ಕಡಬ: ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 882.39 ಕೋಟಿ ರೂ. ವ್ಯವಹಾರ ನಡೆಸಿದ್ದು 3.29 ಕೋಟಿ ರೂ. ಲಾಭ ಗಳಿಸಿದೆ. ಈ ಪೈಕಿ ಸದಸ್ಯರಿಗೆ ಶೇ.16 ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಹೇಳಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಕಡಬದ ಅನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ಜರಗಿದ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸಂಘದ ವತಿಯಿಂದ ಸುಸಜ್ಜಿತ ರೈತಭವನ ನಿರ್ಮಿಸಿದರೆ ಅನುಕೂಲ ಎನ್ನುವ ಸದಸ್ಯ ನಾರಾಯಣ ಪೂಜಾರಿ ಪಾಲಪ್ಪೆ ಅವರ ಸಲಹೆಗೆ ಪ್ರತಿಕ್ರಿಯಿಸಿದ ರಮೇಶ್ ಕಲ್ಪುರೆ, ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಸಂಘದ ಹೆಸರಿನಲ್ಲಿ ಜಮೀನು ಖರೀದಿಸಿ ಅಲ್ಲಿ ಸುಸಜ್ಜಿತ ರೈತ ಭವನ ನಿರ್ಮಿಸುವ ಉದ್ದೇಶವಿದೆ ಎಂದು ಹೇಳಿದರು. ಸರಕಾರದ ಆದೇಶದಂತೆ ರಾಜ್ಯದ ಎಲ್ಲೆಡೆ ರೈತರಿಗೆ ಶೂನ್ಯ ಬಡ್ಡಿದರದ ಸಾಲವನ್ನು 5 ಲಕ್ಷ ರೂ. ತನಕ ಏರಿಸಿದ್ದರೂ ನಮ್ಮ ಜಿಲ್ಲೆಯ ರೈತರಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ ಎಂದು ಸದಸ್ಯ ಗಣೇಶ್ ಕೈಕುರೆ ಹೇಳಿದರು. ಸಯ್ಯದ್ ಮೀರಾ ಸಾಹೇಬ್, ಬಾಲಕೃಷ್ಣ ಭಟ್ ಮೂಜೂರುಕಟ್ಟ, ಗಿರೀಶ್ ರೈ ಪಿಜಕಳ, ಮೇದಪ್ಪ ಗೌಡ ಡೆಪ್ಪುಣಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 12 ಮಂದಿ ಫಲಾನುಭವಿಗಳಿಗೆ ಸಂಘದ ವತಿಯಿಂದ ಗಾಲಿಕುರ್ಚಿ ವಿತರಿಸಲಾಯಿತು. ನಿವೃತ್ತ ವೈದ್ಯಾಧಿಕಾರಿ ಡಾ|ತ್ರಿಮೂರ್ತಿ ಅವರನ್ನು ಗೌರವಿಸಲಾಯಿತು. ನಿರ್ದೇಶಕರಾದ ರಘುಚಂದ್ರ ಗೌಡ ಕೆ., ಹರಿಶ್ಚಂದ್ರ ಪಿ., ಸದಾನಂದ ಪಿ., ತಮ್ಮಯ್ಯ ಗೌಡ ಎಸ್., ರಾಮಚಂದ್ರ ಗೌಡ, ಪುರುಷೋತ್ತಮ, ಸತೀಶ್ಚಂದ್ರ ರೈ ಎಂ., ತನಿಯಪ್ಪ, ಲತಾ ರೆ, ಎಂ., ವಸಂತಿ ಉಪಸ್ಥಿತರಿದ್ದರು. ಸಂಘದ ಸಿಇಒ ಬಾಲಕೃಷ್ಣ ಜಿ. ವರದಿ ಮಂಡಿಸಿ, ನಾಗರಾಜ್ ಎನ್.ಕೆ. ಸಮ್ಮಾನ ಪತ್ರ ವಾಚಿಸಿದರು. ಸುಧಿರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಎ.ಪಿ.ಗಿರೀಶ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




