ವಿಜಯಪುರದಲ್ಲಿ ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆಯಲ್ಲಿ ಜಿ. ನಂಜನ ಗೌಡ ಸಲಹೆ
ವಿಜಯಪುರ : ಸೌಹಾರ್ದ ಸಹಕಾರ ಸಂಘಗಳು ಸೌಹಾರ್ದ ಕಾಯ್ದೆಯ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತ ಸದಸ್ಯರಿಗೆ ಉತ್ತಮ ಸೇವೆ ಒದಗಿಸಿ ಸಂಘಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನ ಗೌಡ ಕರೆ ನೀಡಿದರು.
https://chat.whatsapp.com/FCEnlTkAKCC0MGPhXtX4i4
ವಿಜಯಪುರದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರ ಸಂಘಗಳಿಗಾಗಿ ಆಯೋಜಿಸಲಾಗಿದ್ದ ಸೌಹಾರ್ದ ಸಹಕಾರ ಸಂಘಗಳ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳ ಪದಾಧಿಕಾರಿಗಳು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಸಂಘದಿಂದ ನೀಡಲಾದ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ಕಾನೂನಿನ ಪ್ರಕಾರ ನಿರ್ದೇಶಕ ಮಂಡಳಿಯ ಜವಾಬ್ದಾರಿ ನಿಶ್ಚಿತವಾಗುತ್ತದೆ. ಆದ್ದರಿಂದ ಪಾರದರ್ಶಕ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರಿಗೆ ಗುಣಮಟ್ಟದ ಸೇವೆ ನೀಡುವುದು ಅತ್ಯಗತ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕ ಸಂಜಯ್ ಬಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರ ಸಂಘಗಳ ಜವಾಬ್ದಾರಿ ಹೆಚ್ಚಾಗಿದ್ದು, ಪರಸ್ಪರ ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಸಹಕಾರ ಚಳವಳಿಯನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿ, ಜಿಲ್ಲಾ ಸೌಹಾರ್ದ ಸಹಕಾರ ಸಂಘಗಳ ಒಕ್ಕೂಟದ ಉದ್ದೇಶಗಳು ಹಾಗೂ ಕಾರ್ಯವೈಖರಿಯ ಕುರಿತು ಮಾರ್ಗದರ್ಶನ ನೀಡಿದರು.


ಮುಖ್ಯ ಅತಿಥಿ, ಮಾಜಿ ಸಚಿವ ಹಾಗೂ ವಿಜಯಪುರ ಶ್ರೀ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣ ಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ತಮ್ಮ 20 ವರ್ಷಗಳ ಅನುಭವವನ್ನು ಹಂಚಿಕೊಂಡು, ಸಾಲ ವಿತರಣೆ ಮತ್ತು ವಸೂಲಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿದರೆ ಸಹಕಾರ ಸಂಘಗಳು ಉತ್ತಮ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಮಾಜಿ ನಿರ್ದೇಶಕ ಸುಭಾಷ್ ಇಂಡಿ ಮಾರ್ಗದರ್ಶನ ನೀಡಿದರು. ಹಿರಿಯ ಸಹಕಾರಿಗಳಾದ ಅರುಣ ವಾರದ, ಪರಶುರಾಮ ಚಿಂಚಲಿ, ದೀಪಕ್ ಶಿಂತ್ರೆ, ಸಿದ್ದು ಮಲ್ಲಿಕಾರ್ಜುನಮಠ, ಯಮನಪ್ಪ ಸಾತಿಹಾಳ, ಚಡಚಣದ ಚಂದ್ರಶೇಖರ ಪಾಟೀಲ, ತಾಳಿಕೋಟೆಯ ರಾಜು ಹಂಚಾಟೆ, ಸಿಂದಗಿಯ ಆರ್. ಡಿ. ಕುಲಕರ್ಣಿ, ವಿವೇಕಾನಂದ ಶಿರೋಳ್ಕರ್, ಇಂಡಿಯ ಬಿ ಎಸ್. ಪಾಟೀಲ ಭಾಗವಹಿಸಿದ್ದರು.
ಪ್ರಾದೇಶಿಕ ಅಧಿಕಾರಿ ಬಸವರಾಜ ಹೊಂಗಳ ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟನೆಯ ಬಳಿಕ ಅಧ್ಯಕ್ಷ ಜಿ. ನಂಜನ ಗೌಡ ಅವರು ವಿವಿಧ ಸೌಹಾರ್ದ ಸಹಕಾರ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನದ ಅಧಿವೇಶನದಲ್ಲಿ ಪಿಎಫ್ ಸಲಹೆಗಾರ ಕೆ.ಡಿ. ನಾಡಗೇರಿ ಅವರು ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಪಿಎಫ್ ಹಾಗೂ ಇಎಸ್ಐ ಸಂಬಂಧಿತ ಮಹತ್ವದ ಮಾಹಿತಿ ನೀಡಿದರು. ಸೌಹಾರ್ದ ಅಭಿವೃದ್ಧಿ ಅಧಿಕಾರಿ ಬಸವರಾಜ ಎಸ್. ಸ್ವಾಗತಿಸಿದರು. ಪ್ರತಿಭಾ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






