ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಆಶಯ
ಮಂಗಳೂರು: ಸರಕಾರಿ ಇಲಾಖೆಗಳಿಂದ ಸಹಕಾರ ರಂಗವನ್ನು ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಎಸ್.ಎನ್ ಪಾಟೀಲ್ ಎಂಬುವವರು ಸುಮಾರು ವರ್ಷಗಳ ಹಿಂದೆ ಸೌಹಾರ್ದ ಸಹಕಾರಿ ಸಂಘಗಳ ಸ್ಥಾಪನೆಗೆ ಮುಂದಡಿಯಿಟ್ಟರು. ಎಸ್.ಎನ್ ಪಾಟೀಲ್ ಅವರ ಪರಿಶ್ರಮದಿಂದ ಇಂದು ಸೌಹಾರ್ದ ಸಹಕಾರಿ ರಂಗವು ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಸ್ವಯಂಪ್ರೇರಿತವಾಗಿ ಮುನ್ನಡೆಯಬೇಕು ಎಂದು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಆಶಯ ವ್ಯಕ್ತಪಡಿಸಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಮಂಗಳೂರಿನ ಉರ್ವಸ್ಟೋರ್ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು ಹಾಗೂ ದ.ಕ. ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿಆಯೋಜಿಸಿದ 72ನೇ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೌಹಾರ್ದ ಸಹಕಾರಿ ಸಂಘಗಳು ದೊಡ್ಡಮಟ್ಟದಲ್ಲಿ ಬೆಳವಣಿಗೆಯಾದಾಗ ತಿದ್ದುಪಡಿಗಳ ಮೂಲಕ ಬಿಗಿ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು. ಸಹಕಾರಿ ಆಂದೋಲನದಲ್ಲಿ ಮಹಿಳೆಯರಿಗೆ ಹೆಚ್ಚು ಆಸಕ್ತಿ ಮೂಡಬೇಕು. ಮಹಿಳೆಯರು ಯಾವುದೇ ಒತ್ತಡವಿಲ್ಲದೆ ಸಾಲ ಪಡೆದು ಅದನ್ನು ಕ್ಲಪ್ತ ಸಮಯದಲಿ ಮರುಪಾವತಿ ಮಾಡುತ್ತಾರೆ. ಅದಕ್ಕಾಗಿ ಮಹಿಳೆಯರು ಹೆಚ್ಚು ಹೆಚ್ಚು ಈ ಕ್ಷೇತ್ರಕ್ಕೆ ಬರಬೇಕು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯಾಪ್ತಿಯ ಎರಡು ಜಿಲ್ಲೆಗಳಲ್ಲಿ ಕೃಷಿ ಕ್ಷೇತ್ರದ ಸಾಲ ಕಳೆದ 29 ವರ್ಷಗಳಿಂದ ಶೇ.100ರಷ್ಟು ಮರುಪಾವತಿಯಾಗುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.


ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಹಕಾರ ಕ್ಷೇತ್ರವೆಂದರೆ ಅದು ವಿಶೇಷವಾದ ಕ್ಷೇತ್ರ. ಸಹಕಾರ ಕ್ಷೇತ್ರದ ವ್ಯವಹಾರಗಳು ಒಲ್ಳೆಯ ರೀತಿಯಲ್ಲಿ ನಡೆಯುತ್ತದೆ. ಆತ್ಮನಿರ್ಭರ ಭಾರತದ ಚಿಂತನೆಗಳನ್ನು ಈ ಕ್ಷೇತ್ರದಲ್ಲಿ ಅಳವಡಿಸಬೇಕು ಎಂಬುದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಎಲ್ಲ ಕ್ಷೇತ್ರಗಳಲ್ಲು ಆತ್ಮನಿರ್ಭರರಾಗಬೇಕು. ದೆಹಲಿಯಲ್ಲಿ ಇವತ್ತು ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ಇದೆ. ಮಂಗಳೂರಿನಲ್ಲೂ ಆ ಪರಿಸ್ಥಿತಿ ಬಾರದಂತೆ ಮಾಡಲು ಪರಿಸರ ರಕ್ಷಣೆ ಆಗಬೇಕು. ಸೌಹಾರ್ದ ಸಹಕಾರಿ ಸಂಘಗಳು ತಮ್ಮ ತಮ್ಮ ಕ್ಷೇತ್ರದ ಕೆರೆ, ಪಾರ್ಕ್, ಪರಿಸರ ರಕ್ಷಣೆಯ ಕೆಲಸಕ್ಕೆ ಮುಂದಾಗಬೇಕು. ಸಹಕಾರ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದು ಕೂಡ ಸಹಕಾರಿಯಾಗಲಿದೆ. ಸರಕಾರದ ಹಸ್ತಕ್ಷೇಪ ಕಡಿಮೆಯಾದರೆ ಸಹಕಾರ ಕ್ಷೇತ್ರ ಗಟ್ಟಿಯಾಗಿ ಬೇರೂರಲಿದೆ ಎಂದು ಹೇಳಿದರು.
ಸಹಕಾರಿ ಧ್ವಜಾರೋಹಣ ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, ಸಹಕಾರ ಸಪ್ತಾಹ ಆಚರಣೆಯಿಂದ ಇಡೀ ದೇಶದ ಜನರಿಗೆ ಸಹಕಾರ ಕ್ಷೇತ್ರದ ಬಗ್ಗೆ ಅರಿವಾಗುತ್ತಿದೆ. ಸಹಕಾರಿಗಳನ್ನು ಎಚ್ಚರಿಸುವ ಹಬ್ಬವಾಗಿ ಸಹಕಾರ ಸಪ್ತಾಹ ನಡೆಯುತ್ತಿದೆ.ಈ ಬಾರಿ ಕಾಲೇಜು ವಿದ್ಯಾರ್ಥಿಗಳನ್ನೂ ಒಳಗೊಂಡು ಕಾರ್ಯಕ್ರಮ ಮಾಡಿರುವುದು ವಿಶೇಷವಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪುರಸ್ಕರಿಸಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರಾದ ಎ.ಸುರೇಶ್ ರೈ ಹಾಗೂ ಮೆಸ್ಕಾಂ ಅಧ್ಯಕ್ಷರಾಗಿ ನೇಮಕಗೊಂಡ, ಬೆಳ್ತಂಗಡಿಯ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕರಾದ ಎಚ್.ಎನ್ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ಎಂಬ ವಿಷಯದಲ್ಲಿ ಸಹಕಾರ ತರಬೇತಿ ಕೇಂದ್ರ ಮೂಡುಬಿದಿರೆ ಇಲ್ಲಿಯ ಉಪನ್ಯಾಸಕರಾದ ಬಿಂದು ನಾಯರ್ ಉಪನ್ಯಾಸ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರಾದ ಎ.ಸುರೇಶ್ ರೈ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ದೇವಿಪ್ರಸಾದ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಂಜೀವ ಅಡ್ಯಾರ್ ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ್, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಗೌರವ ಸಿಇಒ ಚೇತನ್ ಕೊಟ್ಟಾರಿ ಸಹಕರಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










