ರಾಜಾಪುರ ಸಾರಸ್ವತ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ಅಭಿಮತ
ಕಾರ್ಕಳ: ಪ್ರತಿಷ್ಠಿತ ರಾಜಾಪುರ ಸಾರಸ್ವತ ಕೋ ಆಪರೇಟಿವ್ ಸೊಸೈಟಿಗೆ ಸೋಮವಾರ ಸಂಜೆ ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ಪೊರೆ ಭೇಟಿ ನೀಡಿದ್ದು ಅವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
30 ವರ್ಷದ ಹಿಂದೆ 300 ಚದರ ಅಡಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಿಸಿದ್ದ ಅಂದಿನ ಅವಿಭಜಿತ ದಕ್ಷಿಣ ಜಿಲ್ಲಾಮಟ್ಟದ ಗ್ರಾಮೀಣ ಭಾಗದ ಸಹಕಾರಿ ಸಂಸ್ಥೆ ಇಂದು ಸ್ವಂತ ನಿವೇಶನದಲ್ಲಿ ಮುಖ್ಯ ಕಚೇರಿಯ ಸಭಾಂಗಣದ ಪಕ್ಕದಲ್ಲಿ ಖರೀದಿಸಿದ ನಿವೇಶನಲ್ಲಿ ನಾಲ್ಕು ಅಂತಸ್ತಿನ 45,000 ಚದರ ಅಡಿ ವಾಣಿಜ್ಯ ಕಟ್ಟಡ ಸಂಕೀರ್ಣವನ್ನು ಸ್ಥಾಪಿಸಿ 3 ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್ ( ಭಾರತ್ ಸಿನೆಮಾಸ್ ), ದೇಶದ ಪ್ರತಿಷ್ಠಿತ ವಿಶಾಲ್ ಮಾರ್ಟ್ ಮತ್ತು ಸ್ಥಳೀಯ ಉದ್ಯಮ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಆಹಾರ ಮಳಿಗೆಗೆ ಬಾಡಿಗೆ ನೀಡಿರುವ ಸಹಕಾರ ಸಿಂಧೂರ ಕಟ್ಟಡದ ಆಧುನಿಕ ವ್ಯವಸ್ಥೆಗಳನ್ನು ವೀಕ್ಷಿಸಿ ಸಂಜಯ ಪಾಚ್ಪೊರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರಿ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಖಾಸಗಿ ವ್ಯವಸ್ಥೆಯ ಶೋಷಣೆ, ಲಾಭಕೋರತನದ ನಡವಳಿಕೆಗೆ ಪರ್ಯಾಯವಾಗಿ ಜೀವನದ ಪ್ರತಿಯೊಂದು ಅವಶ್ಯಕತೆಗಳಿಗೆ ಮತ್ತು ಸಮರ್ಪಕ ಸೇವೆಗೆ ಸಹಕಾರಿ ಕ್ಷೇತ್ರದ ಅವಶ್ಯಕತೆ ಬಹಳಷ್ಟಿದ್ದು, ರಾಜಾಪುರ ಸಾರಸ್ವತ ಕೋ ಆಪರೇರೇಟಿವ್ ಸೊಸೈಟಿಯಂತಹ ಸಹಕಾರಿ ಸಂಸ್ಥೆಗಳು ಮಾದರಿಯಾಗಿ ಮೂಡಿಬರುತ್ತಿರುವುದು ಸಹಕಾರಿ ಕ್ಷೇತ್ರದ ಮೇಲೆ ಜನರಿಗೆ ಹೆಚ್ಚಿನ ವಿಶ್ವಾಸ ಮೂಡಿಸುತ್ತಿದೆ ಎಂದು ಸಂಜಯ್ ಪಾಚ್ಪೊರೆ ಸಂತಸ ವ್ಯಕ್ತಪಡಿಸಿದರು. ಸಹಕಾರಿ ಕ್ಷೇತ್ರದಲ್ಲಿ ಸಂಸ್ಕಾರಯುತ, ಪ್ರಾಮಾಣಿಕ ವ್ಯಕ್ತಿಗಳು ಹೆಚ್ಚು ತೊಡಗಿಕೊಂಡಾಗ, ಸಹಕಾರಿ ಕ್ಷೇತ್ರದ ಶುದ್ಧತೆ, ಬದ್ಧತೆ ಮತ್ತು ಆಧುನಿಕತೆಗೆ ಹೆಚ್ಚಿನ ಬಲ ಸಿಕ್ಕಂತಾಗುತ್ತದೆ ಎಂದು ವಿವರಿಸಿದರು. ಸಹಕಾರ ಭಾರತಿ ಪ್ರಪಂಚದ ಏಕೈಕ ಸರಕಾರೇರ ರಾಜಕೀಯರಹಿತ ಸ್ವಯಂಸೇವಾ ಸಂಸ್ಥೆಯಾಗಿ ಕಳೆದ 48 ವರ್ಷಗಳಿಂದ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕು ಆಯಾಮವನ್ನು ಕೊಡುವ ಕೆಲಸವನ್ನು ಸಂಘಟನಾತ್ಮಕ, ರಚನಾತ್ಮಕ ಆಂದೋಲನಾತ್ಮಕ ಮತ್ತು ಪ್ರಾತಿನಿಧ್ಯಾತ್ಮಕವಾಗಿ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಸಂಸ್ಥೆಯ ಹುಟ್ಟು ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು. ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಸಕ್ರಿಯವಾದ ರಾಜ್ಯ ಘಟಕ ಜೊತೆಗೆ ದೇಶಾದ್ಯಂತ 700ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಸಕ್ರಿಯವಾದ ಜಿಲ್ಲಾ ಸಮಿತಿ, ತಾಲೂಕು ಮಟ್ಟದವರೆಗೆ ಸಾಕಾರ ಭಾರತಿ ಸಂಘಟನೆ ಬಲವಾಗಿ ವಿಸ್ತರಣೆಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ನೂತನ ಸಹಕಾರ ನೀತಿ, ಸಹಕಾರಿ ಕಾಯಿದೆ ಕಾನೂನುಗಳಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಸದಸ್ಯರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ, ಸಹಕಾರಿ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಲು ಸಹಕಾರಿ ಆಂದೋಲನವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಆತ್ರಾಡಿ ದಿನೇಶ್ ಹೆಗ್ಡೆ, ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಬೋಳ ಸದಾಶಿವ ಶೆಟ್ಟಿ, ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೆಹಳ್ಳಿ ಸುದೇಶ್ ನಾಯಕ್ , ಸಂಘಟನಾ ಕಾರ್ಯದರ್ಶಿ ವಿಜೇತ ನಾಯಕ್ ಬೆಳ್ಳಿರ್ಪಾಡಿ, ಸಹಕಾರ ಭಾರತೀಯ ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು, ಉಡುಪಿ ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಹಕಾರ ಭಾರತಿಯ ಕಾರ್ಕಳ ತಾಲೂಕು ಅಧ್ಯಕ್ಷರು ಹಾಗೂ ರಾಜಾಪುರ ಸರಸ್ವತ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

