ನವದೆಹಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (PACS) ಗ್ರಾಮೀಣ ಪ್ರದೇಶಗಳಲ್ಲಿನ ಸಮಗ್ರ ಸೇವಾ ಕೇಂದ್ರಗಳಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸಹಕಾರ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ‘ಒನ್ ಸ್ಟಾಪ್ ಶಾಪ್’ (OSS) ಉಪಕ್ರಮದಡಿ ರೈತರು ಹಾಗೂ ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಸೇವೆಗಳು, ಯೋಜನೆಗಳು, ಉತ್ಪನ್ನಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕವನ್ನು ಸ್ಥಳೀಯ ಮಟ್ಟದಲ್ಲೇ ಒದಗಿಸುವ ಕುರಿತು ಮಂಗಳವಾರ ನವದೆಹಲಿಯಲ್ಲಿ ಅಂತರ ಸಚಿವಾಲಯದ ಮಹತ್ವದ ಸಭೆ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ.ಆಶಿಶ್ ಭೂತಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪ್ಯಾಕ್ಸ್ಗಳ ವ್ಯಾಪಕ ಗ್ರಾಮೀಣ ಜಾಲ ಹಾಗೂ ಅಭಿವೃದ್ಧಿಯಾಗುತ್ತಿರುವ ಡಿಜಿಟಲ್ ಮೂಲಸೌಕರ್ಯವನ್ನು ಬಳಸಿಕೊಂಡು ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ಯಾಕ್ಸ್ಗಳ ಮೂಲಕ ಗ್ರಾಮೀಣ ಜನರಿಗೆ ಯಾವೆಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಒದಗಿಸಬಹುದು ಎಂಬುದನ್ನು ಗುರುತಿಸುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುರುತಿಸಲಾದ ಸೇವೆಗಳನ್ನು ಸೂಕ್ತ ಪ್ಯಾಕ್ಸ್ ಹಾಗೂ ಭೌಗೋಳಿಕ ಪ್ರದೇಶಗಳೊಂದಿಗೆ ಜೋಡಿಸಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಯಶಸ್ವಿಯಾದ ಬಳಿಕ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಯೋಜನೆ ಇದೆ. ಈ ಕ್ರಮದಿಂದ ಪ್ಯಾಕ್ಸ್ಗಳು ಕೇವಲ ಸಾಲ ನೀಡುವ ಸಹಕಾರಿ ಸಂಸ್ಥೆಗಳಾಗಿರದೆ, ಗ್ರಾಮ ಮಟ್ಟದ ಬಹುಸೇವಾ ಕೇಂದ್ರಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ರೈತರು ಮತ್ತು ಗ್ರಾಮೀಣ ನಾಗರಿಕರು ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಸಂಸ್ಥೆಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದ್ದು, ಒಂದೇ ಸೂರಿನಡಿ ಹಲವು ಸೇವೆಗಳನ್ನು ಪಡೆಯಲು ಅವಕಾಶ ದೊರೆಯಲಿದೆ.

ಯಾವೆಲ್ಲಾ ಕ್ಷೇತ್ರಗಳಿಗೆ ಸಂಪರ್ಕ?
ಒನ್ ಸ್ಟಾಪ್ ಶಾಪ್ ಪರಿಕಲ್ಪನೆಯಡಿ ಆಹಾರ ವಿತರಣೆ, ಆಹಾರ ಸಂಸ್ಕರಣೆ, ಕೃಷಿ ಮತ್ತು ರೈತರ ಕಲ್ಯಾಣ, ರಸಗೊಬ್ಬರ, ಪಂಚಾಯತ್ ರಾಜ್, ಗ್ರಾಹಕ ವ್ಯವಹಾರಗಳು, ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಭೂ ಸಂಪನ್ಮೂಲ ಸೇರಿದಂತೆ ಹಲವು ಕ್ಷೇತ್ರಗಳ ಸೇವೆಗಳನ್ನು ಪ್ಯಾಕ್ಸ್ಗಳೊಂದಿಗೆ ಜೋಡಿಸುವ ಕುರಿತು ಚರ್ಚಿಸಲಾಗಿದೆ.
ಈ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶ ಪ್ಯಾಕ್ಸ್ಗಳ ವ್ಯವಹಾರ ಚಟುವಟಿಕೆಗಳನ್ನು ವಿಸ್ತರಿಸುವುದಾಗಿದೆ. ವಿವಿಧ ಸರ್ಕಾರಿ ಸೇವೆಗಳು, ಉತ್ಪನ್ನಗಳು ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಪ್ಯಾಕ್ಸ್ಗಳ ಮೂಲಕ ಒದಗಿಸುವುದರಿಂದ ಸಹಕಾರಿ ಸಂಘಗಳಿಗೆ ಹೊಸ ವ್ಯವಹಾರ ಅವಕಾಶಗಳು ಹಾಗೂ ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗಬಹುದು. ಕಂಪ್ಯೂಟರೀಕರಣ, ಡಿಜಿಟಲ್ ಸೇವೆಗಳು ಮತ್ತು ಹೊಸ ಆರ್ಥಿಕ ಚಟುವಟಿಕೆಗಳ ಮೂಲಕ ಪ್ಯಾಕ್ಸ್ಗಳನ್ನು ಆಧುನೀಕರಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಈ ಉಪಕ್ರಮ ಮತ್ತಷ್ಟು ಬಲ ನೀಡಲಿದೆ.
ಕೇಂದ್ರ ಸರ್ಕಾರದ ‘ಸಹಕಾರದಿಂದ ಸಮೃದ್ಧಿ’ (Sahkar Se Samriddhi) ಪರಿಕಲ್ಪನೆಯಡಿ ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕಾಭಿವೃದ್ಧಿಯ ಪ್ರಮುಖ ಸಾಧನಗಳನ್ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ ಪ್ಯಾಕ್ಸ್ಗಳಿಗೆ ಸಾಲ ವಿತರಣೆಯ ಜೊತೆಗೆ ಸರ್ಕಾರಿ ಸೇವೆ, ತರಬೇತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಂಪರ್ಕದಂತಹ ಹಲವು ಜವಾಬ್ದಾರಿಗಳನ್ನು ನೀಡುವ ಚಿಂತನೆ ಮುಂದುವರಿದಿದೆ.
ಸಭೆಯಲ್ಲಿ ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಿದ್ಧಾರ್ಥ್ ಜೈನ್ ಸೇರಿದಂತೆ ವಿವಿಧ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾದರೆ, ದೇಶದಾದ್ಯಂತ ಇರುವ PACSಗಳ ಜಾಲವು ಸಾಲ, ಸರ್ಕಾರಿ ಯೋಜನೆಗಳು, ಡಿಜಿಟಲ್ ಸೇವೆಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗ್ರಾಮೀಣ ಭಾರತದ ಅತಿದೊಡ್ಡ ಸೇವಾ ಜಾಲಗಳಲ್ಲಿ ಒಂದಾಗಿ ಬೆಳೆಯುವ ಸಾಧ್ಯತೆ ಇದೆ.









