ಬಂಟ್ವಾಳ: ಇಲ್ಲಿನ ಬೈಪಾಸ್ ಜಂಕ್ಷನ್ನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘದ ನೂತನ 18ನೇ ಶಾಖೆಯು ಮೇ 17ರಂದು ಭಾನುವಾರ ಉಳ್ಳಾಲ ತಾಲೂಕಿನ ಬೋಳಿಯಾರು ಎಂಬಲ್ಲಿ ದೇವಿಕಿರಣ್ ಸಂಕೀರ್ಣದಲ್ಲಿ ಕಾರ್ಯಾರಂಭ ಮಾಡಲಿದೆ.
https://chat.whatsapp.com/FCEnlTkAKCC0MGPhXtX4i4
ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಭದ್ರತಾ ಕೊಠಡಿ ಉದ್ಘಾಟನೆ ಮಾಡಲಿದ್ದು, ಸೇಫ್ ಲಾಕರ್ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್, ಕಂಪ್ಯೂಟರ್ ಉದ್ಘಾಟನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ, ಠೇವಣಿ ಪತ್ರ ಬಿಡುಗಡೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮ್ಮೆಂಬಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜಾರಾಮ ಭಟ್, ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಅಮ್ಮೆಂಬಳ ಸಂತ ಥೋಮಸರ ಚರ್ಚ್ ಧರ್ಮಗುರು ರೆ.ಫಾ.ಮೈಕಲ್ ಡಿಸಿಲ್ವ, ಬೋಳಿಯಾರು ಎಂ.ಜೆ.ಎಂ. ಮಸೀದಿ ಅಧ್ಯಕ್ಷ ಪಿ.ಕೆ.ಅಬ್ದುಲ್ಲ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಕೆ.ಅಬ್ದುಲ್ ಜಬ್ಬಾರ್, ಶಕೂರು, ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಮೂಲ್ಯ, ಶ್ರೀ ಕ್ಷೇತ್ರ ಪಣೋಲಿಬೈಲು ಪ್ರಧಾನ ಅರ್ಚಕರಾದ ನಾರಾಯಣ ಮೂಲ್ಯ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು, ಕುಲಾಲ ಸಂಘ ಬೆಂಗಳೂರು ಅಧ್ಯಕ್ಷ ದಿವಾಕರ ಮೂಲ್ಯ, ಶಾಖೆಯ ಕಟ್ಟಡ ಮಾಲೀಕರಾದ ಕೇಶವ ಭಂಡಾರಿ ಭಾಗವಹಿಸಲಿದ್ದಾರೆ.
ಸಾಧನೆ ಮತ್ತು ಯೋಜನೆ:
ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ, ಬಂಟ್ವಾಳ ಇದು 24-05-1981ರಂದು ಸ್ವಾತಂತ್ರ್ಯ ಯೋಧ ಹಾಗೂ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರೀಣ ಬಿ.ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಸ್ಥಾಪನೆಯಾಗಿದೆ. ಅಂದು ಬ್ಯಾಂಕಿನ ಉದ್ಘಾಟನಾ ಸಮಾರಂಭದಲ್ಲಿ ಆಗಿನ ಕರ್ನಾಟಕ ಸರಕಾರದ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರಾದ ಎಂ.ವೀರಪ್ಪ ಮೊಯಿಲಿಯವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ಭಾಸ್ಕರ ಶೆಟ್ಟಿ, ಆಗಿನ ಸಂಸದರಾಗಿದ್ದ ಬಿ.ಜನಾರ್ಧನ ಪೂಜಾರಿ, ರಾಜ್ಯಸಭಾ ಸದಸ್ಯ ಇಬ್ರಾಹಿಂ, ಶಾಸಕ ಬಿ.ಎ ಮೊಯಿದ್ದೀನ್, ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಭಾಗವಹಿಸಿದ್ದರು. ಆಗ 131 ಸದಸ್ಯರಿಂದ ರೂ. 22,620 ಪಾಲು ಬಂಡವಾಳದೊಂದಿಗೆ ಬ್ಯಾಂಕ್ ಕಾರ್ಯಾರಂಭ ಮಾಡಿತ್ತು.
ಬಂಟ್ವಾಳ ಬೈಪಾಸ್ ಜಂಕ್ಷನ್ನಲ್ಲಿ ಸಹಕಾರಿಯು ತನ್ನ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬಂಟ್ವಾಳ ಬೈಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ.ಸಿ. ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ, ಉಪ್ಪಿನಂಗಡಿ, ತೊಕ್ಕೊಟ್ಟು-ದೇರಳಕಟ್ಟೆ ಮತ್ತು ಆಲಂಕಾರು ಹೀಗೆ 17 ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತ ಬಂದಿದೆ.
31-03-2026ರ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು 9319 ‘ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ ರೂ.8.23 ಕೋಟಿ, ಠೇವಣಾತಿಗಳು ರೂ. 264.08 ಕೋಟಿ, ನಿಧಿಗಳು 22.64 ಕೋಟಿ, ವಿನಿಯೋಗಗಳು 62.88 ಕೋಟಿ, ಸಾಲಗಳು ರೂ. 248.99 ಕೋಟಿ, ಇದ್ದು ವಸೂಲಾತಿ ಶೇಕಡ 95.15 ಆಗಿರುತ್ತದೆ. 205-26ನೇ ಸಾಲಿನಲ್ಲಿ ರೂ. 1432,13 ಕೋಟಿ ವ್ಯವಹಾರ ನಡೆಸಿ ರೂ. 5.28 ಕೋಟಿ ತಾತ್ಕಾಲಿಕ ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ.297.71 ಕೋಟಿ ಮೀರಿದ್ದು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿ ಕಾಯ್ದುಕೊಂಡಿದೆ. ಕಳೆದ ಸಾಲಿನಲ್ಲಿ ಸದಸ್ಯರಿಗೆ ಶೇಕಡ 17 ಡಿವಿಡೆಂಡ್ ನೀಡಲಾಗಿದೆ. ಸಹಕಾರಿಯು 2006ರಲ್ಲಿ ಬೆಳ್ಳಿಹಬ್ಬ ಆಚರಿಸಿದೆ. ಕೇಂದ್ರ ಕಚೇರಿ ಹಾಗೂ ಬಂಟ್ವಾಳ ಬೈಪಾಸ್ ಶಾಖೆಯು ಬೈಪಾಸ್ ಜಂಕ್ಷನ್ನ ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಪುಂಜಾಲ್ ಕಟ್ಟೆ, ಮುಡಿಪು ಹಾಗೂ ಉಪ್ಪಿನಂಗಡಿ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮುಂದಿನ ದಿನಗಳಲ್ಲಿ ಇನ್ನೂ ಐದು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತಿರ್ಮಾನಿಸಿದೆ. ಸಹಕಾರಿಯಲ್ಲಿ 78 ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ 44 ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿಯ ಯೋಜನೆಯಂತೆ ಈಗಾಗಲೇ ಸಂಪೂರ್ಣ ಗಣಕೀಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಗ್ರಾಹಕರು ನೆಫ್ಟ್, ಆರ್.ಟಿ.ಜಿ.ಎಸ್. ಹಾಗೂ ಗೂಗಲ್-ಪೇ, ಪೋನ್-ಪೇ ಮುಂತಾದ ಯು.ಪಿ.ಐ. ಅಪ್ಲಿಕೇಶನ್ ಮೂಲಕ ಸಂಘದಲ್ಲಿರುವ ತಮ್ಮ ಖಾತೆಗೆ ನೇರವಾಗಿ ಜಮೆ ಮಾಡುವಂತಹ ಇ-ಕಲೆಕ್ಷನ್ ತಂತ್ರಜ್ಞಾನ ಮತ್ತು ಐ.ಎಫ್.ಎಸ್.ಸಿ. ಕೋಡನ್ನು ಐ.ಸಿ.ಐ.ಸಿ.ಐ. ಬ್ಯಾಂಕ್ ಸಹಯೋಗದೊಂದಿಗೆ ಅಳವಡಿಸಿಕೊಂಡಿದೆ. ಈ ಮೂಲಕ ಬಂಟ್ವಾಳ ತಾಲೂಕಿನಲ್ಲೇ ಈ ಸೌಲಭ್ಯವನ್ನು ಹೊಂದಿರುವ ಮೊದಲ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಂಘವು ತನ್ನದೆ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿ ಆ ಮೂಲಕ ಯಾವುದೇ ವಾಣಿಜ್ಯ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ಗ್ರಾಹಕರಿಗೆ ಸೇವೆ ನೀಡಬೇಕೆಂಬ ಆಲೋಚನೆ ಹೊಂದಿದೆ.
ಸಂಘವು ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಹಲವು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿದೆ. ಸಹಕಾರಿಯ ವತಿಯಿಂದ 2025-26ನೇ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ 204 ಸದಸ್ಯರ ಮಕ್ಕಳಿಗೆ ರೂ. 8,80,000.00 ವಿದ್ಯಾರ್ಥಿವೇತನ ನೀಡಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಅಳವಡಿಸಲಾಗಿದೆ.
ಸಹಕಾರಿಯಲ್ಲಿ ಪ್ರಸ್ತುತ 241 ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು 2161 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದು ಒಟ್ಟು ರೂ. 1,04,95,719.50 ಉಳಿತಾಯ ಮಾಡಿರುತ್ತಾರೆ. 2025-26ನೇ ಸಾಲಿನಲ್ಲಿ ಗುಂಪುಗಳಿಗೆ ರೂ. 1,86,75,000.00 ಸಾಲ ನೀಡಿದ್ದು ವರ್ಷಾಂತ್ಯಕ್ಕೆ ರೂ. 2,30,51,606.00 ಹೊರಬಾಕಿ ಇರುತ್ತದೆ.
ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯ ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ರೂ. 10,00,000 ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯ ಕಲ್ಪಿಸಲಾಗಿದೆ. ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡಲಾಗುತ್ತಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ ನೀಡಲಾಗುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






