ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು: ಇಲ್ಲಿನ ಕಾರ್ಸ್ಟ್ರೀಟ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಬ್ಯಾಂಕಿನ ಉಪವಿಧಿಗಳಿಗೆ, ನೇಮಕಾತಿ ನಿಯಮಗಳಿಗೆ, ನೌಕರರ ಸೇವಾ ನಿಬಂಧನೆಗಳಿಗೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ನಿಯಮಗಳು 1960ರ ಉಪಬಂಧಗಳಿಗೆ ಒಳಪಟ್ಟಿರುತ್ತದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಶಾಖಾ ವ್ಯವಸ್ಥಾಪಕರು( 2 ಹುದ್ದೆ), ಸಹಾಯಕ ಶಾಖಾ ವ್ಯವಸ್ಥಾಪಕರು (1 ಹುದ್ದೆ), ಸಾರ್ವಜನಿಕ ಸಂಪರ್ಕಾಧಿಕಾರಿ (1 ಹುದ್ದೆ), ಕಿರಿಯ ಸಹಾಯಕರು (16 ಹುದ್ದೆಗಳು) ಮತ್ತು ಅಟೆಂಡರ್ (3 ಹುದ್ದೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಾಖಾ ವ್ಯವಸ್ಥಾಪಕ ಹುದ್ದೆಗೆ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಎಂಎ ಅರ್ಥಶಾಸ್ತ್ರ, ಎಂಕಾಂ ಅಥವಾ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದಿರಬೇಕು. ಬ್ಯಾಂಕಿಂಗ್ ಯಾ ಹಣಕಾಸು ವಿಷಯದಲ್ಲಿ ಯಾವುದೇ ಡಿಪ್ಲೊಮಾ ಪದವಿ, ಬ್ಯಾಂಕಿಂಗ್ ಯಾ ಹಣಕಾಸು ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಸೇವಾ ಅನುಭವ ಇರಬೇಕು.
ಸಹಾಯಕ ಶಾಖಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಶೇ.60 ಅಂಕಗಳೊಂದಿಗೆ ಎಂ.ಎ ಅರ್ಥಶಾಸ್ತ್ರ, ಎಂ.ಕಾಂ ಅಥವಾ ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದಿರಬೇಕು, ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಡಿ.ಸಿ.ಎ.) ಮತ್ತು ಹಣಕಾಸು ಅಥವಾ ಬ್ಯಾಂಕಿಂಗ್ ವಿಷಯದಲ್ಲಿ ಕನಿಷ್ಠ 5 ವರ್ಷದ ಪರಿಣತಿ/ಅನುಭವ ಪಡೆದಿರಬೇಕು.
ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಶೇ.55 ಅಂಕಗಳೊಂದಿಗೆ ಬಿ.ಕಾಂ/ಬಿ.ಬಿ.ಎಂ./ಬಿ.ಸಿ.ಎ. ಪದವಿ ಪಡೆದಿರಬೇಕು. ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಡಿ.ಸಿ.ಎ.) ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ ಕನಿಷ್ಠ 5 ವರ್ಷದ ಸೇವಾ ಅನುಭವ ಹೊಂದಿರಬೇಕು.
ಕಿರಿಯ ಸಹಾಯಕ ಹುದ್ದೆಗೆ ಕನಿಷ್ಠ ಶೇ.55 ಅಂಕಗಳೊಂದಿಗೆ ಬಿ.ಕಾಂ/ಬಿ.ಬಿ.ಎಂ./ಬಿ.ಸಿ.ಎ. ಪದವಿ ಪಡೆದಿರಬೇಕು. ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಡಿ.ಸಿ.ಎ.) ಪಡೆದಿರಬೇಕು. ಅಟೆಂಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಸುವವರ ವಯೋಮಿತಿಯು ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯ ವರ್ಗದವರಿಗೆ 35 ವರ್ಷಗಳು, ಹಿಂದುಳಿದ ಜಾತಿ ಅಥವಾ ಹಿಂದುಳಿದ ವರ್ಗದವರಿಗೆ 38 ವರ್ಷಗಳು (2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳು) ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ 40 ವರ್ಷಗಳು.
ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಅನುಗುಣವಾಗಿ 1:10 ಅನುಪಾತದಲ್ಲಿ ಅರ್ಹತಾ ಪಟ್ಟಿ ತಯಾರಿಸಿ ಲಿಖಿತ ಪರೀಕ್ಷೆ ನಡೆಸಲಾಗುವುದು. 200 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡಾ 85ಕ್ಕೆ ಹೊಂದಿಸಿಕೊಂಡು, 1:5 ಅನುಪಾತದಲ್ಲಿ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಸಹಕಾರ (50 ಅಂಕಗಳು), ಸಾಮಾನ್ಯ ಇಂಗ್ಲೀಷ್ (25 ಅಂಕಗಳು), ಕನ್ನಡ ಭಾಷೆ (50 ಅಂಕಗಳು), ಸಾಮಾನ್ಯ ಜ್ಞಾನ (25) ಭಾರತದ ಸಂವಿಧಾನ(25), ಸಮಾಜದ ಯುಕ್ತವಾದ ಚಟುವಟಿಕೆಗಳು ಮತ್ತು ವಸ್ತು ನಿಷ್ಠೆ ವಿಷಯ ವಸ್ತು (25 ಅಂಕಗಳು) ವಿಷಯಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಅಟೆಂಡರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ. ಮೌಖಿಕ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.
ವೇತನ ಶ್ರೇಣಿ:
ಶಾಖಾ ವ್ಯವಸ್ಥಾಪಕರ ಹುದ್ದೆ: 43100-1100-46400-1250-53900-1450-62600-1650-72500-1900-83900
ಸಹಾಯಕ ಶಾಖಾ ವ್ಯವಸ್ಥಾಪಕರ ಹುದ್ದೆ: 37900-950-39800-1100-46400-1250-53900-1450-62600-1650-70850
ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆ: 37900-950-39800-1100-46400-1250-53900-1450-62600-1650-70850
ಕಿರಿಯ ಸಹಾಯಕರ ಹುದ್ದೆ: 30350-750-32600-850-36000-950-39800-1100-46400-1250-53900-1450-58250
ಅಟೆಂಡರ್: 23500-550-24600-600-27000-650-29600-750-32600-850-36000-950-39800-1100-46400-1250-47650
ಅರ್ಜಿ ಸಲ್ಲಿಸುವ ವಿಧಾನ
ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ರಥಬೀದಿ ಮಂಗಳೂರು 575001 ಇದರ ಪ್ರಧಾನ ಕಚೇರಿಯಿಂದ ಕಚೇರಿಯ ಸಮಯ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ಒಳಗೆ ನೇರ ನೇಮಕಾತಿಯ ಅಧಿಸೂಚನೆ ಹಾಗೂ ನಿಗದಿತ ನಮೂನೆಯ ಅರ್ಜಿ ಪಡೆದು ಸೆಪ್ಟೆಂಬರ್ 24ರ ಸಂಜೆ 5 ಗಂಟೆಯೊಳಗೆ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಲಕೋಟೆಯಲ್ಲಿ ತುಂಬಿಸಿ, ಲಕೋಟೆಯ ಮೇಲ್ಭಾಗದಲ್ಲಿ ಅರ್ಜಿ ಸಲ್ಲಿಸುವ ಹುದ್ದೆಯನ್ನು ಸ್ಪಷ್ಟವಾಗಿ ಬರೆದು, ವ್ಯವಸ್ಥಾಪಕ ನಿರ್ದೇಶಕರು, ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ರಥಬೀದಿ ಮಂಗಳೂರು 575001 ಇವರಿಗೆ ನೇರವಾಗಿ ಸಲ್ಲಿಸಬೇಕು, ಇಲ್ಲವೇ ನೋಂದಾಯಿತ ಅಂಚೆಯ ಮೂಲಕ ಕಳುಹಿಸಿಕೊಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-09-2025. ಸಮಯ ಸಂಜೆ 5 ಗಂಟೆಯ ಒಳಗೆ.
ಅರ್ಜಿ ಶುಲ್ಕ: ಶಾಖಾ ವ್ಯವಸ್ಥಾಪಕರು, ಸಹಾಯಕ ಶಾಖಾ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1,500 ರೂ., ಪರಿಶಿಷ್ಟ ಜಾತಿ/ಪಂಗಡದವರಿಗೆ 1,000 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಕಿರಿಯ ಸಹಾಯಕರ ಹುದ್ದೆಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1,000 ರೂ., ಪರಿಶಿಷ್ಟ ಜಾತಿ/ಪಂಗಡದವರಿಗೆ 750 ರೂ. ನಿಗದಿಪಡಿಸಲಾಗಿದೆ. ಅಟೆಂಡರ್ ಹುದ್ದೆಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 750 ರೂ., ಪರಿಶಿಷ್ಟ ಜಾತಿ/ಪಂಗಡದವರಿಗೆ 500 ರೂ. ನಿಗದಿಪಡಿಸಲಾಗಿದೆ.
ಈ ನೇಮಕಾತಿ ಪ್ರಕಟಣೆಯನ್ನು ಯಾವುದೇ ಹಂತದಲ್ಲಿ, ಯಾವುದೇ ಕಾರಣ ನೀಡದೆ ಹಿಂದಕ್ಕೆ ಪಡೆಯುವ / ರದ್ದುಪಡಿಸುವ ಅಧಿಕಾರವನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ಇದರ ನೇಮಕಾತಿ ಸಮಿತಿಯು ಹೊಂದಿರುತ್ತದೆ. ಇಂತಹ ಸಂದರ್ಭಗಳಲ್ಲಿ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಅಥವಾ ಇನ್ನಾವುದೇ ನೇಮಕಾತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ವಿಶ್ವಕರ್ಮ ಸಹಕಾರ ಬ್ಯಾಂಕಿನ ದೂರವಾಣಿ ಸಂಖ್ಯೆ: 0824-2494711 ಸಂಪರ್ಕಿಸಬಹುದು.

