ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ
ಮಂಗಳೂರು: ಯುವಜನತೆ ಸಮಾಜಕ್ಕೆ ಸದಾ ಒಳಿತಾಗುವ ಕೆಲಸಗಳನ್ನು ಮಾಡುತ್ತ ಸಾಗಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯ ಬಿರುಗಾಳಿಯಲ್ಲಿ ಸನಾತನದ ದೀಪ ನಂದಿ ಹೋಗುತ್ತಿದೆ. ಇಂತಹ ಸ್ಥಿತಿ ಬಾರದಂತೆ ಸಂಕಲ್ಪ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಎಸ್.ಕೆ. ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಂಗಳೂರಿನ ಬಾಳಂ ಭಟ್ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಿದ್ಯೆಯಿಂದ ಜ್ಞಾನ ಹೆಚ್ಚಾಗಬೇಕೇ ಹೊರತು ಅಹಂಕಾರ ಹೆಚ್ಚಾಗಬಾರದು. ಇದು ಮುಂದೆ ವಿಷಕ್ಕೆ ಸಮಾನವಾಗಿ ಬಿಡುತ್ತದೆ. ಜ್ಞಾನದಿಂದ ಅಹಂಕಾರ ಮೂಡಿದರೆ ಸಮಾಜಕ್ಕೆ ಒಳಿತಾಗದು. ವಿದ್ಯೆಯಿಂದ ಗಳಿಸಿದ ಜ್ಞಾನದಿಂದ ವಿನಯ ಹೆಚ್ಚಿದಂತೆ ಸಮಾಜಕ್ಕೆ ಒಳಿತು ಉಂಟಾಗುತ್ತದೆ ಎಂದರು.
ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಪಾಲ್ಕೆ ಬಾಬುರಾಯ ಆಚಾರ್ಯ ಅವರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ. ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಮೂಲಕ ನೂರಾರು ಮಕ್ಕಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಮತ್ತಷ್ಟು ಬಲ ನೀಡಿದಂತಾಗಿದೆ. ವಿದ್ಯಾರ್ಥಿಗಳು ನಮ್ಮ ದೇಶ, ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ವಿದ್ಯಾರ್ಥಿವೇತನ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ಇತರರಿಗೂ ನೆರವಾಗಬೇಕು ಎಂದರು.

ಎಸ್ಎಸ್ಎಲ್ಸಿಯ 181 ಮಂದಿ, ಪಿಯುಸಿಯ 221 ಮಂದಿ ಸೇರಿದಂತೆ 402 ವಿದ್ಯಾರ್ಥಿಗಳಿಗೆ 15,17,500 ರೂ. ಮೊತ್ತದ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ, ಸಹಾಯಧನ ನೀಡಲಾಯಿತು. ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ, ಜ್ಯೋತಿ ಎಂ.ವಿ, ರಮೇಶ್ ರಾವ್ ಯು., ಮಂಜುನಾಥ ಆಚಾರ್ಯ, ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪ್ರಕಾಶ್ ಆಚಾರ್ಯ ವಂದಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಸಂಘಗಳಿಂದ ಸಮಾಜಮುಖಿಯಾದ ಕೆಲಸಗಳು ನಡೆಯಬೇಕು. ಸಹಕಾರ ತತ್ವದ ಸಾರವನ್ನು ತಿಳಿದುಕೊಂಡು ಮಾನವ ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಉತ್ತಮವಾಗಿ ರೂಪುಗೊಳ್ಳುತ್ತದೆ. ಮಾನವೀಯ ಮಲ್ಯಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡು ಮುಂದೆ ಸಾಗಬೇಕು. ಸನಾತನವನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು.
ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು







