ನವದೆಹಲಿ: ಹಿರಿಯ ಸಹಕಾರಿ ಮತ್ತು ಸಹಕಾರ ಭಾರತಿ ಸಂಸ್ಥಾಪಕ ಸದಸ್ಯ ಸತೀಶ್ ಮರಾಠೆ ಅವರನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ನೇಮಿಸಲಾಗಿದೆ.

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಭಾರತೀಯ ರಿಸರ್ವ್ ಬ್ಯಾಂಕ್ನೊಂದಿಗೆ ಸಮಾಲೋಚಿಸಿ, ಅಧಿಸೂಚನೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಈ ನೇಮಕಾತಿ ಕಲ್ಪಿಸಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿರುವ ಮರಾಠೆ, ಬ್ಯಾಂಕಿಂಗ್, ಸಹಕಾರಿ ಅಭಿವೃದ್ಧಿ ಮತ್ತು ಗ್ರಾಮೀಣ ಹಣಕಾಸಿನಲ್ಲಿ ಅಪಾರ ಅನುಭವ ಹೊಂದಿದ್ದಾರೆ.

ಫೆಬ್ರವರಿ 1, 1950ರಂದು ಜನಿಸಿದ ಸತೀಶ್ ಮರಾಠೆ ಬಾಂಬೆ ವಿಶ್ವವಿದ್ಯಾಲಯದಿಂದ ವಾಣಿಜ್ಯ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (ಜನರಲ್) ಮತ್ತು ಭಾರತೀಯ ವಿದ್ಯಾ ಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ (ಚಿನ್ನದ ಪದಕ ವಿಜೇತ) ಪಡೆದಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿ, ಮುಂದೆ ಜನಕಲ್ಯಾಣ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. 2002–2006ರ ಅವಧಿಯಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ನ ಅಧ್ಯಕ್ಷ ಮತ್ತು ಸಿಇಒ ಕೂಡ ಆಗಿದ್ದರು. 1979ರಲ್ಲಿ ಸ್ಥಾಪನೆಯಾದ ಸಹಕಾರ ಭಾರತಿಯ ಸ್ಥಾಪಕ ಸದಸ್ಯರೂ ಆಗಿದ್ದರು. ಅಂದಿನಿಂದ 35,000ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳೊಂದಿಗೆ ಸಹಕಾರ ಭಾರತಿಯು ಭಾರತದ ಅತಿದೊಡ್ಡ ಸಹಕಾರಿ ವಲಯದ ಎನ್ಜಿಒ ಆಗಿ ಬೆಳೆದಿದೆ.



ಹಲವಾರು ವರ್ಷಗಳಿಂದ ಹಣಕಾಸು ಮಂತ್ರಿಗಳೊಂದಿಗೆ ಬಜೆಟ್ ಪೂರ್ವ ಸಭೆಗಳಲ್ಲಿ ಸಹಕಾರಿ ವಲಯವನ್ನು ಪ್ರತಿನಿಧಿಸಿರುವ ಸತೀಶ್ ಮರಾಠೆಯವರು, ರಾಷ್ಟ್ರೀಯ ವಸತಿ ಬ್ಯಾಂಕಿನ ನಿರ್ದೇಶಕರಾಗಿ, ಐಸಿಎಐನ ಭಾರತೀಯ ದಿವಾಳಿತನ ವೃತ್ತಿಪರರ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾಗಿ, ಲಕ್ಷ್ಮಣರಾವ್ ಇನಾಮದಾರ್ ರಾಷ್ಟ್ರೀಯ ಸಹಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಅಕಾಡೆಮಿ (LINAC) ಉಪಾಧ್ಯಕ್ಷರಾಗಿ ಮತ್ತು ಹೊಸ ಸಹಕಾರ ನೀತಿಯನ್ನು ರಚಿಸುವ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೊಡುಗೆಗಳನ್ನು ಗುರುತಿಸಿ, ಮರಾಠೆ ಅವರಿಗೆ 2015ರಲ್ಲಿ ಇಫ್ಕೋದಿಂದ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





