ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ತಾರಾನಾಥ ಕಾಯರ್ಗ ಘೋಷಣೆ
ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವ್ಯವಹಾರ ಮಾಡಿದ್ದು, 1.67 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಸಂಘದ ಸಭಾಂಗಣದಲ್ಲಿ ಭಾನುವಾರ ಜರಗಿದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರ ಸಹಕಾರದಿಂದ ಸಂಘವು ಸತತವಾಗಿ 23ನೇ ಬಾರಿ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.25 ಸಾಲವಸೂಲಾತಿ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ 3,525 ಸದಸ್ಯರಿದ್ದು, ರೂ. 5.72 ಕೋಟಿ ಪಾಲು ಬಂಡವಾಳ ಮತ್ತು ರೂ. 40.34 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರಿಗೆ ರೂ. 66.10. ಕೋಟಿ ಸಾಲ ವಿತರಿಸಿ, ವರ್ಷಾಂತ್ಯಕ್ಕೆ ರೂ. 58.07 ಕೋಟಿ ಹೊರಬಾಕಿ ಸಾಲ ಇರುತ್ತದೆ ಎಂದು ತಾರಾನಾಥ ಕಾಯರ್ಗ ತಿಳಿಸಿದರು.




ಪ್ರತಿದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ ಖರೀದಿ ವ್ಯವಹಾರ ಮಾಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 4.89 ಕೋಟಿ ರೂ. ವ್ಯವಹಾರ ಮಾಡಲಾಗಿದೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದರು.
ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಸಂಘದ ಅಧ್ಯಕ್ಷ್ಯ ತಾರಾನಾಥ ಕಾಯರ್ಗ ಮತ್ತು ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಕೆಲಸದಿಂದ ಸಂಘ ಒಳ್ಳೆಯ ವ್ಯವಹಾರ ಮಾಡಿ, 1.67 ಕೋಟಿ ರೂ. ಲಾಭ ತಂದಿರುವುದು ಸಂತೋಷ ತಂದಿದೆ. ಜೊತೆಗೆ ಸಮಾಜಸೇವೆ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗುರುತಿಸುವ ಕಾರ್ಯವನ್ನೂ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇತ್ತೀಚೆಗೆ ಸವಣೂರು ಪರಿಸರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹಲವು ರೈತರು ಅಡಿಕೆ, ತೆಂಗು, ರಬ್ಬರ್ ಮರಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘದ ಸದಸ್ಯರಾಗಿರುವ ರೈತರಿಗೆ ತುರ್ತು ಪರಿಹಾರ ನೀಡುವ ಬಗ್ಗೆ ಸಂಘದ ಆಡಳಿತ ಮಂಡಳಿ ತಿಂತನೆ ಮಾಡಿ, ಹಣಕಾಸು ನಿಧಿಯೊಂದನ್ನು ಸ್ಥಾಪಿಸಿದರೆ ಅದರಿಂದ ತುರ್ತು ಪರಿಹಾರ ನೀಡಬಹುದು ಎಂದು ಸಲಹೆ ನೀಡಿದರು.

ಪರ್ಯಾಯ ಬೆಳೆ ಅಗತ್ಯ:
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ ಉತ್ತಮ ಆತಿಥ್ಯ ಒಳಗೊಂಡ ಸಂಘದ ಮಹಾಸಭೆ ಹಬ್ಬದ ಸಂಭ್ರಮದಂತೆ ನಡೆದಿದೆ. ರಾಜ್ಯ ಸರಕಾರ ಒಂದು ಅಡಿಕೆ ಮರ ನಾಶವಾದರೆ 16 ರೂಪಾಯಿ ಬೆಲೆ ನಿಗದಿಪಡಿಸಿದೆ. ಇದು ತೀರಾ ಕಡಿಮೆ, ಇದನ್ನು ಹೆಚ್ಚು ಮಾಡಬೇಕು. ಅಡಿಕೆ ತೋಟದಲ್ಲಿ ಶೇಕಡಾ 33 ರಷ್ಟು ಹಾನಿ ಆದರೆ ಮಾತ್ರ ಪರಿಹಾರ ಎಂಬ ಸರಕಾರದ ನಿಯಮವನ್ನು ತಿದ್ದುಪಡಿ ಮಾಡಿ, ಕಡಿಮೆ ಹಾನಿಯಾದಾಗಲ್ಲೂ ಪರಿಹಾರ ನೀಡುವಂತೆ ಈ ಮಹಾಸಭೆಯ ಮೂಲಕ ನಿರ್ಣಯ ಮಾಡಬೇಕು ಎಂದು ಹೇಳಿದರು. ಅಡಿಕೆಗೆ ಪರ್ಯಾಯವಾಗಿ ಕೊಕ್ಕೋ, ಕಾಫಿ, ಕಾಳುಮೆಣಸು ಮೊದಲಾದ ಬೆಳೆಯನ್ನು ಬೆಳೆಸುವ ಬಗ್ಗೆ ಕೃಷಿಕರಲ್ಲಿ ಆಸಕ್ತಿ ಬೆಳೆಸಲು ಸಂಘವು ಕೈಜೋಡಿಸಬೇಕು, ಇದಕ್ಕೆ ಕೃಷಿಕ ಸಮಾಜ ಸಹಕಾರ ನೀಡಲಿದೆ ಎಂದು ಹೇಳಿದರು.

ಯಶಸ್ವಿನಿ ವಿಮಾ ಯೋಜನೆಯ ಬಗ್ಗೆ ಅರಿಯಡ್ಕ ಕೃಷ್ಣ ರೈ ತಿಳಮನೆ ಪುಣ್ಣಪ್ಪಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಈಗ ಮಂಗಳೂರಿನ ಆಸ್ಪತ್ರೆಗಳಲ್ಲಿ ಮಾತ್ರ ಯಶಸ್ವಿನಿ ಯೋಜನೆಯ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯ ಪುತ್ತೂರಿನಲ್ಲೂ ಸಿಗುವಂತೆ ಆಗಬೇಕು. ಈ ಬಗ್ಗೆ ಹಲವು ಸಲ ಮನವಿ ಮಾಡಲಾಗಿದೆ. ಈ ಮಹಾಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಮಾಡಿ ಪುತ್ತೂರಿನಲ್ಲಿ ಯಶಸ್ವಿನಿ ಯೋಜನೆಗೆ ಆಸ್ಪತ್ರೆಯ ಸೌಲಭ್ಯ ಸಿಗುವಂತೆ ಮಾಡಲು ಒತ್ತಾಯಿಸಲಾಗುವುದು ಎಂದರು. ಮಂಗಳೂರಿನ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯಿಂದ ಸಂಘದ ತುಂಬಾ ಮಂದಿ ಸದಸ್ಯರು ಪ್ರಯೋಜನ ಪಡೆದಿದ್ದಾರೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹಾಗೂ ಸದಸ್ಯ ಶ್ರೀಧರ ಗಿರಿಶಂಕರ್ ಸುಲಾಯ ಹೇಳಿದರು.

ಸವಣೂರು ಗ್ರಾಮ ಪಂಚಾಯತ್ ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ವಕೀಲ ಬೈತಡ್ಕ ಶೀನಪ್ಪ ಗೌಡ, ಕೃಷ್ಣಕುಮಾರ್ ರೈ ದೇವಸ್ಯ, ಪದ್ಮಯ್ಯ ಗೌಡ ಕರಂದ್ಲಾಜೆ, ಸಂಕಪ್ಪ ರೈ ಕಲಾಯಿ ಮೊದಲಾದವರು ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು.
ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ ಎನ್ ಕುಮಾರಮಂಗಲ, ಉದಯ ರೈ ಮಾದೋಡಿ, ಚೆನ್ನಪ್ಪಗೌಡ ನೂಜಿ, ಅಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು, ಉಪ ಕಾರ್ಯನಿರ್ವಹಣಾಕಾಧಿ ಜಲಜಾ ಎಚ್ ರೈ ವರದಿ ವಾಚಿಸಿದರು. ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಎ, ಸಿಬ್ಬಂದಿಗಳಾದ ಲೇಖಲತಾ, ಮನೋಜ್ ಎ, ಪವಿತ್ರಾ ಕೆ, ಪ್ರಕಾಶ್ ಕೆ, ಪ್ರಕಾಶ್ ಎಂ, ಪೂವಪ್ಪ ಎ, ಗಣೇಶ್ ಎ.ಎನ್, ಪ್ರಕಾಶ್ ಮೊಯ್ಲಿ, ಜಗದೀಶ್ ಕೆ, ಕಾರ್ತಿಕ್, ದಯಾನಂದ ಎಂ., ಮಾಸ್ ಸಂಸ್ಥೆಯ ಮ್ಯಾನೇಜರ್ ಯತೀಶ್, ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ ಕಲಾಯಿ, ವಿಶ್ವನಾಥ ಗೌಡ, ನವೋದಯ ಪ್ರೇರಕಿ ಪ್ರೇಮಾ ಅರೆಡಿ ಸಹಕರಿಸಿದರು.
ರಾಜ್ಯ ಜಾನಪದ ಪ್ರಚಂಡ ಪ್ರಶಸ್ತಿ ಪುರಸ್ಕೃತ, ಭೂತಾರಾಧನೆಯ ಕೆಲಸ ಮಾಡಿಕೊಂಡು ಬರುತ್ತಿರುವ ಡೊಂಬಯ್ಯ ಕಾಪೆಜಾಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಸ್ ಸಂಸ್ಥೆಗೆ ಅತೀ ಹೆಚ್ಚು ಅಡಿಕೆ ಮಾರಾಟ ಮಾಡಿದ ಜಯರಾಮ ರೈ ಪರನೀರು, ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಹಾಗೂ ತಿಮ್ಮಪ್ಪ ಗೌಡ ಮುಂಡಾಳ ಮತ್ತು ಅಂತಾರಾಷ್ಟ್ರೀಯ ಯೋಗಪಟು ಪ್ರಣಮ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ 48 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.



