ಬಂಟ್ವಾಳ: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರ ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಜ್ಯ ಸರಕಾರದ ಸಹಭಾಗಿತ್ವದ ಮಹತ್ವಾಕಾಂಕ್ಷೆಯ ಯೋಜನೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2026-27ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.
https://chat.whatsapp.com/FCEnlTkAKCC0MGPhXtX4i4
ಇದರಂತೆ ಅಡಿಕೆ, ಕರಿಮೆಣಸು ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಮಾಡಲು ಪ್ರೀಮಿಯಂ ಪಾವತಿಸಲು ಪ್ರಾರಂಭವಾಗಿದ್ದು, ಬೆಳೆ ಸಾಲ ಪಡೆದಿರುವ ರೈತರು ತಾವು ಬೆಳೆ ಸಾಲ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿ ಪ್ರೀಮಿಯಂ ಮೊತ್ತ ಪಾವತಿಸಬಹುದು. ಬೆಳೆ ಸಾಲ ಹೊಂದಿಲ್ಲದ ರೈತರು ಸಹ ಈ ಯೋಜನೆಯಡಿಯಲ್ಲಿ ಪ್ರೀಮಿಯಂ ಮೊತ್ತ ಪಾವತಿಸಿ ಯೋಜನೆಯ ಸದುಪಯೋಗ ಪಡೆಯಬಹುದು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ತಾವು ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಿಸಬೇಕು ಹಾಗೂ ಫಾರ್ಮರ್ ಐಡಿ ಹೊಂದಿರಬೇಕು. ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಎಕರೆ ಒಂದಕ್ಕೆ ರೂ 2591/- ಮತ್ತು ಕರಿಮೆಣಸು ಎಕರೆ ಒಂದಕ್ಕೆ ರೂ 951/- ವಿಮೆ ಕಂತು ಪಾವತಿಸಬೇಕಾಗುತ್ತದೆ.ಈ ಯೋಜನೆಯ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದ್ದು, ಬೆಳೆ ಸಾಲ ಪಡೆದಿರುವ ಎಲ್ಲಾ ರೈತರು ಜಮೀನಿನ ಆರ್.ಟಿ.ಸಿ.ಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಹಾಗೂ ನಾಮಿನಿಯ ಆಧಾರ್ನೊಂದಿಗೆ ನಿಗದಿತ ಅವಧಿಯೊಳಗೆ ತಮ್ಮ ಕಾರ್ಯವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗಳನ್ನು ಸಂಪರ್ಕಿಸಿ ಬೆಳೆ ವಿಮೆ ಯೋಜನೆ ಪ್ರಯೋಜನ ಪಡೆಯಬೇಕೆಂದು ಪ್ರಭಾಕರು ಪ್ರಭು ಅವರು ರೈತರಿಗೆ ವಿನಂತಿ ಮಾಡಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com





