ಬೋಳೂರಿನಲ್ಲಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಸ್ವಂತ ಕಚೇರಿ ಉದ್ಘಾಟಿಸಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿಕೆ
ಮಂಗಳೂರು: ವಾಣಿಜ್ಯ ಬ್ಯಾಂಕ್ಗಳು ಸಂಕುಚಿತವಾಗಿ ವಿಲೀನವಾಗುವ ಪರಿಸ್ಥಿತಿಗೆ ಬಂದಿವೆ. ಸಿರಿವಂತರಿಗೆ ಮಾತ್ರ ಅಲ್ಲಿ ಸಾಲ ಸಿಗುವ ಪರಿಸ್ಥಿತಿ ಇದೆ. ಆದರೆ, ಸಹಕಾರಿ ಬ್ಯಾಂಕುಗಳು ಇಂದು ಊರಿನ ಪ್ರತಿಯೊಬ್ಬರಿಗೂ ಸುಲಭದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಪ್ರತೀ ಮನೆಗೂ ಬೆಳಕಾಗಿದೆ ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಬದುಕು ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಬೋಳೂರು ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡ ‘ಸಹಕಾರ ಸೌಧʼವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಸಾಲ ಅತೀ ಹೆಚ್ಚು ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಅದ್ವಿತೀಯ ಸಾಧನೆ ಮಾಡಿದೆ. ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ಶೇ.100ರಷ್ಟು ಮರುಪಾವತಿ ಮಾಡುವ ಮೂಲಕ ಅವಿಭಜಿತ ದ.ಕ. ಜಿಲ್ಲೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಬಗ್ಗೆ ನಬಾರ್ಡ್ ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ಸಾಲ ನೀಡಲು ಕೂಡ ನಬಾರ್ಡ್ ಕೂಡ ಆಸಕ್ತಿ ವಹಿಸಿದೆ ಎಂದು ಹೇಳಿದರು.
ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇಂದು ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಆಗಿ ಮೇಲ್ದರ್ಜೆಗೇರಿದೆ. ಸಂಘದ ಮಾಜಿ ಅಧ್ಯಕ್ಷ ದಿ| ಕೆ. ಹರೀಶ್ಚಂದ್ರ ಅವರು ಬ್ಯಾಂಕ್ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ಸಹಕಾರ ಕ್ಷೇತ್ರಕ್ಕೆ ಬೆನ್ನೆಲುಬಾಗಿರುವುದರಿಂದ ಸಹಕಾರಿ ರಂಗ ಸಾಧನೆ ಮಾಡುವಂತಾಗಿದೆ ಎಂದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಶುಭ ಹಾರೈಸಿದರು. ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಮುಗ್ರೋಡಿ ಕನ್ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬೋಳೂರು ಜಾರಂದಾಯ ದೈವಸ್ಥಾನದ ಅಧ್ಯಕ್ಷ ಬಲರಾಜ ಸಿ.ಕೋಟ್ಯಾನ್ ಮುಖ್ಯ ಅತಿಥಿಗಳಾಗಿದ್ದರು. ಮಾಜಿ ಅಧ್ಯಕ್ಷರಾದ ಭಾಸ್ಕರ ಕೊಂಡೆ, ತುಕಾರಾಮ್ ಸನಿಲ್, ಸಂಘದ ಉಪಾಧ್ಯಕ್ಷ ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮಾ, ನೇಮಿರಾಜ್ ಶೆಟ್ಟಿ ಶ್ರೀರಂಜಿನಿ, ಸಿತೇಶ್ ಕೊಂಡೆ, ಗಣೇಶ್ ಶೆಟ್ಟಿ, ಶರ್ಮಿಳಾ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಪ್ರೀತಮ್ ಪಿ. ಪೂಜಾರಿ ಮತ್ತಿತರರು ಹಾಜರಿದ್ದರು.
ಎ. ಲೋಕೇಶ್ ಭಂಡಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ನಿರ್ದೇಶಕ ಸುಮಂತ್ ರಾವ್ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಸರ್ವರ ಸಹಕಾರದಿಂದ ದಾಪುಗಾಲು
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎ.ಲೋಕೇಶ್ ಭಂಡಾರಿ ಮಾತನಾಡಿ, ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಸರ್ವರ ನೆರವು, ಸಹಕಾರದ ಮೂಲಕ ಮುನ್ನಡೆಯುತ್ತಿದೆ. ಡಾ। ಎಂ. ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗ ದರ್ಶನದಲ್ಲಿ ಲಾಭದಾಯಕವಾಗಿ ನಡೆಯುತ್ತಿದೆ. ರೈತರಿಗೆ ಅಲ್ಪಾವಧಿ ಬೆಳೆಸಾಲ, ಮಧ್ಯಮಾವಧಿ ಕೃಷಿ ಸಾಲ, ಗೃಹ ನಿರ್ಮಾಣ, ವಾಹನ ಖರೀದಿ ಸಹಿತ ವಿವಿಧ ಸಾಲ ನೀಡುವ ಯೋಜನೆ ಇಲ್ಲಿದೆ. ಬೋಳೂರಿನ ನೂತನ ಕಟ್ಟಡದಲ್ಲಿ ಸುಸಜ್ಜಿತ ಸಭಾಭವನ ಇದೆ, ಶಾಖೆಗಳಲ್ಲಿ ಭದ್ರತಾ ಕೋಶ ಬಾಡಿಗೆಗೆ ಇದೆ ಎಂದು ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

