ಬ್ಯಾಂಕಿಂಗ್ ಕಾರ್ಯದ ಜೊತೆ ಸಮಾಜಮುಖಿ ಕೆಲಸಕ್ಕೆ ಸ್ಪೀಕರ್ ಯು.ಟಿ ಖಾದರ್ ಶ್ಲಾಘನೆ
ಹಳೆಯಂಗಡಿ: ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಆರಂಭಗೊಂಡಿದ್ದು ಕೇವಲ ಐದು ವರ್ಷಗಳಲ್ಲಿ ಜನರ ವಿಶ್ವಾಸ ಗಳಿಸಿ ನಾಲ್ಕು ಶಾಖೆಯನ್ನು ಆರಂಭಿಸಿದೆ. ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯು ಮುಂದಿನ 25ನೇ ವರ್ಷಕ್ಕೆ ನೂರು ಶಾಖೆಯನ್ನು ಹೊಂದಲಿ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಹಾರೈಸಿದರು.
https://chat.whatsapp.com/FCEnlTkAKCC0MGPhXtX4i4
ಹಳೆಯಂಗಡಿಯ ಹರಿಓಂ ಕಟ್ಟಡದ ಆವರಣದಲ್ಲಿ ಬುಧವಾರ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ 5ನೇ ವರ್ಷದ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮೂಲ್ಕಿಸೀಮೆ ಅರಸರು ಹಾಗೂ ಬಪ್ಪನಾಡು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಎಂ.ದುಗ್ಗಣ್ಣ ಸಾವಂತರು ಮಾತನಾಡಿ ಬಡವರಿಗಾಗಿ ರಾಷ್ಟ್ರೀಕರಣ ಮೂಲಕ ಬ್ಯಾಂಕ್ ಬಾಗಿಲನ್ನು ತೆರೆಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಿಯದರ್ಶಿನಿ ಎಂಬ ಹೆಸರಿನಲ್ಲಿ ಕೋವಿಡ್ ಸಂದರ್ಭದಲ್ಲಿ ಸರಳವಾಗಿ ಆರಂಭಗೊಂಡ ಬ್ಯಾಂಕ್ ಇಂದು 5ನೇ ವರ್ಷದಲ್ಲಿ ನಾಲ್ಕು ಶಾಖೆಯನ್ನು ಹೊಂದಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಈ ಸೊಸೈಟಿಯು ಇನ್ನೂ ಹೆಚ್ಚಿನ ಶಾಖೆಗಳನ್ನು ಹೊಂದಲಿ ಎಂದು ಹಾರೈಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಶುಭ ಹಾರೈಸಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ ಉದ್ಘಾಟಿಸಿದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ಸ್ಥಾಪನಾ ವರ್ಷದ ಮೌಲ್ಯಯುತ ಸದಸ್ಯರಿಗೆ ಹಾಗೂ ಸ್ಥಾಪನಾ ವರ್ಷದ ಸಿಬ್ಬಂದಿಗೆ ಗೌರವ ಸಲ್ಲಿಸಿದರು. ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸೂರ್ಯಕುಮಾರ್ ಬಿ, ಕಾರ್ನಾಡು ಕನ್ಶಶನ್ ಇಮ್ಯಾಕ್ಯುಲೇಟ್ ಚರ್ಚಿನ ಪಾಲನಾ ಸಮಿತಿಯ ಸಂಯೋಜಕ ಪೌಲ್ ರೋಲಿ ಡಿಕೋಸ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಖ್ಯಾತ ಚಲನಚಿತ್ರ ನಟಿ ಅದ್ವಿತಿ ಶೆಟ್ಟಿ, ಖ್ಯಾತ ತುಳು ಚಿತ್ರನಟಿ ಗಾನ ಭಟ್ ಮತ್ತು ಯೂಟ್ಯೂಬರ್ ಆ್ಯಂಡ್ ಕಂಟೆಂಟ್ ಕ್ರಿಯೇಟರ್ ಶಿಲ್ಪ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಉಪಾಧ್ಯಕ್ಷ ವಿಜಯ ಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ.ಶೆರಿಲ್ ಅಯೋನ, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಚ್ ವಸಂತ ಬೆರ್ನಾಡ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು, ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಓಂಕಾರ್ ಕಲಾಸಂಗಮ ಪಡುಬಿದ್ರಿ ಮತ್ತು ದಿ ಡ್ಯಾನ್ಸ್ ಸ್ಟುಡಿಯೋ ಪಕ್ಷಿಕೆರೆಯವರಿಂದ ನೃತ್ಯ ಪ್ರದರ್ಶನ, ಸಂಜೆ ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತಂಡ ಸಿಜ್ಲಿಂಗ್ ಗಯ್ಸ್ ಅವರಿಂದ ನೃತ್ಯ ಪ್ರದರ್ಶನ ಜರಗಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com


