ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಭಿಪ್ರಾಯ
ಮಂಗಳೂರು: ಭಾರತದ ಗ್ರಾಮೀಣ ಪ್ರದೇಶದ ಹೆಚ್ಚಿನ ಜನ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಉತ್ಪಾದನೆಯಾಗುವ ಹಾಲಿನ ಪ್ರಮಾಣದಲ್ಲಿ ಶೇ.80ರಷ್ಟು ಹಾಲು ಗ್ರಾಮೀಣ ಭಾಗದಿಂದಲೇ ಬರುತ್ತಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಭಾರತೀಯ ಡೇರಿ ಅಸೋಸಿಯೇಶನ್ ರಾಜ್ಯ ಶಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಶ್ವ ಹಾಲು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ, ಸ್ವಾವಲಂಬಿ ಜೀವನ ನಡೆಸಲು ಹೈನುಗಾರಿಕೆಯಲ್ಲಿ ಉತ್ತಮ ಅವಕಾಶವಿದೆ. ಹೈನುಗಾರಿಕೆ ನಂಬಿದರೆ ಜೀವನದಲ್ಲಿ ಯಶಸ್ಸು ಸಾಧ್ಯವಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಕಳೆದ ವರ್ಷ 3.30 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗಿತ್ತು, ಈ ವರ್ಷ ಪ್ರಗತಿ ಕಂಡಿದ್ದು 4.70 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೈನುಗಾರಿಕೆಗೆ ಸರ್ಕಾರ, ಸಹಕಾರಿ ಸಂಘಗಳಿಂದಲೂ ಪ್ರೋತ್ಸಾಹ ಸಿಗುತ್ತಿದ್ದು ಅದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ಡೇರಿ ಅಸೋಸಿಯೇಶನ್ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ ಮಾತನಾಡಿ, ಸಹಕಾರಿ ಸಂಘಗಳು ಹಾಗೂ ಹೈನುಗಾರರ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಅಸೋಸಿಯೇಶನ್ ನಿರಂತರ ಪ್ರಯತ್ನ ಮಾಡುತ್ತಿದೆ. ನವೆಂಬರ್ನಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ ನಡೆಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರಗಳು ಕೃಷಿ ಮಾದರಿಯಲ್ಲೇ ಹೈನುಗಾರರಿಗೆ ಬಡ್ಡಿ ರಹಿತ ಸಾಲ, ಸಾಲ ಮನ್ನಾ, ಕಡಿಮೆ ಬಡ್ಡಿ ಸಾಲವನ್ನು ನೀಡುವಂತಾಗಬೇಕು. ಹೈನುಗಾರರಿಗೆ ಹೆಚ್ಚಿನ ಸಬ್ಸಿಡಿ ಒದಗಿಸಬೇಕು ಎಂದರು.


ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್, ಎನ್ಡಿಡಿಬಿ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎನ್.ಬಿ. ಬೆಳವಾಡಿ, ಐಡಿಎ ರಾಜ್ಯ ಘಟಕ ಅಧ್ಯಕ್ಷ ಎನ್.ಬಿ. ಮರಾಠೆ, ರಾಜ್ಯ ಘಟಕ ಕಾರ್ಯದರ್ಶಿ ವಿಜಯೇಂದ್ರ ದೇಶಪಾಂಡೆ, ಮೈಸೂರು ಹಾಲು ಒಕ್ಕೂಟ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಕುಮಾರ್ ಬಿ.ಎನ್., ಧಾರವಾಡ ಹಾಲು ಒಕ್ಕೂಟ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೊಡಿಯಾಲ್ಮಠ್, ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಪಶುವೈದ್ಯಕೀಯ ಕಾಲೇಜು ಸಹಪ್ರಾಧ್ಯಾಪಕ ಡಾ.ಶಿವಕುಮಾರ್, ಎನ್ಎಸ್ಎಸ್ ಬೆಂಗಳೂರು ಜಂಟಿ ನಿರ್ದೇಶಕ ಡಾ.ರಾಘವೇಂದ್ರ ತಂತ್ರಿ, ಬೆಂಗಳೂರು ಕರ್ನಾಟಕ ಹಾಲು ಮಹಾಮಂಡಲ ಮಾಜಿ ನಿರ್ದೇಶಕ ಡಾ.ಬಿ.ಪಿ. ಸುರೇಶ್, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ, ಸುಧಾಕರ ಶೆಟ್ಟಿ, ಸವಿತಾ ಶೆಟ್ಟಿ, ನಂದಕುಮಾರ್, ಪ್ರಭಾಕರ್, ಶಿವಮೂರ್ತಿ, ಮಮತಾ ಶೆಟ್ಟಿ, ಹಾಲು ಉತ್ಪಾದಕರ ಒಕ್ಕೂಟ ಆಡಳಿತ ನಿರ್ದೇಶಕ ಜಯಕುಮಾರ್ ಉಪಸ್ಥಿತರಿದ್ದರು.
ಒಕ್ಕೂಟದ ಶೇಖರಣಾ ವಿಭಾಗದ ವ್ಯವಸ್ಥಾಪಕ ರವಿರಾಜ್ ಉಡುಪ ವಂದಿಸಿದರು. ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಜಾನೆಟ್ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ಹೈನುಗಾರರಿಗೆ ಗೌರವ

2025ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದಲ್ಲಿ ಅತಿಹೆಚ್ಚು ಹೈನುಗಾರಿಕೆ ಸಾಧನೆ ಮಾಡಿದ ಪಿಲಿಗೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯೆ ಜಲೀಲಾ (ದಿನಕ್ಕೆ ಸರಾಸರಿ 407 ಲೀಟರ್ ಹಾಲು), ಪಡುಮಾರ್ನಾಡು ಲಿಮಾಲ ಲಿನೆಟ್ ಗೊನ್ಸಾಲ್ವಿಸ್ (ದಿನಕ್ಕೆ ಸರಾಸರಿ 360 ಲೀಟರ್), ಉಡುಪಿ ಹಿರಿಯಡ್ಕದ ಸುಮಾ (ದಿನಕ್ಕೆ ಸರಾಸರಿ 352 ಲೀಟರ್ ) ಅವರನ್ನು ಗೌರವಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

