ನವದೆಹಲಿ: ಆಂಧ್ರಪ್ರದೇಶದ ಹಿರಿಯ ಸಹಕಾರಿ ವಲ್ಲಭನೇನಿ ಸುಧಾಕರ್ ಚೌಧರಿ ಕ್ರಿಭ್ಕೋ (ಕೃಷಕ್ ಭಾರತಿ ಸಹಕಾರಿ ಲಿ. KRIBHCO)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನುಭವಿ ಸಹಕಾರಿ ನಾಯಕ ಚಂದ್ರಪಾಲ್ ಸಿಂಗ್ ಯಾದವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ನ ಪದಾಧಿಕಾರಿಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಗಳು ಸೋಮವಾರ ಮುಕ್ತಾಯಗೊಂಡಿದ್ದು ಫಲಿತಾಂಶ ಘೋಷಣೆಯಾಗಿದೆ. ಎರಡೂ ಉನ್ನತ ಹುದ್ದೆಗಳಿಗೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾದ ಕಾರಣ ಸುಧಾಕರ್ ಚೌಧರಿ ಹಾಗೂ ಚಂದ್ರಪಾಲ್ ಸಿಂಗ್ ಯಾದವ್ ಅವಿರೋಧವಾಗಿ ಆಯ್ಕೆಯಾದರು. ಸುಗಮ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಇಬ್ಬರು ಸಚಿವರು ಎನ್ಸಿಯುಐ ಪ್ರಧಾನ ಕಚೇರಿಗೆ ಭೇಟಿ ನೀಡಿ ವೀಕ್ಷಕರಾಗಿ ಭಾಗವಹಿಸಿದ್ದರು. ಉತ್ತಮವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಗಳಲ್ಲಿ ಅಧಿಕಾರದ ಸುಗಮ ವರ್ಗಾವಣೆ ಸರ್ಕಾರದ ಗುರಿಯಾಗಿರುತ್ತದೆ ಎಂದು ಉನ್ನತ ಸಹಕಾರಿ ನಾಯಕರೊಬ್ಬರು ಹೇಳಿದ್ದು, ಕ್ರಿಭ್ಕೋ ನಾಯಕತ್ವ ಬದಲಾವಣೆ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು.

ಕ್ರಿಭ್ಕೋದ ಚುನಾಯಿತ ಮಂಡಳಿಯ ಸದಸ್ಯರು ಮತ್ತು ಇಬ್ಬರು ಸಚಿವರ ನಡುವೆ ತೀವ್ರ ಚರ್ಚೆಯ ನಂತರ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಕೇಂದ್ರ ಸಹಕಾರ ಇಲಾಖೆಯ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ಉತ್ತರ ಪ್ರದೇಶ ಸಹಕಾರ ಸಚಿವ ಜೆ.ಪಿ.ಎಸ್. ರಾಥೋಡ್ ಅಳೆದು ತೂಗಿ ಎರಡು ನಾಮಪತ್ರಗಳನ್ನು ಅಂತಿಮಗೊಳಿಸಿದರು ಎಂದು ತಿಳಿದುಬಂದಿದೆ. ಆದರೂ ಅಧ್ಯಕ್ಷರ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ಚುನಾಯಿತ ಮಂಡಳಿಯ ಹಲವು ನಿರ್ದೇಶಕರು ಅಧ್ಯಕ್ಷ ಹುದ್ದೆಗೆ ಸುಧಾಕರ ಚೌಧರಿ ಅವರ ಹೆಸರನ್ನು ವಿರೋಧಿಸಿದ್ದು, ಬೇರೆ ಅಭ್ಯರ್ಥಿಯನ್ನು ಪರಿಗಣಿಸಬೇಕೆಂದು ಪಟ್ಟುಹಿಡಿದಿದ್ದರು ಎಂದು ತಿಳಿದುಬಂದಿದೆ. ಬಳಿಕ ಸರ್ಕಾರದ ಉನ್ನತ ನಾಯಕತ್ವದ ಜೊತೆಗಿನ ಸಭೆಯ ಬಳಿಕ ಸುಧಾಕರ್ ಚೌಧರಿ ಹೆಸರನ್ನೇ ಅಂತಿಮಗೊಳಿಸಲಾಯಿತು ಎಂದು ಹೇಳಲಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಗುಜರಾತ್ನ ಮಗನ್ಭಾಯಿ ಪಟೇಲ್ ಮತ್ತು ಬಿಪಿನ್ ಪಟೇಲ್ ಅವರ ಹೆಸರುಗಳೂ ಪರಿಗಣನೆಯಲ್ಲಿದ್ದವು, ಆದರೆ ಬಿಪಿನ್ ಪಟೇಲ್ ಅಂತಿಮವಾಗಿ ಚಂದ್ರ ಪಾಲ್ ಸಿಂಗ್ ಯಾದವ್ ಅವರನ್ನು ಶಿಫಾರಸು ಮಾಡಿದರು.



ಮೋಹನ್ ಸ್ಪಿಂಟೆಕ್ಸ್ ಇಂಡಿಯಾ ಲಿಮಿಟೆಡ್ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಚೌಧರಿ, ಆಂಧ್ರಪ್ರದೇಶದ ವಿಜಯವಾಡದ ಪ್ರಮುಖ ಉದ್ಯಮಿ. ಅವರ ನಾಯಕತ್ವದಲ್ಲಿ ಮೋಹನ್ ಸ್ಪಿಂಟೆಕ್ಸ್ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಅತ್ಯಂತ ಗೌರವಾನ್ವಿತ ಗೃಹ ಜವಳಿ ತಯಾರಕರಲ್ಲಿ ಒಂದಾಗಿದೆ. ಅವರು ವಿಜಯವಾಡದ ಎನ್ಎಸ್ಎಂ ಪಬ್ಲಿಕ್ ಶಾಲೆಯಲ್ಲಿ (1978–1986) ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಾಬೂಜಿ ಶಿಕ್ಷಣ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ (1989–1993) ಕೈಗಾರಿಕಾ ಉತ್ಪಾದನಾ ತಂತ್ರಜ್ಞಾನಗಳಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಕ್ರಿಭ್ಕೋ ನೂತನ ಆಡಳಿತ ಮಂಡಳಿಯಲ್ಲಿ ಆರ್.ರಾಜೇಂದ್ರ, ಬಿಪಿನ್ ಪಟೇಲ್, ಬಿಜೇಂದ್ರ ಸಿಂಗ್, ಕವಿತಾ ಮಂಜರಿ, ಭಿಖಾಭಾಯಿ ಪಟೇಲ್, ಮಗನ್ಭಾಯ್ ಪಟೇಲ್, ಭನ್ವರ್ ಸಿಂಗ್ ಶೇಖಾವತ್, ಅಜಯ್ ರೈ ಮತ್ತು ಶಿಲ್ಪಿ ಅರೋರಾ ಅವರಿದ್ದಾರೆ.

