ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಘ, ಶ್ರೀಶಾ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಂ.ಎಸ್.ಗುರುರಾಜ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು.
https://chat.whatsapp.com/FCEnlTkAKCC0MGPhXtX4i4
ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಎಂ.ಎಸ್ ಗುರುರಾಜ್ ಅವರು, ಶ್ರೀಶಾ ಸೌಹಾರ್ದ ಸೊಸೈಟಿಯು 2019ರಲ್ಲಿ ಉನ್ನತ ಧ್ಯೇಯೋದ್ದೇಶಗಳೊಂದಿಗೆ ಆರಂಭಗೊಂಡಿತು. ಶಿಸ್ತುಬದ್ಧ ಹಾಗೂ ಪಾರದರ್ಶಕ ವ್ಯವಹಾರದ ಮೂಲಕ ಗಳಿಸಿದ ಲಾಭದ ದೊಡ್ಡ ಪಾಲನ್ನು ಮರಳಿ ಸಮಾಜಕ್ಕೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನೀಡುತ್ತ ಬರುತ್ತಿದೆ. ಪ್ರಥಮ ವರ್ಷದಲ್ಲೇ ನಿವ್ವಳ ಲಾಭ ಗಳಿಸಿ ಸಾಧನೆಯ ಶಿಖರ ಏರಲು ಆರಂಭಿಸಿತು. 2025 -26ನೇ ಸಾಲಿನಲ್ಲಿ 2.25 ಕೋಟಿ ರೂ. ನಿವ್ವಳ ಲಾಭ ಗಳಿಸಿ ದಾಖಲೆ ನಿರ್ಮಿಸಿದೆ. ಸಾಲ ವಸೂಲಾತಿಯಲ್ಲಿ ಶೇ.98.5ರ ಗುರಿ ತಲುಪಿರುವುದೇ ಇಷ್ಟು ಲಾಭ ಗಳಿಸಲು ಕಾರಣ. ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಾತಿಯೂ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿರುವುದಕ್ಕೆ ಆಡಳಿತ ಮಂಡಳಿಯ ಸಲಹೆ, ಮಾರ್ಗದರ್ಶನಗಳ ಜೊತೆಗೆ ಸಿಬ್ಬಂದಿ ವರ್ಗದ ಅವಿರತ ಶ್ರಮವೇ ಕಾರಣ. ಆರಂಭದಿಂದಲೂ ಸತತವಾಗಿ ಸಹಕಾರಿಗೆ ‘ಎ’ ಶ್ರೇಣಿ ದೊರೆಯುತ್ತಿದೆ. ಈ ವರ್ಷ ಶ್ರೀಶಾ ಸೊಸೈಟಿಯ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸೊಸೈಟಿಯು ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ಧನಸಹಾಯ ನೀಡುತ್ತಿದೆ. 2024ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಸಹಕಾರಿಯೆಂಬ ರಾಜ್ಯ ಪ್ರಶಸ್ತಿ ಶ್ರೀಶಾಗೆ ದೊರೆತಿದೆ ಎಂದರು.

ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘಕ್ಕೆ ರೂ.50000 ಚೆಕ್ ಹಸ್ತಾಂತರಿಸಲಾಯಿತು. ಕೊಣಾಜೆ ಬಳಿಯ ಪಜೀರು ಗೋಶಾಲೆಗೆ ರೂ.20000 ಹಾಗೂ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ರೂ.20000 ಚೆಕ್ ಅನ್ನು ಅವೆರಡರ ಟ್ರಸ್ಟಿ ಡಾ.ಪಿ. ಅನಂತಕೃಷ್ಣ ಭಟ್ ಅವರಿಗೆ ನೀಡಲಾಯಿತು. ಫರಂಗಿಪೇಟೆ ಬಳಿಯಿರುವ ವೃದ್ಧಾಶ್ರಮಕ್ಕೆ ರೂ.20000 ನೀಡಲಾಯಿತು. ಇದೇ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನಿಸಲಾಯಿತು.
ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಡಿಸೋಜ, ಶಾಖಾ ಪ್ರಬಂಧಕರಾದ ದೀಪ್ತಿ, ಕುಸುಮಾ ಐತಾಳ್ ಹಾಗೂ ಲಕ್ಷ್ಮೀ ಮಹಾಸಭೆಯ ವಿವಿಧ ನಡಾವಳಿಗಳನ್ನು ಓದಿ, ದಾಖಲಿಸಿ ಸದಸ್ಯರ ಒಪ್ಪಿಗೆ ಪಡೆದರು. ಶ್ರೀಶಾ ಸೊಸೈಟಿಯ ನಿರ್ದೇಶಕ ಸುರೇಶ್ ಬೈಂದೂರು ಸ್ವಾಗತಿಸಿ, ಪ್ರಸನ್ನ ಕುಮಾರ ವಂದಿಸಿದರು. ಖ್ಯಾತ ನಿರೂಪಕ ಆರ್.ಜಿ.ಪ್ರಸನ್ನ ಹಾಗೂ ವಿದ್ಯಾ ರಾವ್ ಕಾರ್ಯಕ್ರಮ ನಿರೂಪಿಸಿದರು. ರಂಜನಾ ಹೆಗಡೆ ಪ್ರಾರ್ಥಿಸಿದರು.


