ತುಂಬೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಐದನೇ ವಾರ್ಷಿಕೋತ್ಸವದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಭಿಪ್ರಾಯ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ ಐದನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರವು ಭಾನುವಾರ ತುಂಬೆಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ, ತುಂಬೆ ಸರಕಾರಿ ಶಾಲಾಭಿವೃದ್ದಿ ಸಮಿತಿ, ಭಾಗ್ಯೋದಯ ಮಿತ್ರ ಕಲಾವೃಂದ ತುಂಬೆ, ಆಶೀರ್ವಾದ ಸೇವಾ ಸಂಘ ಮತ್ತು ಮಹಿಳಾ ಸೇವಾ ಸಂಘ ತುಂಬೆ, ಯುವಶಕ್ತಿ ಮಜಿ-ತುಂಬೆ ಹಾಗೂ ಶ್ರೀ ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ ತಂಜಕರಿಯ, ತುಂಬೆ ಇವರ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದ ಆರೋಗ್ಯದ ಸದುದ್ದೇಶ ಇಟ್ಟುಕೊಂಡು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿರಂತರವಾಗಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ಇತರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದೆ. ಈ ವೈದ್ಯಕೀಯ ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿ ಡಾ.ಮಂಜುಶ್ರೀ ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ ಯಾವುದೇ ಕಾಯಿಲೆಯ ಬಗ್ಗೆ ಕೊನೆಯ ಹಂತದಲ್ಲಿ ತಿಳಿಯುವ ಬದಲು ಇಂತಹ ಶಿಬಿರದಲ್ಲಿ ಭಾಗವಹಿಸಿ, ಪರೀಕ್ಷೆಗಳನ್ನು ಮಾಡುವ ಮೂಲಕ ಮುಂಚಿತವಾಗಿ ತಿಳಿಯಬಹುದು. ಪ್ರಸ್ತುತ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಹಣವೇ ಮುಖ್ಯವಲ್ಲ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ. ಆತ್ಮಶಕ್ತಿ ಸಹಕಾರಿ ಸಂಘದಿಂದ ಆಯೋಜಿಸುತ್ತಿರುವ 102ನೇ ಉಚಿತ ವೈದ್ಯಕೀಯ ಶಿಬಿರವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ತಿಳಿಸಿದರು.
ಸಂಘದ ನಿರ್ದೇಶಕರಾದ ಗೋಪಾಲ್ ಎಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಕುಲಾಲ ಸೇವಾ ಸಂಘದ ಗೌರವ ಸಲಹೆಗಾರರಾದ ಸೇಸಪ್ಪ ಮಾಸ್ಟರ್, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಸಾಲಿಯಾನ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಸುವರ್ಣ, ಶಾಲಾಭಿವೃದ್ಢಿ ಸಮಿತಿ ತುಂಬೆ ಇದರ ಅಧ್ಯಕ್ಷರಾದ ಸುದೀಪ್ ಮುದಲ್ಮೆ, ಭಾಗ್ಯೋದಯ ಮಿತ್ರ ಕಲಾ ವೃಂದ ತುಂಬೆ ಇದರ ಅಧ್ಯಕ್ಷರಾದ ಚರಣ್, ಯುವಶಕ್ತಿ ಮಜಿ ಇದರ ರಂಜನ್, ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ ತಂಜಕರಿಯ ತುಂಬೆ ಇದರ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ವೈದ್ಯಾಧಿಕಾರಿಯಾದ ಡಾ. ಪ್ರತ್ಯುಷಾ, ಡಾ.ಶಮ್ಲಿನ್ ಜೋಸೆಫ್, ಕುಲಾಲ ಮಹಿಳಾ ಸಂಘದ ಅಧ್ಯಕ್ಷರಾದ ಭಾರತಿ ಮತ್ತಿತರರು ಉಪಸ್ಥಿತರಿದ್ದರು.
150ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಿರಿಯ ಶಾಖಾಧಿಕಾರಿ ಸೌಮ್ಯಲತಾ ಸ್ವಾಗತಿಸಿ, ಕುಲಾಲ ಸೇವಾ ಸಂಘದ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ವಂದಿಸಿ, ಶಾಖಾಧಿಕಾರಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




