ರಾಷ್ಟ್ರೀಯ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ಒಕ್ಕೂಟದ ಸಮಾವೇಶದಲ್ಲಿ ಕರ್ನಾಟಕದ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅಭಿಪ್ರಾಯ
ನವದೆಹಲಿ: ಇಲ್ಲಿನ ವಿಜ್ಞಾನ ಭವನದಲ್ಲಿ ಸೋಮವಾರ ಆರಂಭವಾದ ಕೂಪ್ ಕುಂಭ – 2025 ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಕಾನೂನು, ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ರಾಷ್ಟ್ರೀಯ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ಒಕ್ಕೂಟ (NAFCUB)ದ ಅಧ್ಯಕ್ಷರಾದ ಹೆಚ್.ಕೆ. ಪಾಟೀಲ್, ಭಾರತದ ನಗರ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸಲು ಹೊಸದಾದ ನೀತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಹೆಚ್.ಕೆ ಪಾಟೀಲ್ ಅವರು, ಸಹಕಾರಿ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಸವಾಲುಗಳನ್ನು ಪರಿಹರಿಸುವಲ್ಲಿ NAFCUB ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ನೊಂದಿಗೆ ಸಹಕಾರ ಸಚಿವಾಲಯವು ಕೂಡ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿ, ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಕೇವಲ ಆರಂಭ ಎಂದು ಅಭಿಪ್ರಾಯಪಟ್ಟರು.
“ಕನಸುಗಳನ್ನು ಡಿಜಿಟಲೀಕರಣಗೊಳಿಸುವುದು, ಸಮುದಾಯಗಳನ್ನು ಸಬಲೀಕರಣಗೊಳಿಸುವುದು” ಎಂಬುದು ಈ ಸಮ್ಮೇಳನದ ಪ್ರಧಾನ ವಿಷಯವಾಗಿದ್ದು, ಮುಂದಿನ ದಶಕದಲ್ಲಿ ಸಹಕಾರಿ ಸಂಸ್ಥೆಗಳು ತಾಂತ್ರಿಕ ನಾವೀನ್ಯತೆಯೊಂದಿಗೆ ಆರ್ಥಿಕ ಸೇರ್ಪಡೆಯನ್ನೂ ಸಂಯೋಜಿಸಬೇಕೆಂದು ಕರೆ ನೀಡಿದರು. ಉತ್ತಮ ಆಡಳಿತ, ಡಿಜಿಟಲ್ ಅಳವಡಿಕೆ, ಎಂಎಸ್ಎಂಇ ಕ್ರೆಡಿಟ್ ವಿಸ್ತರಣೆ ಮತ್ತು ಜರ್ಮನಿ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ನಂತಹ ದೇಶಗಳಲ್ಲಿ ಸಹಕಾರಿ ಮಾದರಿಗಳಿಂದ ಜಾಗತಿಕ ಕಲಿಕೆಯ ಮೇಲೆ ಕೇಂದ್ರೀಕರಿಸಿದ ಭವಿಷ್ಯದ ದೃಷ್ಟಿಕೋನದ ಬಗ್ಗೆಯೂ ಅವರು ಗಮನ ಸೆಳೆದರು.
ಸಂಘಟಿತ ಸಾಂಸ್ಥಿಕ ಪ್ರಯತ್ನಗಳ ಮೂಲಕ ಯೆಸ್ ಬ್ಯಾಂಕಿನ ಪುನರುಜ್ಜೀವನದ ಉದಾಹರಣೆಯನ್ನು ಉಲ್ಲೇಖಿಸಿದ ಹೆಚ್ ಕೆ ಪಾಟೀಲ್ ಅವರು, ವ್ಯವಸ್ಥಿತ ಸ್ಥಿರತೆ ಅಪಾಯದಲ್ಲಿರುವಾಗ, ಸಂಸ್ಥೆಗಳು ಸ್ಪರ್ಧೆಯನ್ನು ಮೀರಿ ಮೇಲೇರುತ್ತವೆ. ಒತ್ತಡಕ್ಕೊಳಗಾದ ಅರ್ಬನ್ ಸಹಕಾರಿ ಬ್ಯಾಂಕುಗಳನ್ನು ರಕ್ಷಿಸಲು ಇದೇ ರೀತಿಯ ಸಹಯೋಗದ ಅಗತ್ಯವಿದೆ ಎಂದು ಅಭಿಪ್ರಾಯ ಮಂಡಿಸಿದರು. ಸಹಕಾರಿ ಬ್ಯಾಂಕುಗಳು ದುರ್ಬಲ ವರ್ಗಗಳಿಗೆ ನೀಡುವ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯವು ತೆರಿಗೆಯಿಂದ ಬರುವ ಸೀಮಿತ ಆದಾಯಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಗಮನ ಸೆಳೆದ ಅವರು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80(ಪಿ)(4) ಅನ್ನು ಪರಿಶೀಲಿಸುವಂತೆಯೂ ಮನವಿ ಮಾಡಿದರು.
ಪ್ಯಾಕ್ಸ್ಗಳ ಆಧುನೀಕರಣ ಮತ್ತು ಹೊಸ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳು ಸೇರಿದಂತೆ ಸಹಕಾರಿ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸಹಕಾರ ಸಚಿವಾಲಯವು ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಹೆಚ್ ಕೆ ಪಾಟೀಲರು, ಎನ್ಎಎಫ್ಸಿಯುಬಿಯ ಮಾರ್ಗದರ್ಶನದಲ್ಲಿ ಎನ್ಯುಸಿಎಫ್ಡಿಸಿ ತಂತ್ರಜ್ಞಾನ, ನಿಧಿ ಬೆಂಬಲ ಮತ್ತು ಸಲಹಾ ಸೇವೆಗಳ ಮೂಲಕ ವಾರ್ಷಿಕವಾಗಿ ಕನಿಷ್ಠ 10%ರಷ್ಟು ಸುಸ್ಥಿರ ಬೆಳವಣಿಗೆಯನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮಿತ್ ಷಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸಹಕಾರಿ ಚಳುವಳಿಯು ನಂಬಿಕೆ, ಪಾರದರ್ಶಕತೆ ಮತ್ತು ಪರಿವರ್ತನೆಯ ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಅಲ್ಲಿ ಸಹಕಾರಿ ಮಾದರಿಯು ಕೇವಲ ಆರ್ಥಿಕ ವ್ಯವಸ್ಥೆಯಾಗಿ ಮಾತ್ರವಲ್ಲದೆ, ಸಮಗ್ರ ಬೆಳವಣಿಗೆಗಾಗಿ ಜನರ ಚಳುವಳಿಯಾಗಿ ನಿಲ್ಲುತ್ತಿದೆ ಎಂದು ಹೆಚ್ ಕೆ ಪಾಟೀಲ್ ಶ್ಲಾಘಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









