ಮಂಗಳೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಾದ್ವಿ ಶ್ರೀ ಮಾತಾನಂದಮಯಿಯವರ ಗೌರವ ಮಾರ್ಗದರ್ಶನದೊಂದಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಸಾಧನೆಯೊಂದಿಗೆ 830 ಕೋಟಿ ರೂ. ವ್ಯವಹಾರ ನಡೆಸಿದ್ದು, 7.50 ಕೋಟಿ ರೂ. ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಶೇ.36.36 ಏರಿಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ತಿಳಿಸಿದ್ದಾರೆ.
https://chat.whatsapp.com/FCEnlTkAKCC0MGPhXtX4i4
ಬುಧವಾರ ಸಂಘದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ವ್ಯವಹಾರಕ್ಕಿಂತ ಈ ಬಾರಿ ಶೇ.23.20 ಏರಿಕೆಯಾಗಿದೆ. ಸಹಕಾರಿಯು 24 ಶಾಖೆಗಳ ಮೂಲಕ 458 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಠೇವಣಿ ಸಂಗ್ರಹದಲ್ಲಿ ಕಳೆದ ಸಾಲಿಗಿಂತ ಶೇ.24.92 ಹೆಚ್ಚಳವಾಗಿದೆ. ಸಾಲ ಮತ್ತು ಮುಂಗಡ 372 ಕೋಟಿ ರೂ., ಪಾಲು ಬಂಡವಾಳ 2.52 ಕೋಟಿ ರೂ., ನಿಧಿಗಳು 21 ಕೋಟಿ ರೂ. ಮತ್ತು ದುಡಿಯುವ ಬಂಡವಾಳ 482 ಕೋಟಿ ಹೊಂದಿದೆ ಎಂದು ತಿಳಿಸಿದರು. 2011ರಲ್ಲಿ ಕಾರ್ಯಾರಂಭವಾದ ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಎಲ್ಲ ಶಾಖೆಗಳು ಪ್ರಸ್ತುತ ಗಣಕೀಕೃತಗೊಂಡು ಕೋರ್ ಸಿಸ್ಟಂ ಸಾಫ್ಟ್ವೇರ್ ಅಳವಡಿಸಿದೆ. ಪ್ರತಿವರ್ಷ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ ಪಡೆಯುತ್ತಿದೆ. ಕಳೆದ ವರ್ಷ ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಿದೆ. ಸಹಕಾರಿಯ ಆಡಳಿತ ಕಚೇರಿ ಮತ್ತು ಪಂಪ್ವೆಲ್ ಶಾಖೆಯು ಪಂಪ್ವೆಲ್ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು 7 ಸಾವಿರ ಚದರಡಿಯ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಹಕಾರಿಯ ಐದು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರಿಯು ನಾಲ್ಕು ವರ್ಷಗಳಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಪಡೆದಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 8 ಸಾವಿರ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವಸಹಾಯ ಗುಂಪುಗಳಲ್ಲಿ ಸುಮಾರು 68 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಲೋಕನಾಥ ಶೆಟ್ಟಿ ಮಂಗಳೂರು, ಗಣಪತಿ ಭಟ್ ಸೇರಾಜೆ ಹಾಗೂ ಸಿಇಒ ದಯಾನಂದ ಶೆಟ್ಟಿ ಬಾಕ್ರಬೈಲು ಹಾಗೂ ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com

