ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ ಅಭಿಪ್ರಾಯ
ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲಿ ಒಂದಾಗಿರುವ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ತನ್ನ ಉನ್ನತ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸತತ ನಾಲ್ಕು ವರ್ಷಗಳ ಕಾಲ ಸಾಧನಾ ಪ್ರಶಸ್ತಿ ಪಡೆದುಕೊಂಡಿರುವುದು ಸಂಸ್ಥೆಯು, ಸಹಕಾರ ಕ್ಷೇತ್ರದಲ್ಲಿ ತನ್ನ ಉತ್ತಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅವರು ಬುಧವಾರ ಉಡುಪಿ ಶೋಕಮಾತಾ ಚರ್ಚಿನ ‘ಆವೇ ಮರಿಯ’ ಸಭಾಂಗಣದಲ್ಲಿ ಜರುಗಿದ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಆತಿಥಿಯಾಗಿ ಮಾತನಾಡಿದರು. ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸಾಮಾಜಿಕ ಹೊಣೆಗಾರಿಕೆಗೆ ಒತ್ತು ನೀಡುತ್ತಿರುವ ಸಂಘವು ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ, ಜೊತೆಗೆ ಸಮಾಜಮುಖಿ ಕಾರ್ಯನಿರ್ವಹಿಸುವ ಸಂಘ-ಸಂಸ್ಥೆಗಳಿಗೆ ನೀಡುತ್ತಿರುವ ಆರ್ಥಿಕ ನೆರವು ಇತರರಿಗೂ ಮಾದರಿಯಾಗಲಿ, ಸಂಘದ ಧ್ಯೇಯವಾಕ್ಯದಲ್ಲಿರುವಂತೆ ಉಳಿತಾಯ, ಹಂಚುವಿಕೆ ಅಭಿವೃದ್ಧಿಯನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸುತ್ತಿರುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜದ ಏಳಿಗೆಗಾಗಿ ಮತ್ತಷ್ಟು ಸಹಕಾರ ನೀಡಲಿ ಎಂದು ಹೇಳಿದರು. ಉಡುಪಿ ಶೋಕಮಾತಾ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ| ಡೆನಿಸ್ ಡೇಸಾರವರು ಆಶೀರ್ವಚನ ನೀಡಿ ಸಂಸ್ಥೆಯ ಮುಂದಿನ ಯೋಜನೆಗಳಿಗೆ ಶುಭ ಕೋರಿದರು.

ಸಂಘವು 8,187 ಸದಸ್ಯರನ್ನು ಹೊಂದಿದ್ದು, ರೂ. 1.20 ಕೋಟಿ ಪಾಲು ಬಂಡವಾಳ, ರೂ. 58.24 ಕೋಟಿ ಠೇವಣಿ, ರೂ. 49 ಕೋಟಿ ಹೊರಬಾಕಿ ಸಾಲ, ರೂ. 13.75 ಕೋಟಿ ಹೂಡಿಕೆ, ರೂ. 3.69 ಕೋಟಿ ನಿಧಿಗಳು ಹಾಗೂ ರೂ. 63.13 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಸಾಲ ವಸೂಲಾತಿಯಲ್ಲಿ 97 ಶೇಕಡಾ ಸಾಧನೆ ಮಾಡಿರುವ ಸಂಸ್ಥೆ, ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿ ಪಡೆದುಕೊಂಡಿದೆ. ಸಂಘವು 2025-26ನೇ ಹಣಕಾಸು ವರ್ಷದಲ್ಲಿ ಸುಮಾರು ರೂ. 285 ಕೋಟಿ ಒಟ್ಟು ವ್ಯವಹಾರ ನಡೆಸಿದ್ದು, ರೂ. 1.25 ಕೋಟಿ ನಿವ್ವಳ ಲಾಭ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕರಾದ ಸಂದೀಪ್ ಎ. ಫೆರ್ನಾಂಡಿಸ್ ರವರು ವಿಸ್ತ್ರತ ಮಾಹಿತಿ ನೀಡಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ 1997ರಲ್ಲಿ ಸ್ಥಾಪನೆಯಾದ ಸಂಘವು ಸಹಕಾರ ಕ್ಷೇತ್ರದಲ್ಲಿ ಮೂರು ದಶಕಗಳ ಸೇವೆಯನ್ನು ಪೂರ್ಣಗೊಳಿಸುವ ಹೊಸ್ತಿಲಿನಲ್ಲಿದ್ದು, ತನ್ನ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಯಾದ್ಯಂತ ವಿಸ್ತರಿಸಿದೆ. ಪ್ರಸ್ತುತ ಉಡುಪಿ, ಮಲ್ಪೆ, ಉದ್ಯಾವರ, ಶಿರ್ವ ಹಾಗೂ ಹೂಡೆ-ಕೆಮ್ಮಣ್ಣುವಿನಲ್ಲಿ ಒಟ್ಟು ಐದು ಶಾಖೆಗಳ ಮೂಲಕ ಸದಸ್ಯರು ಹಾಗೂ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿಗ್ ಸೇವೆಗಳನ್ನು ಒದಗಿಸುತ್ತಿದೆ. ಮುಂದಿನ ವರ್ಷದೊಳಗೆ ಸ್ವಂತ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಎರಡು ಹೊಸ ಶಾಖೆಗಳ ಆರಂಭ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದ್ದು, ಸದಸ್ಯರಿಗೆ ಇನ್ನಷ್ಟು ಆಧುನಿಕ ಹಾಗೂ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸಂಸ್ಥೆ ಬದ್ರವಾಗಿದೆ ಎಂದು ಸಂಘದ ಅಧ್ಯಕ್ಷರಾದ ಲೂಯಿಸ್ ಲೋಬೊರವರು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರುಗಳಿಗೆ 16 ಶೇಕಡಾ ಡಿವಿಡೆಂಡ್ ಘೋಷಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಜೆ.ಆರ್ ಲೋಬೊ ಮತ್ತು ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿದ ಶೋಕಮಾತಾ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ| ಡೆನಿಸ್ ಡೇಸಾರವರನ್ನು ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.






ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರುಗಳ 12 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಅಲ್ಲದೇ 16 ಮಂದಿ ಅನಾರೋಗ್ಯ ಮತ್ತು ಅಶಕ್ತರಿಗೆ ಸಂಸ್ಥೆಯ ವತಿಯಿಂದ ಆರ್ಥಿಕ ಸಹಾಯ ಮತ್ತು ಓಜೋನಮ್ ಹಿರಿಯ ನಾಗರೀಕರ ಕೇಂದ್ರ, ಸಂತೆಕಟ್ಟೆ ಹಾಗೂ ಮಾನಸ ಪುನರ್ ವಸತಿ ಮತ್ತು ತರಬೇತಿ ಕೇಂದ್ರ, ಪಾಂಬೂರು ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಡಾ| ಗಣನಾಥ ಎಕ್ಕಾರ್, ಕ್ರೈಸ್ತ ಸಮುದಾಯದ ಸೇವಾ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಸಮಾಜಸೇವಾ ಕಾರ್ಯಗಳಿಗಾಗಿ ಅಜ್ಜಲ್ ಅಸಾದಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಡಾ| ನೇರಿ ಕರ್ನೇಲಿಯೋ ಸ್ವಾಗತಿಸಿ, ಉಪಾಧ್ಯಕ್ಷರಾದ ಜೇಮ್ಸ್ ಡಿಸೋಜ ರವರು ವಂದಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಇಗೋಷಿಯಸ್ ಮೋನಿಸ್. ಪರ್ಸಿ ಜೆ. ಡಿಸೋಜ, ಆರ್ಚಿಬಾಲ್ಸ್ ಎಸ್. ಡಿಸೋಜ, ರಾಬರ್ಟ್ ಮ್ಯಾಕ್ಸಿಂ ಡಿಸೋಜ, ಲಾಯ್ಕೆಟ್ ಜೆ. ಕರ್ನೇಲಿಯೋ, ರಿಚರ್ಡ್ ಡಾಯಸ್, ಡಾಲಿ ವಿ. ಲೂವಿಸ್, ವಿಲಿಯಂ ಮಚಾದೊ, ಓನಿಲ್ ಜಿ. ಡಿಸೋಜ, ಜಿನವೀವ್ ಎಂ. ಮಿನೇಜಸ್, ಫ್ರಾಂಕ್ ಪೀಟರ್ ಕಾರ್ಡೋಜಾ, ಸಂಘದ ಸಿಬ್ಬಂದಿ ವರ್ಗ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ರಾಷ್ಟ್ರ ಗೀತೆಯ ನಂತರ ಸಹ ಭೋಜನದೊಂದಿಗೆ ಸಭೆಯು ಸಮಾಪನಗೊಂಡಿತು.

