ಎಸ್.ಕೆ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕರ ದಿನಾಚರಣೆಯಲ್ಲಿ ಡಾ.ಎಸ್.ಪಿ ಗುರುದಾಸ್ ಅಭಿಪ್ರಾಯ
ಮಂಗಳೂರು: ಯಾವುದೇ ವ್ಯಕ್ತಿ ದೇವಮಾನವ ಎಸನಿಸಿಕೊಳ್ಳಬೇಕಾದರೆ ಅವರ ನಡವಳಿಕೆ ಪರಿಶುದ್ಧವಾಗಿರಬೇಕು, ಜನರಿಗೆ ಅವರ ಮೇಲೆ ವಿಶ್ವಾಸ ಇರಬೇಕು, ನೈತಿಕ ಮೌಲ್ಯವುಳ್ಳ ಜೀವನ ಅವರದಾಗಿರಬೇಕು. ಹೀಗೆ ಪರಿಶುದ್ಧ ನಡವಳಿಕೆ ಇದ್ದರಷ್ಟೇ ದೇವಮಾನವ ಆಗಬಲ್ಲರು. ಅಂಥ ಮೇರು ವ್ಯಕ್ತಿತ್ವ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಅವರಲ್ಲಿತ್ತು ಎಂದು ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷರಾದ ಡಾ. ಎಸ್. ಪಿ ಗುರುದಾಸ್ ಅವರು ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಎಸ್.ಕೆ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಮಂಗಳವಾರ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಜೀವನ ಮತ್ತು ಮೌಲ್ಯಗಳು ಕುರಿತ ಭಾಷಣ ಸ್ಪರ್ಧೆಯ ಸಮಾರೋಪ ಸಮಾರಂಭ -ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾಷಣ ಎಂದರೆ ಬೌದ್ಧಿಕ ಅನ್ವೇಷಣೆ. ಮಾತು ಬೀರುವ ಪರಿಣಾಮ ಅದ್ಭುತ. ಒಬ್ಬರ ಜೀವನದ ಬಗ್ಗೆ ಭಾಷಣ ಮಾಡುತ್ತ ಹೋದಾಗ ಹೊಸ ಹೊಸ ಆಲೋಚನೆಗಳು, ಚಿಂತನೆಗಳು, ಹೊಸ ಬೆಳಕು ಮೂಡುತ್ತ ಹೋಗಬಹುದು. ಬಾಬುರಾಯ ಆಚಾರ್ಯರ ಬದುಕು ಇಂಥ ಮೌಲ್ಯವನ್ನು ನಮ್ಮ ನಡುವೆ ಬಿತ್ತುತ್ತದೆ. ಮೌಲ್ಯ ಎಂದರೆ ಸಾಧನಾ ಮೌಲ್ಯ ಮತ್ತು ಸಾಧ್ಯ ಮೌಲ್ಯ ಎಂಬ ಎರಡು ವಿಶಾಲ ಅರ್ಥಗಳನ್ನು ಒಳಗೊಂಡಿರುವಂಥದ್ದು. ಬಾಬುರಾಯ ಆಚಾರ್ಯರು ಬಂಗಾರವನ್ನು ಬಳಸಿಕೊಂಡು ಸಾಧ್ಯ ಮೌಲ್ಯಕ್ಕೆ ಮಹತ್ವ ನೀಡಿ ಉದ್ಯಮಿಯಾಗಿ ಬದಲಾದರು. ಕೆನರಾ ಜ್ಯುವೆಲರ್ ಬ್ರಾಂಡ್ ಸ್ಥಾಪಿಸಿದ್ದರು. ಬಂಗಾರದಿಂದ ನೂರಾರು ಜನರಗೆ ಉದ್ಯೋಗ ದೊರಕಿಸಿಕೊಡಬಲ್ಲ ಸೂಕ್ಷ್ಮತೆ ಅವರಲ್ಲಿತ್ತು. ಬಂಗಾರದ ಆಧ್ಯಾತ್ಮಿಕ ಮೌಲ್ಯವನ್ನು ಕೂಡಾ ಅರಿತರು. ಎಸ್.ಕೆ ಗೋಲ್ಡ್ಸ್ಮಿತ್ಸ್ ಸೊಸೈಟಿ ಆರಂಭಿಸಿ ಅದರ ಮೂಲಕವೂ ಹಲವು ಜನರಿಗೆ ಉದ್ಯೋಗ ಕೊಟ್ಟರು. ಬಂಗಾರದ ಕೆಲಸ ಮಾಡುವವರಿಗೆ ಲೋನ್ ಸಿಗದೇ ಇದ್ದಾಗ ತಾವೇ ಕಟ್ಟಿ ಬೆಳೆಸಿದ ಸಂಸ್ಥೆಯ ಮೂಲಕ ಸಾಲ ಒದಗಿಸಿಕೊಟ್ಟರು ಎಂದು ಬಾಬುರಾಯ ಆಚಾರ್ಯರ ಜೀವನದ ಬಗ್ಗೆ ವಿಶ್ಲೇಷಣೆ ಮಾಡಿದರು.


ಸಕಾಲಿಕ ಸ್ಪರ್ಧೆ: ತಮ್ಮ ಜೀವಿತಾವಧಿಯಲ್ಲಿ ಶಿಕ್ಷಣಕ್ಕೆ ಅಪಾರ ಮಹತ್ವ ನೀಡಿದ್ದ ಬಾಬುರಾಯ ಆಚಾರ್ಯರು, ಒಂದು ಸ್ಥಾನಕ್ಕೆ ಬೇಕಾದ ಪರಿಶುದ್ಧತೆ ಇರುವ ನಮ್ಮಲ್ಲಿ ಇರುವ ತನಕ ಮಾತ್ರ ಆ ಸ್ಥಾನದಲ್ಲಿರಬೇಕು. ಅದು ಇಲ್ಲವೆಂದಾದಲ್ಲಿ ಅದರಿಂದ ಹೊರಬರಬೇಕು ಎಂದು ಅವರು ಪ್ರತಿಪಾದಿಸಿದ್ದರು. ನಮಗೆ ಗೌರವ ಸಿಗಬೇಕಾದರೆ ಆಂತರಂಗಿಕವಾಗಿ ನಾವು ಪರಿಶುದ್ಧರಾಗಿರಬೇಕು ಎಂಬುದಕ್ಕೆ ಇವರು ನಿದರ್ಶನ ಆಗಿದ್ದರು. ಆಚಾರ್ಯರ ಸಂಸ್ಮರಣೆಯ ನಿಟ್ಟಿನಲ್ಲಿ ಇಂದಿನ ಭಾಷಣ ಸ್ಪರ್ಧೆ ಸಕಾಲಿಕವಾದುದು. ಈ ಮೂಲಕ ಅವರಿಗೆ ಗೌರವ ಸಲ್ಲಿಸುವ ಸತ್ ಸಂಪ್ರದಾಯ ಹಾಕಿದ್ದು ಉತ್ತಮ ನಡೆ ಎಂದು ಡಾ.ಎಸ್ ಪಿ ಗುರುದಾಸ್ ಬಣ್ಣಿಸಿದರು.
ಬಹಳ ಅರ್ಥಪೂರ್ಣ ಸಂಸ್ಮರಣೆ : ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಪ್ರತಿಯೊಂದು ಆತ್ಮವೂ ದಿವ್ಯಾತ್ಮವಾಗಿದೆ ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ, ಭಾಷಣ ಸ್ಪರ್ಧೆಯ ಮೂಲಕ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಸಂಸ್ಮರಣೆ ಮಾಡುತ್ತಿರುವುದು ಬಹಳ ಅರ್ಥಪೂರ್ಣ. ಹಿರಿಯರ ಹೆಜ್ಜೆ ಗುರುತುಗಳು ಬಹಳ ಬೇಗ ಮಾಸಿ ಹೋಗುತ್ತವೆ. ಭಾಷಣದ ನೆಪದಲ್ಲಾದರೂ ನಮ್ಮ ಹಿರಿಯರ ಕಾರ್ಯಗಳನ್ನು, ಅವರು ಬಿಟ್ಟು ಹೋದ ಆದರ್ಶ, ತತ್ವಗಳನ್ನು ನೆನಪು ಮಾಡಿಕೊಂಡ ಹಾಗಾಗುತ್ತದೆ. ಅವುಗಳ ದೂರದೃಷ್ಟಿಯ ಅರಿವಾಗುತ್ತದೆ. ಯಾರು ಇತರಿಗಾಗಿ ಬದುಕುತ್ತಾರೋ ಅವರು ದೈವತ್ವಕ್ಕೆ ಏರುತ್ತಾರೆ. ಹಿರಿಯರ ಹೆಜ್ಜೆ ಗುರುತುಗಳಲ್ಲಿ ನಾವು ಮುಂದುವರಿದಾಗ ಅವರ ಸತ್ಕಾರ್ಯಗಳನ್ನು ಮುಂದುವರಿಸುವ ಪ್ರೇರಣೆ ಲಭಿಸುತ್ತದೆ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯವನ್ನು ಒಗ್ಗೂಡಿಸಬೇಕಿದೆ. ಬದಲಾವಣೆಯ ಅಪೇಕ್ಷೆ ನಮ್ಮ ಒಳಗಿಂದ ಬರಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ನನ್ನದೇನು ಕೊಡುಗೆ ಎಂಬ ಬಗ್ಗೆ ಯುವ ಸಮುದಾಯ ಆಲೋಚಿಸುವಂತಾಗಬೇಕು ಎಂದು ಕಾರ್ಣಿಕ್ ವಿಶ್ಲೇಷಿಸಿದರು.
ಕೆನರಾ ಜ್ಯುವೆಲ್ಲರ್ಸ್ ಮಾಲೀಕ, ಪಾಲ್ಕೆ ಬಾಬುರಾಯ ಆಚಾರ್ಯರ ಮಗ ಧನಂಜಯ ಪಾಲ್ಕೆ ಮಾತನಾಡಿ, ಎಸ್.ಕೆ ಗೋಲ್ಡ್ಸ್ಮಿತ್ಸ್ ಸೊಸೈಟಿ ಆರಂಭವಾದ ಬಗೆ, ಮಾಜಿ ಸಿಎಂ ಎಸ್.ಆರ್ ಕಂಠಿಯವರ ಪ್ರೇರಣೆ ಮೊದಲಾದ ವಿಷಯಗಳನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರು, ವರ್ಷಕ್ಕೊಮ್ಮೆ ಸಂಸ್ಮರಣೆ ಮಾತ್ರ ಅಲ್ಲ, ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಮಾನವ ಬಾಬುರಾಯ ಆಚಾರ್ಯ ಅವರ ಚಿಂತನೆಗಳು ಇರುತ್ತವೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ರತ್ನಾವತಿ ಜೆ.ಬೈಕಾಡಿ ಮತ್ತು ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ಇದರ ಅಧ್ಯಕ್ಷರಾದ ಹರ್ಷವರ್ಧನ ನಿಟ್ಟೆ ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಮನೋಜ್ ವಂದಿಸಿದರು.

ಉದ್ಘಾಟನಾ ಸಮಾರಂಭ
ಬೆಳಗ್ಗೆ ಭಾಷಣ ಸ್ಪರ್ಧೆಯನ್ನು ಸೊಸೈಟಿಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ಅವರು ಉದ್ಘಾಟಿಸಿದರು. ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಶಿಕ್ಷಕಿ ರತ್ನಾವತಿ ಜೆ.ಬೈಕಾಡಿ, ಶ್ರೀ ವಿಶ್ವಕರ್ಮ ಕಲಾ ಪರಿಷತ್ನ ಅಧ್ಯಕ್ಷರಾದ ಹರ್ಷವರ್ಧನ್ ನಿಟ್ಟೆ ಮುಖ್ಯ ಅತಿಥಿಗಳಾಗಿದ್ದಾರೆ. ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ, ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಚಂದ್ರಶೇಖರ್ ಎ.ಎಸ್ ಉಪಸ್ಥಿತರಿದ್ದರು. ನಿರ್ದೇಶಕರಾದ ವೈ.ವಿ ವಿಶ್ವಜ್ಞಮೂರ್ತಿ ಪ್ರಾರ್ಥಿಸಿದರು. ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಸ್ವಾಗತಿಸಿದರು. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಮನೋಜ್ ವಂದಿಸಿದರು.

