ಸಹಕಾರಿ ಕ್ರೀಡೋತ್ಸವ ಉದ್ಘಾಟಿಸಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯ
ಮಂಗಳೂರು: ಸಹಕಾರಿ ಕ್ಷೇತ್ರವು ಜನ ಜೊತೆ ನಿಕಟ ಸಂಪರ್ಕ ಸಾಧಿಸುವ ಸಾಧನದಂತೆ ಕೆಲಸ ಮಾಡುತ್ತಿದೆ. ಸಹಕಾರ ಭಾರತಿಯು ಸಹಕಾರಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಚಿಂತನೆ ಹರಡಿಸುವ ಕೆಲಸ ಮಾಡುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಸಹಕಾರ ಭಾರತಿ ಮಂಗಳೂರು ಮಹಾನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಆಶ್ರಯದಲ್ಲಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳಿಗಾಗಿ ಅಡ್ಯಾರ್ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ದ.ಕ. ಜಿಲ್ಲಾ ಮಟ್ಟದ `ಸಹಕಾರಿ ಕ್ರೀಡೋತ್ಸವದಲ್ಲಿ ದ್ವಜಾರೋಹಣ ಮಾಡಿ, ಉದ್ಘಾಟಿಸಿ ಮಾತನಾಡಿದರು. ಸಹಕಾರ ಮನೋಭಾವ ಎಲ್ಲರಲ್ಲೂ ಇರಬೇಕು. ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಸಮಾಜದ ಜೊತೆ ಸಹಕಾರಿ ಮನೋಭಾವದಿಂದ ಕೆಲಸ ಮಾಡಬೇಕು. ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾಗಿ ಸಹಕಾರ ಸಚಿವರಾದ ನಂತರ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಹಕಾರ ಕ್ಷೇತ್ರ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಲು ಹೊಸ ಸಹಕಾರ ನೀತಿ ಕಾರಣವಾಗಲಿದೆ. ಜನಸಾಮಾನ್ಯರು ಸಹಕಾರಿ ಸಂಘಗಳಿಗೆ ಸಾಲ ಕೇಳಲು ಬರುವಾಗ ನಗುಮೊಗದ ಸೇವೆ ನೀಡಿ ಸಹಕಾರದ ಬೆಳವಣಿಗೆಗೆ ಕಾರಣವಾಗಬೇಕು. ಈ ಕ್ರೀಡಾಕೂಟದಲ್ಲಿ ಪರಸ್ಪರ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದು ಹೇಳಿದರು.
ಸಹಕಾರ ಭಾರತಿಗೆ ಪ್ರೇರಣೆ ಕೊಟ್ಟ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಈ ವರ್ಷ ಶತಾಬ್ದಿಯ ವರ್ಷ. ಅದೇ ರೀತಿ ವಂದೇ ಮಾತರಂ ಗೀತೆಗೆ 150ನೇ ವರ್ಷ. ದ.ಕ. ಜಿಲ್ಲೆಗೆ ಕೀರ್ತಿ ತಂದುಕೊಟ್ಟ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ 500ನೇ ವರ್ಷ. ಈ ಎಲ್ಲ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟಕ್ಕೂ ಒಂದು ವಿಶೇಷ ಮೆರುಗು ಲಭಿಸುತ್ತಿದೆ ಎಂದು ಹೇಳಿದರು.
ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಸುಪ್ರೀತ್ ಆಳ್ವ ಪೊನ್ನೋಡಿ ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಬಲಶಾಲಿಯಾಗಿ ಬೆಳೆಯುತ್ತಿದೆ. ಸಹಕಾರಿಗಳ ಈ ಕ್ರೀಡಾಕೂಟ ಅದಕ್ಕೆ ಪೂರಕವಾಗಿ ನಡೆಯಲಿ ಎಂದು ಹೇಳಿದರು.

ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಟ್ಟು ಭಾರತದಲ್ಲಿ ಸುಮಾರು 30 ಕೋಟಿಗೂ ಮಿಕ್ಕಿ ಸಹಕಾರಿ ಸದಸ್ಯರಿದ್ಧಾರೆ. 8.5 ಲಕ್ಷ ಸಹಕಾರಿಗಳು ನಾನಾ ಕ್ಷೇತ್ರಗಳಲ್ಲಿ ಕಾರ್ಯವೆಸಗುತ್ತಿದೆ. 1978ರಲ್ಲಿ ಪ್ರಾರಂಭವಾಗಿ ಇದೀಗ 650 ಜಿಲ್ಲೆಗಳಲ್ಲಿ ತನ್ನ ಸಂಘಟನೆ ಹೊಂದಿದ್ದು, ಬಹಳ ಪರಿಣಾಮಕಾರಿಯಾಗಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಾಗೂ ಕ್ಷಮತೆಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಸಹಕಾರಿ ಕ್ರೀಡೋತ್ಸವ ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಸಹಕಾರ ಭಾರತಿ ರಾಜ್ಯ ಸಹ ಕಾರ್ಯದರ್ಶಿ ಗಣೇಶ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಕಲ್ಲಾಜೆ, ಮಹಾನಗರ ಕಾರ್ಯದರ್ಶಿ ಚರಣ್ರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಆಳ್ವ, ಮಹಾನಗರ ಸಂಘಟನಾ ಕಾರ್ಯದರ್ಶಿ ವಲ್ಸರಾಜ್, ಮಹಿಳಾ ಪ್ರಮುಖ್ ಮದಲಾಕ್ಷಿ ರೈ ಮೊದಲಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾಧ್ಯಕ್ಷ ಬಿ. ಸುಧಾಕರ ರೈ ಸ್ವಾಗತಿಸಿದರು. ಮಹಿಳಾ ಪ್ರಮುಖ್ ಸುಭದ್ರಾ ರಾವ್ ವಂದಿಸಿದರು. ಸದಸ್ಯರಾದ ಪ್ರಶಾಂತ್ ಪೈ ಹಾಗೂ ಧನ್ಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
100 ಮೀ. ಓಟ, 200 ಮೀ. ಓಟ, ಶಾಟ್ಪುಟ್, ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ತ್ರೋಬಾಲ್, ರಸಪ್ರಶ್ನೆ, ಆಶುಭಾಷಣ, ರಂಗೋಲಿ ಸ್ಪರ್ಧೆಗಳು ನಡೆದವು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

