ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಜಿ.ಆರ್. ಪ್ರಸಾದ್ ಘೋಷಣೆ
ಮಂಗಳೂರು: ಪ್ರಣವ ಸೌಹಾರ್ದ ಸಹಕಾರಿ ಸಂಘವು ತನ್ನ ಗ್ರಾಹಕ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜ್ಯಾರಿಗೊಳಿಸಿದೆ. ಇನ್ನು ಮುಂದೆ ಸದಸ್ಯರು ಮೊಬೈಲ್ ಆ್ಯಪ್ ಬಳಸಿ ಪ್ರಣವ ಸೌಹಾರ್ದ ಸಂಸ್ತೆಯಲ್ಲಿನ ತಮ್ಮ ಉಳಿತಾಯ ಖಾತೆಯಿಂದ ಬೇರೆ ಯಾವುದೇ ಬ್ಯಾಂಕಿನ ಖಾತೆಗೆ ಆರ್ಟಿಜಿಎಸ್/ನೆಫ್ಟ್ ಮೂಲಕ ಹಣ ವರ್ಗಾಯಿಸಲು ಅಥವಾ ಯಾವುದೇ ಬ್ಯಾಂಕಿನ ಖಾತೆಯಿಂದ ಪ್ರಣವದ ತಮ್ಮ ಉಳಿತಾಯ ಖಾತೆಗೆ ಹಣ ವರ್ಗಾವಣೆ ಮಾಡಲು ಈ ವ್ಯವಸ್ಥೆ ಪ್ರಯೋಜನವಾಗಲಿದೆ ಎಂದು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ಆರ್ಥಿಕ ವರದಿಯನ್ನು ಮಂಡಿಸುತ್ತ ಮಾತನಾಡಿದ ಅವರು, ಸಂಸ್ಥೆಯ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕುರಿತು ಸದಸ್ಯರಿಗೆ ವಿವರಣೆ ನೀಡಿ, ಸಂಸ್ಥೆಯು ಎಲ್ಲಾ ಸ್ತರಗಳಲ್ಲಿ ಸಾಧಾರಣ ಶೇ.15ರಿಂದ ಶೇ.20 ವಾರ್ಷಿಕ ಬೆಳವಣಿಗೆ ತೋರುತ್ತ ಬಂದಿದೆ ಎಂದರು. ಹೊಸ ಹೊಸ ತಂತ್ರಜ್ಞಾನದ ಅಳವಡಿಕೆ ಮೂಲಕ ಗ್ರಾಹಕ ಸದಸ್ಯರಿಗೆ ಉತ್ತಮ ರೀತಿಯ ಸೇವೆಯನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು, ಈ ಸೌಲಭ್ಯವನ್ನು ನಿರ್ಮಿಸಿ ನಿರ್ವಹಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಆಟೋಮೇಷನ್ ಕ್ಲೌಡ್ ಸೊಲ್ಯೂಷನ್ಸ್ ಇವರ ತಂಡವನ್ನು ಶ್ಲಾಘಿಸಿದರು. ಸಂಸ್ಥೆಯು 2025 -26ರ ಆರ್ಥಿಕ ವರ್ಷದಲ್ಲಿ 75.80 ಲಕ್ಷ ರೂ. ಒಟ್ಟಾರೆ ಲಾಭ ಗಳಿಸಿದ್ದು, 63.61 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಮೈಸೂರು, ಮಡಿಕೇರಿ ಮತ್ತು ದಕ್ಷಿಣ ಕನ್ನಡ ಮೂರು ಜಿಲ್ಲೆಗಳಲ್ಲಿನ ತನ್ನ ಶಾಖೆಗಳಲ್ಲಿ 8000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸಂಸ್ಥೆಈ ಬಾರಿ ಸದಸ್ಯರಿಗೆ ಶೇ.10 ಲಾಭಾಂಶ ನೀಡುವುದಾಗಿ ಪ್ರಕಟಿಸಿದರು.
ಸದಸ್ಯರ ಪ್ರಯೋಜನಕ್ಕಾಗಿ ಜೂನ್ 1ರಿಂದ ಅನ್ವಯವಾಗುವ ಹಾಗೆ ಮಂಜೂರಾತಿ ಮತ್ತು ವಿತರಣೆಗೊಳ್ಳುವ ಎಲ್ಲಾ ರೀತಿಯ ಸಾಲದ ಮೇಲೆ ಶೇ.5 ಬಡ್ಡಿ ಕಡಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಮೂಲಕ ಅರ್ಹ ಸದಸ್ಯರಿಗೆ ಸಾಲದ ಮೇಲಿನ ಒಟ್ಟಾರೆ ಬಡ್ಡಿ ಪಾವತಿ ಕಡಿಮೆಯಾಗಲಿದೆ. ಮಂಗಳೂರಿನ ಕುಡುವು ಸಮೀಪ ಸಂಸ್ಥೆಯು ಖರೀದಿಸಿದ್ದ ನಿವೇಶನದಲ್ಲಿ ಪ್ರಧಾನ ಕಚೇರಿ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು ಮಳೆಗಾಲ ಕಳೆದ ಬಳಿಕ ಕೆಲಸ ಪ್ರಾರಂಭಿಸುವ ಬಗ್ಗೆ ಜಿ.ಆರ್ ಪ್ರಸಾದ್ ಮಾಹಿತಿ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್ ಪೈ ಸ್ವಾಗತಿಸಿದರು. ನಿರ್ದೇಶಕ ಮತ್ತು ಪ್ರಣವ ಚಾರಿಟೆಬಲ್ ಟ್ರಸ್ಟ್ ಕೋಶಾಧಿಕಾರಿ ಸೋಮಪ್ಪ ನಾಯಕ್ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಣವ ಸಹಕಾರಿ ಸಂಸ್ಥೆಯ ಎಲ್ಲ ನಿರ್ದೇಶಕರು, ಸಿಬ್ಬಂದಿ, ಸದಸ್ಯರು ಭಾಗವಹಿಸಿದ್ದರು. ನಿರ್ದೇಶಕ ಭಗವಾನ್ ದಾಸ್ ವಂದಿಸಿದರು. ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ವೇತಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




