ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆಯು ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ.
https://chat.whatsapp.com/FCEnlTkAKCC0MGPhXtX4i4
ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಹೆಚ್.ಜಗನ್ನಾಥ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಶಾಖಾ ಕಚೇರಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಸಂಜೀವ ಮಠಂದೂರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್.ಎನ್ ರಮೇಶ್ ಶಾಖೆಯ ಗಣಕೀಕರಣ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಅಬ್ದುಲ್ ರಹಿಮಾನ್, ಸಹಕಾರ ಭಾರತಿ ದ.ಕ. ಜಿಲ್ಲಾ ಉಪಾಧ್ಯಕ್ಷ ಹಾಗೂ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕೆ.ವಿ ಪ್ರಸಾದ್, ಉಪ್ಪಿನಂಗಡಿ ಗಾಂಧಿ ಪಾರ್ಕ್ ರಾಮಗೋಪಾಲ ಕಾಂಪ್ಲೆಕ್ಸ್ ಕಟ್ಟಡ ಮಾಲೀಕರಾದ ಕೆ.ರಾಜೇಶ್ ನಾಯಕ್ ಭಾಗವಹಿಸಲಿದ್ದಾರೆ. ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮನೋರಂಜನ್ ಕೆ.ಆರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಮತ್ತು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಟ್ಲ ಗ್ರಾಮೀಣ ಸಹಕಾರಿ ಸಂಘವು 1955ರಲ್ಲಿ ಮದ್ರಾಸ್ ಸರಕಾರದ ಯೋಜನೆಯಂತೆ ಉಪನಿಬಂಧಕರ ಕಚೇರಿ ಕಾಸರಗೋಡು ಇಲ್ಲಿ “ವಿಟ್ಲ ಕೋ ಆಪರೇಟಿವ್ ರೂರಲ್ ಬ್ಯಾಂಕ್ ನಿಯಮಿತ” ಎಂದು ನೋಂದಾಯಿಸಿ ಪ್ರಾರಂಭವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿ ಇಂದು ವಿಟ್ಲ ಗ್ರಾಮೀಣ ಸಹಕಾರಿ ಸಂಘ ಎಂಬ ಹೆಸರಿನಲ್ಲಿ ಸುಮಾರು 9000ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿ, ಕಾರ್ಯಾಚರಿಸುತ್ತಿದೆ. ವಿಟ್ಲದಲ್ಲಿ ಪ್ರಧಾನ ಕಚೇರಿ ಹೊಂದಿದು, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದ್ದು, ಸಂಘವು ಹಲವಾರು ವರ್ಷಗಳಿಂದ ಉತ್ತಮ ಲಾಭ ಗಳಿಸುತ್ತ ಬರುತ್ತಿದ್ದು, ಸದಸ್ಯ ಗ್ರಾಹಕರಿಗೆ ಶೇಕಡಾ 22 ಡಿವಿಡೆಂಡ್ ವಿತರಿಸಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುತ್ತದೆ. ಉಪ್ಪಿನಂಗಡಿ ಪರಿಸರದ ಅನೇಕ ಸದಸ್ಯ ಗ್ರಾಹಕರ ಅಪೇಕ್ಷೆಯಂತೆ ಸಂಘದ ಐದನೇ ಶಾಖೆಯು ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಶನಿವಾರ ಶುಭಾರಂಭಗೊಳ್ಳಲಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







