ಟೈಬ್ರೇಕರ್ನಲ್ಲಿ ಗೆಲುವು ದಾಖಲಿಸಿದ ರಾಜ್ಯದ ಹಿರಿಯ ಸಹಕಾರಿ
ನವದೆಹಲಿ: ಕಳೆದ ಶನಿವಾರ ನಡೆದಿದ್ದ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್ಸಿಯುಐ) ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಹಿರಿಯ ಸಹಕಾರಿಗಳು ಗೆಲುವು ಸಾಧಿಸಿದ್ದಾರೆ. ಬೆಳಗಾವಿಯ ಹಿರಿಯ ನಾಯಕ ಅಣ್ಣಾಸಾಹೇಬ್ ಜೊಲ್ಲೆ ರಾಜ್ಯಮಟ್ಟದ ಸಹಕಾರಿ ಒಕ್ಕೂಟಗಳು ಮತ್ತು ಸಂಘಗಳ (ಪಶ್ಚಿಮ ಮತ್ತು ದಕ್ಷಿಣ ಭಾರತ) ಕ್ಷೇತ್ರದ ಸ್ಥಾನದಿಂದ ಗೆಲುವು ಸಾಧಿಸಿದರೆ, ಹಿರಿಯ ಸಹಕಾರಿ ಧುರೀಣ ಎಚ್.ಕೆ ಪಾಟೀಲ್ ಜಿದ್ದಾಜಿದ್ದಿನ ಸಮರದಲ್ಲಿ ಟೈಬ್ರೇಕರ್ನಲ್ಲಿ ಜಯ ಸಾಧಿಸಿದ್ದಾರೆ. ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿರುವುದು ವಿಶೇಷ.
https://chat.whatsapp.com/FCEnlTkAKCC0MGPhXtX4i4
ರಾಷ್ಟ್ರೀಯ ಒಕ್ಕೂಟಗಳ ಕ್ಷೇತ್ರದಲ್ಲಿ ಎನ್ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ (11 ಮತಗಳು), ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾನಿ (10), ನಾಫೆಡ್ ನಿರ್ದೇಶಕ ಮೋಹನ್ಬಾಯ್ ಕುಂದರಿಯಾ (9) ಗೆಲುವು ದಾಖಲಿಸಿದರು. ರಾಜ್ಯ ಸಹಕಾರಿ ಸಂಘಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ಷೇತ್ರದಲ್ಲಿ ವಿನಯ್ ಶಾಹಿ ಮತ್ತು ಜೀನಾ ಪೋತ್ಸಂಗ್ಬಮ್ ವಿಜಯಿಯಾದರು. ಬಿಹಾರ ರಾಜ್ಯ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿರುವ ವಿನಯ್ ಕುಮಾರ್ ಶಾಹಿ ಒಡಿಶಾದ ಪ್ರಬಾಸಿನಿ ಸಾರಂಗಿ ಅವರನ್ನು 11-6 ಮತಗಳಿಂದ ಸೋಲಿಸಿದರೆ, ಮಣಿಪುರದ ಜೀನಾ ಪೋತ್ಸಂಗ್ಬಮ್ ಅವರು ಮಂಗಳಜಿತ್ ರೈ ವಿರುದ್ಧ 15-2 ಮತಗಳಿಂದ ಜಯ ಗಳಿಸಿದರು.
ರಾಜ್ಯಮಟ್ಟದ ಸಹಕಾರಿ ಒಕ್ಕೂಟಗಳು ಮತ್ತು ಸಂಘಗಳ (ಪಶ್ಚಿಮ ಮತ್ತು ದಕ್ಷಿಣ ಭಾರತ) ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸುಲಭ ಗೆಲುವು ಸಾಧಿಸಿದರು. ಅತ್ಯಂತ ರೋಚಕ ಸಮರದಲ್ಲಿ ರಾಜ್ಯ ನಗರ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿ ಫೆಡರೇಶನ್ಗಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಹಿರಿಯ ಸಹಕಾರಿ ಧುರೀಣ ಎಚ್.ಕೆ ಪಾಟೀಲ್ ಮತ್ತು ಸುನಿಲ್ ಗುಪ್ತಾ ತಲಾ ನಾಲ್ಕು ಮತಗಳನ್ನು ಗಳಿಸಿದರು. ಟೈ ಫಲಿತಾಂಶ ಬಂದಿದ್ದರಿಂದ ಚುನಾವಣಾ ನಿಯಮಗಳ ಪ್ರಕಾರ ವಿಜೇತರನ್ನು ಲಾಟರಿ ಮೂಲಕ ನಿರ್ಧರಿಸಲಾಯಿತು. ಅದೃಷ್ಟದ ಲಾಟರಿ ಆಯ್ಕೆಯಲ್ಲಿ ಎಚ್.ಕೆ ಪಾಟೀಲ್ ಗೆಲುವು ಸಾಧಿಸಿದರು.

ಬಹು-ರಾಜ್ಯ ಸಹಕಾರಿ ಸಂಘಗಳ ಕ್ಷೇತ್ರದಿಂದ ಸಹಕಾರ ಭಾರತಿ ಬೆಂಬಲಿತ ನಕುಲ್ ಕಾಡು 14 ಮತಗಳೊಂದಿಗೆ ವಿಜಯಶಾಲಿಯಾದರು. ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸಂಜಯ್ ಭೆಂಡೆ ಸೋಲು ಅನುಭವಿಸಿದರು.
ಈಗಾಗಲೇ ಹತ್ತು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರವೀಣ್ ದರೇಕರ್, ಜಿ.ಟಿ.ದೇವೇಗೌಡ, ಅಗಡಿ ಅಶೋಕ್, ಜಿ.ಹೆಚ್.ಅಮೀನ್, ಸುನೀಲ್ ಕುಮಾರ್, ಟಿ.ಪ್ರಸಾದ್ ದೋರ, ಮೇಘನಾದ್ ಪಾಲ್, ಮುದಿತ್ ವರ್ಮ, ಧನಂಜಯ್ ಸಿಂಗ್ ಮತ್ತು ಡಿ.ಎನ್. ಠಾಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.






