ಸಹಕಾರ ಭಾರತಿ ವಿಶೇಷ ಅಭ್ಯಾಸ ವರ್ಗದಲ್ಲಿ ಪ್ರಭುದೇವ ಆರ್ .ಮಾಗನೂರು ಅಭಿಪ್ರಾಯ
ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಂಟಿ ಸಹಯೋಗದಲ್ಲಿ ವಿಶೇಷ ಅಭ್ಯಾಸ ವರ್ಗವು ಕ್ಯಾಂಪ್ಕೋ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಸಹಕಾರ ಭಾರತಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಮರ್ಪಿತ ಕಾರ್ಯಕರ್ತರು, ಸಮರ್ಥ ನಾಯಕತ್ವ ಹಾಗೂ ನಿರಂತರ ಅಧ್ಯಯನ ಅತ್ಯಗತ್ಯವಾಗಿದ್ದು, ಸಹಕಾರ ಸಂಸ್ಥೆಗಳು ಸಮಾಜಮುಖಿ ಸೇವೆಯ ಮೂಲಕ ಇನ್ನಷ್ಟು ಬಲಿಷ್ಠವಾಗಬೇಕು ಎಂದು ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಸಹಕಾರ ಭಾರತಿಯ ಸ್ಥಾಪನೆಯಿಂದ ಇಂದಿನವರೆಗಿನ ಬೆಳವಣಿಗೆ, ಸಂಘಟನೆಯ ಧ್ಯೇಯ-ದೃಷ್ಟಿಕೋನ, ದೇಶಾದ್ಯಂತ ನಡೆಯುತ್ತಿರುವ ಸಂಘಟನಾ ಚಟುವಟಿಕೆಗಳು ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಕರ್ನಾಟಕದ ಅಧ್ಯಕ್ಷ ಪ್ರಭುದೇವ ಆರ್. ಮಾಗನೂರು ಮಾತನಾಡಿ, ಸಹಕಾರ ಭಾರತಿಯ ಸಂಘಟನೆಯನ್ನು ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಇನ್ನಷ್ಟು ಸದೃಢಗೊಳಿಸಲು ಪ್ರತಿಯೊಬ್ಬ ಪದಾಧಿಕಾರಿ ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಬೆಂಗಳೂರು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ನಾಗರಾಜಯ್ಯ ಮಾತನಾಡಿ, ಸಹಕಾರಿ ಸಂಘಗಳ ನಿರ್ದೇಶಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಕುರಿತು ವಿಶೇಷ ಉಪನ್ಯಾಸ ನೀಡಿ, ನಿರ್ದೇಶಕರು ಕಾನೂನುಬದ್ಧತೆ, ಪಾರದರ್ಶಕತೆ, ಉತ್ತಮ ಆಡಳಿತ ಹಾಗೂ ಸದಸ್ಯರ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಎರಡನೇ ಅವಧಿಯ ಸಂವಾದ ಕಾರ್ಯಕ್ರಮವನ್ನು ಸಹಕಾರ ಭಾರತಿ ಕರ್ನಾಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್.ಮಂಜುನಾಥ್ ನಡೆಸಿಕೊಟ್ಟರು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಭಾರತಿ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ( ಕ್ಯಾಂಪ್ಕೋ, ಜನತಾ ಬಜಾರ್ , ಹಾಪ್ಕಾಮ್ಸ್, ಪೌಲ್ಟ್ರಿ, ಮಹಿಳಾ ಬ್ಯಾಂಕ್, ಬಿಟಿಡಿಸಿ, ಕೆಎಂಎಫ್ ಮಂಗಳೂರು) ತಮ್ಮ ಸಂಸ್ಥೆಗಳ ಸಾಧನೆಗಳು, ಸವಾಲುಗಳು ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಲಹೆಗಳು ಮತ್ತು ಯೋಜನೆಗಳ ಕುರಿತು ಚರ್ಚೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಸಹಕಾರ ಭಾರತಿ ಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೊಂಕೋಡಿ ಪದ್ಮನಾಭ ಮಾತನಾಡಿ, ಪರಸ್ಪರ ಸಮನ್ವಯ, ಸೇವಾ ಮನೋಭಾವ ಹಾಗೂ ಸಂಘಟನಾ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಚಳವಳಿಯ ಮೂಲಕ ನಮ್ಮ ದೇಶವನ್ನುಪರಮ ವೈಭವದತ್ತ ಕೊಂಡೊಯ್ಯುವ ಸಂಕಲ್ಪ ಕೈಗೊಳ್ಳಬೇಕೆಂದು ಕರೆ ನೀಡಿದರು.
ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ಪೈ ಉಪಸ್ಥಿತರಿದ್ದರು. ಸಹಕಾರ ಭಾರತಿ ಮಂಗಳೂರು ಮಹಾನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪದಾಧಿಕಾರಿಗಳು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.






