ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿ. ಮಂಗಳೂರು, ದ.ಕ. ಹಾಗೂ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು, ದ.ಕ. ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳ ಸಂಯುಕ್ತ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ನ.17ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯು “ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯವಾಕ್ಯದಡಿ ಮಂಗಳೂರಿನ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ರಿಂದ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ್ ದೇವಸ್ಯ ಶುಕ್ರವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಬೆಳಗ್ಗೆ 10ಕ್ಕೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ. 10.15ಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಡಿ.ವೇದವ್ಯಾಸ ಕಾಮತ್, ಮಂಗಳೂರು ವಿದ್ಯುತ್ ಸರಬರಾಜು ಮಂಡಳಿಯ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕರಾದ ಎಚ್.ಎನ್ ರಮೇಶ್, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ಎಂಬ ವಿಷಯದಲ್ಲಿ ಸಹಕಾರ ತರಬೇತಿ ಕೇಂದ್ರ ಮೂಡುಬಿದಿರೆ ಇಲ್ಲಿಯ ಉಪನ್ಯಾಸಕರಾದ ಬಿಂದು ನಾಯರ್ ಉಪನ್ಯಾಸ ನೀಡಲಿದ್ದಾರೆ. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ನ ಉಪಾಧ್ಯಕ್ಷರಾದ ನೀಲಯ ಎಂ.ಅಗರಿ, ನಿರ್ದೇಶಕರು ಹಾಗೂ ಸಿಇಒ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಸಂಜೀವ ಅಡ್ಯಾರ್, ನಿರ್ದೇಶಕರು ಹಾಗೂ ಸಿಇಒ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ನ ನಿರ್ದೇಶಕರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಮಾತನಾಡಿ, ಅಖಿಲ ಭಾರತ ಸಹಕಾರ ಸಪ್ತಾಹವು ದೇಶಾದ್ಯಂತ ಶುಕ್ರವಾರ ಆರಂಭವಾಗಿದೆ. ದ.ಕ. ಜಿಲ್ಲೆಯ ಮೊದಲ ಕಾರ್ಯಕ್ರಮ ಮಡಂತ್ಯಾರಿನಲ್ಲಿ ಆಯೋಜನೆಯಾಗಿದ್ದು, ಶನಿವಾರ ಬೆಸೆಂಟ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ಉರ್ವಸ್ಟೋರ್ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ದ.ಕ. ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದಿಂದ ಕಾರ್ಯಕ್ರಮ ಆಯೋಜನೆಯಾಗಿದೆ. ಮಂಗಳವಾರ ಪುತ್ತೂರಿನಲ್ಲಿ ಪುತ್ತೂರು ಮಹಿಳಾ ಕೋ ಆಪರೇಟಿವ್ ಸೊಸೈಟಿ ಹಾಗೂ ಜಿಲ್ಲೆಯ ಎಲ್ಲಾ ಮಹಿಳಾ ಕೋ ಆಪರೇಟಿವ್ ಸೊಸೈಟಿಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬುಧವಾರ ಕಾವಳಪಡೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು ಗುರುವಾರ ಸಹಕಾರ ಸಪ್ತಾಹದ ಸಮಾರೋಪದ ಸುಳ್ಯ ತಾಲೂಕಿನ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಎ.ಸುರೇಶ್ ರೈ, ನಿರ್ದೇಶಕರಾದ ಎಂ.ಎಸ್ ಗುರುರಾಜ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್, ಒಕ್ಕೂಟದ ಗೌರವ ಮುಖ್ಯಕಾರ್ಯನಿರ್ವಹಣಾಧಿಕಾರಿ ಚೇತನ್ ಕೊಟ್ಟಾರಿ ಹೆಚ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದೇಶದ ಸಹಕಾರಿ ಚಳವಳಿಯ ಪ್ರಗತಿಯ ಪಕ್ಷಿನೋಟ
ದೇಶದ ಸಹಕಾರಿ ಚಳುವಳಿಗೆ 121 ವರ್ಷಗಳ ಇತಿಹಾಸವಿದೆ. ಸಹಕಾರ ಚಳವಳಿ ಅನೇಕ ಏರುಪೇರುಗಳ ಮಧ್ಯೆ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರನಾಗಿ, ಶ್ವೇತಕ್ರಾಂತಿಯ ನೇತೃತ್ವ ವಹಿಸಿಕೊಂಡು ರೈತನ ಹಾಗೂ ಜನಸಾಮಾನ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಕಾರಣವಾಗಿದೆ. ಈ ದೇಶದ ಅರ್ಥ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಕೇಂದ್ರ ಸಹಕಾರ ಸಚಿವಾಲಯ ಸ್ಥಾಪಿಸಿ ಸಹಕಾರಿ ಡೇಟಾ ಬ್ಯಾಂಕ್ ಪ್ರಕಾರ ಇದುವರೆಗೆ 8.5. ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು 30 ಕೋಟಿ ಸದಸ್ಯರ ಬಳಗವನ್ನು ಹೊಂದಿದೆ. ಸಹಕಾರ ಕ್ಷೇತ್ರದ ಮೂಲಕ ಕೃಷಿ ಸಾಲ ವಿತರಣೆ 20%, ರಸಗೊಬ್ಬರ ವಿತರಣೆ 36%, ರಸಗೊಬ್ಬರ ಉತ್ಪಾದನೆ 26.5.%, ಸಕ್ಕರೆ ಉತ್ಪಾದನೆ 65% ಇದ್ದು ದೇಶದಲ್ಲಿ ಇಫ್ಕೋ, ಕ್ರಿಭ್ಕೋ, ಕ್ಯಾಂಪ್ಕೋ ಮುಂತಾದ ಅಂತರರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳು, ವಿದೇಶಿ ಬ್ಯಾಂಕುಗಳ ಮಾದರಿಯ ಗುಣಮಟ್ಟವುಳ್ಳ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಅರ್ಥ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆ.
ಕರ್ನಾಟಕ ಸಹಕಾರ ಚಳುವಳಿಯ ಪ್ರಗತಿಯ ಪಕ್ಷಿನೋಟ
ಕರ್ನಾಟಕದಲ್ಲಿ 46 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 40 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಕ್ರಿಯಾಶೀಲವಾಗಿದ್ದು 26 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಲಾಭದಲ್ಲಿವೆ. ಕರ್ನಾಟಕ ಸರ್ಕಾರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಅಲ್ಪಾವಧಿ ಸಾಲವನ್ನು, ನೇಕಾರರಿಗೆ, ಮೀನುಗಾರರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಮಹಿಳೆಯರಿಗೆ ನೀಡಲು ಯೋಜನೆಗಳನ್ನು ರೂಪಿಸಿದೆ. ಸಹಕಾರ ಸಚಿವರ ದೂರದೃಷ್ಟಿ ಹಾಗೂ ರಾಜ್ಯದ ರೈತರ ಏಳಿಗೆಗಾಗಿ ರೈತರು ಆರ್ಥಿಕವಾಗಿ ಸದೃಢವಾಗಲಿ ಹಾಗೂ ಎಲ್ಲಾ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುವಂತಾಗಬೇಕು ಎಂಬ ಉದ್ದೇಶದಿಂದ 2023-24ನೇ ಸಾಲಿನಲ್ಲಿ ರಾಜ್ಯದ 29,81,000 ರೈತರಿಗೆ ರೂ. 24,499.87 ಲಕ್ಷ ಕೃಷಿ ಸಾಲ ಒದಗಿಸಲಾಗಿದೆ. ರೈತರ ಆರೋಗ್ಯ ಹಿತದೃಷ್ಟಿಯಿಂದ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ದೊರಕುವಂತಾಗಲು ಸಹಕಾರ ಸಂಘಗಳಲ್ಲಿರುವ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2022-23ನೇ ಸಾಲಿನಲ್ಲಿ ಮರುಜಾರಿಗೊಳಿಸಲಾಗಿದ್ದು, ಸದರಿ ಯೋಜನೆಯಡಿ ರಾಜ್ಯದ 41.50 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಈ ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 39,000 ಸದಸ್ಯರು ಚಿಕಿತ್ಸೆ ಪಡೆದುಕೊಂಡಿದ್ದು, ರೂ. 69.00 ಕೋಟಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ.
ಸೌಹಾರ್ದ ಸಹಕಾರಿ ಕ್ಷೇತ್ರದ ಪಕ್ಷಿನೋಟ
ರಾಜ್ಯದಲ್ಲಿ 01.01.2001ರಿಂದ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಿದೆ. ಸಹಕಾರ ಕ್ಷೇತ್ರಕ್ಕೆ ಹೊಸ ಅಲೆಯನ್ನು ನೀಡುವ ಮೂಲಕ ಬದಲಾವಣೆಗೆ ನಾಂದಿ ಹಾಡಿರುವ, ಸಹಕಾರ ಕ್ಷೇತ್ರಕ್ಕೆ ವೇಗವನ್ನು ನೀಡಿರುವ ಶ್ರೇಯ ಸೌಹಾರ್ದ ಸಹಕಾರಿಗಳಿದ್ದು. ಇಂತಹ ಸೌಹಾರ್ದ ಸಹಕಾರಿಗಳ ಕಾರ್ಯಚಟುವಟಿಕೆಯ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತ, ಶಾಸನಬದ್ಧ ಕಾರ್ಯನಿರ್ವಹಣೆ, ತರಬೇತಿ, ಪ್ರಚಾರ, ಶಿಕ್ಷಣ ಚಟುವಟಿಕೆಗಳನ್ನು ಸೌಹಾರ್ದ ಸಹಕಾರ ಕ್ಷೇತ್ರದ ಮಾತೃಸಂಸ್ಥೆಯಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದು ಕಾರ್ಯನಿರ್ವಹಿಸುತ್ತ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದ ಪ್ರಗತಿ
ಸಹಕಾರ ಚಳವಳಿಗೆ ಹೊಸ ಚೈತನ್ಯ ನೀಡಿರುವ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಯಿಂದ ದ.ಕ. ಜಿಲ್ಲೆಯಲ್ಲಿ 137ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಸೌಹಾರ್ದ ಸಹಕಾರಿಗಳಲ್ಲಿ 92 ಇ-ಸ್ಟಾಂಪಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 3.8. ಲಕ್ಷಕ್ಕೂ ಹೆಚ್ಚು ಸದಸ್ಯರು ತೊಡಗಿಸಿಕೊಂಡಿದ್ದಾರೆ. 750ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ರೂ. 53.71 ಕೋಟಿ ಪಾಲು ಬಂಡವಾಳ, ರೂ. 1,462 ಕೋಟಿ ಠೇವಣಿ, ರೂ. 110 ಕೋಟಿ ನಿಧಿಗಳು, ರೂ. 1271 ಕೋಟಿ ಸಾಲ, ರೂ. 1650 ಕೋಟಿ ದುಡಿಯುವ ಬಂಡವಾಳ, ರೂ. 25 ಕೋಟಿ ಲಾಭದ ಹೆಗ್ಗಳಿಕೆ ಈ ಜಿಲ್ಲೆಯದ್ದಾಗಿದೆ. ಜಿಲ್ಲೆಯ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿಗಳ ಸಂಖ್ಯಾತ್ಮಕ ಬೆಳವಣಿಗೆಯ ಜೊತೆಗೆ ಗುಣಾತ್ಮಕ ಬೆಳವಣಿಗೆಯೂ ಸಹ ಆಡಳಿತ ಮಂಡಳಿಯ ಆದ್ಯತಾ ವಲಯವಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


