1,565 ಕೋಟಿಗೆ ಏರಿಕೆಯಾಗಿದೆ. 2018ರಲ್ಲಿ ಯುವ ಮತ್ತು ಕ್ರಿಯಾಶೀಲ ನಾಯಕತ್ವದ ಉದಯದೊಂದಿಗೆ ಬ್ಯಾಂಕಿನ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಅನಿಲ್ ಲೋಬೊ ಅವರ ದೃಢ ಸಂಕಲ್ಪ, ಶಿಸ್ತು, ದೂರದೃಷ್ಟಿ ಹಾಗೂ ನಿರ್ದೇಶಕ ಮಂಡಳಿ, ಆಡಳಿತ, ಸಿಬ್ಬಂದಿ ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕ್ ತನ್ನ “ಸುವರ್ಣ ಯುಗ” ಪ್ರವೇಶಿಸಿದೆ. ಶೈಕ್ಷಣಿಕ ಸಾಧಕರು ಹಾಗೂ ಸಮಾಜಸೇವಕರನ್ನು ಗೌರವಿಸುವ ಮೂಲಕ ಎಂಸಿಸಿ ಬ್ಯಾಂಕ್ ಕೇವಲ ಲಾಭದ ಸಂಸ್ಥೆಯಾಗಿರದೆ, ದಾನಧರ್ಮ, ಶಿಕ್ಷಣ ಪ್ರೋತ್ಸಾಹ, ಪ್ರಾಯೋಜಕತ್ವ ಹಾಗೂ ಸಾಮಾಜಿಕ ಸೇವೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.





ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಮಾತನಾಡಿ, ಎಂಸಿಸಿ ಬ್ಯಾಂಕ್ ನಿಜಾರ್ಥದಲ್ಲಿ “ಜನರ ಬ್ಯಾಂಕ್” ಎಂದು ಬಣ್ಣಿಸಿದ ಅವರು, ಭಾರತದ ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾಪನೆಯಾದ ಈ ಬ್ಯಾಂಕ್ ದೀರ್ಘಕಾಲದ ವಿಶ್ವಾಸ, ಸೇವೆ ಹಾಗೂ ಪರಂಪರೆಯನ್ನು ಹೊಂದಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಸುವಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ತಮ್ಮ ಬೆಂಬಲ ಮುಂದುವರಿಸಬೇಕು. ಎಂಸಿಸಿ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕರ್ನಾಟಕ ಸರ್ಕಾರದ ದ್ವಂದ್ವ ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಠೇವಣಿಗಳಿಗೆ ಡಿಐಸಿಜಿಸಿ (Deposit Insurance and Credit Guarantee Corporation) ವಿಮಾ ರಕ್ಷಣೆ ದೊರೆಯುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಜವಾದ ನಾಯಕತ್ವವು ದೈಹಿಕ ಬಲದಲ್ಲಲ್ಲ, ಬಲಿಷ್ಠ ಮನೋಭಾವ, ದೂರದೃಷ್ಟಿ ಮತ್ತು ಮಾನವೀಯ ಹೃದಯದಲ್ಲಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಬ್ಯಾಂಕ್ನ ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಬ್ಯಾಂಕಿನ ಆಡಳಿತಕ್ಕೆ ಸದಾ ಪ್ರೇರಣೆಯಾಗಿವೆ. ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಕರ್ನಾಟಕದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಎನ್ಪಿಎ, ಸಾಲ ಮತ್ತು ಮುಂಗಡಗಳು, ಕಾಸಾ, ಠೇವಣಿಗಳು, ಎಸ್ಎಲ್ಆರ್, ಸಿಆರ್ಆರ್ ಹಾಗೂ ಸಿಡಿ ಅನುಪಾತ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಮಾನದಂಡಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿರುವ 262 ನಗರ ಸಹಕಾರಿ ಬ್ಯಾಂಕುಗಳ ಪೈಕಿ ಎಂಸಿಸಿ ಬ್ಯಾಂಕ್ ಮಾತ್ರವೇ ವಿಶೇಷ ಎನ್ಆರ್ಐ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದ್ದು, ಎನ್ಆರ್ಇ ಠೇವಣಿಗಳು ₹100 ಕೋಟಿಯನ್ನು ಮೀರಿವೆ ಎಂಬುದು ಹೆಮ್ಮೆಯ ಸಂಗತಿ. ಬ್ಯಾಂಕಿನ ಸಿಬ್ಬಂದಿಗೆ ನಿರಂತರ ತರಬೇತಿ ನೀಡಿ ತ್ವರಿತ, ಪರಿಣಾಮಕಾರಿ ಹಾಗೂ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರ ತೃಪ್ತಿಯೇ ಬ್ಯಾಂಕಿನ ಪ್ರಮುಖ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ಸಮಾಜಸೇವಕ, ನಾಟಕಕಾರ, ನಿರ್ದೇಶಕ ಹಾಗೂ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಹಾಗೂ ಹೆಲ್ತ್ ಮಾರ್ಟ್ನ ಮಾಲಕರಾದ ಕೃಷ್ಣ ಬಿಂದುಮನೆ ಗೌರವಾನ್ವಿತ ಅತಿಥಿಗಳಾಗಿದ್ದರು. ಶೈಕ್ಷಣಿಕ ಸಾಧಕರಾದ ಕರೆನ್ ಡಿಕ್ರೂಜ್ ಹಾಗೂ ಕಿನಾರಾ ಡಿಕ್ರೂಜ್ ಅವರನ್ನು ಸನ್ಮಾನಿಸಲಾಯಿತು. ಮಾರ್ಗನ್ಸ್ಗೇಟ್ ಶಾಖೆಯ ಮಾಜಿ ವ್ಯವಸ್ಥಾಪಕರಾದ ಜಸಿಂತಾ ಸೆರಾವೊ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಮಾಜಸೇವಕರಾದ ಜೇಮ್ಸ್ ವಿಕ್ಟರ್ ಡಿಮೆಲ್ಲೊ ಹಾಗೂ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರನ್ನೂ ಸನ್ಮಾನಿಸಲಾಯಿತು. ಬ್ಯಾಂಕಿನ ನಿರ್ದೇಶಕರಾದ ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಫೆಲಿಕ್ಸ್ ಡಿಕ್ರೂಸ್, ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಎಂಸಿಸಿ ಬ್ಯಾಂಕ್ನ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ ಸ್ವಾಗತಿಸಿದರು. ಮಾರ್ಗನ್ಸ್ಗೇಟ್ ಶಾಖೆಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ವಂದಿಸಿದರು. ಪ್ರೀತಂ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.


