ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಬಡವರೇ ಲಾಭದ ಮಾಲೀಕರು
ಸಹಕಾರದ ಯಶಸ್ವಿಗೆ ಇದುವೇ ಮಾದರಿ – ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಘೋಷಣೆ
ಮುಂಬೈ: ಮೀನುಗಾರರು ಉದ್ಯೋಗಿಗಳಲ್ಲ, ಬದಲಾಗಿ ಮಾಲೀಕರಾಗುವ ಮೂಲಕ ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಸಹಕಾರಿಗಳಾಗಬೇಕು. ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಪರಿಕಲ್ಪನೆಯು ಪ್ರತಿಬಿಂಬಿಸುತ್ತದೆ. ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಬಡವರು ಲಾಭದ ಮಾಲೀಕರಾಗಿರಬೇಕು – ಇದು ಸಹಕಾರದ ಯಶಸ್ವಿಗೆ ಮಾದರಿ ಎಂದು ಕೇಂದ್ರದ ಸಹಕಾರ ಸಚಿವರಾದ ಅಮಿತ್ ಷಾ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಅವರು ಮುಂಬೈನ ಮಜಗಾಂವ್ ಡಾಕ್ನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ದೇಶದ ಮೊದಲ ಆಳಸಮುದ್ರ ಮೀನುಗಾರಿಕಾ ಹಡಗುಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಈ ಉಪಕ್ರಮವು ಸಹಕಾರಿ ನೇತೃತ್ವದ ನೀಲಿ ಆರ್ಥಿಕತೆಯನ್ನು (ಬ್ಲೂ ರೆವಲ್ಯೂಶನ್) ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.
ಪ್ರಸ್ತುತ, ಹೆಚ್ಚಿನ ಮೀನುಗಾರಿಕಾ ಸಿಬ್ಬಂದಿಗಳು ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಇದು ಬದಲಾಗಬೇಕು. ಹೊಸ ಸಹಕಾರಿ ಮಾದರಿಯು ಅವರನ್ನು ಪಾಲುದಾರರನ್ನಾಗಿ ಪರಿವರ್ತಿಸಲಿದೆ. ಪ್ರತಿಯೊಬ್ಬ ಮೀನುಗಾರರಿಗೂ ಬರುವ ಲಾಭದಲ್ಲಿ ನೇರವಾಗಿ ಹಂಚಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೊದಲ ಹಂತದಲ್ಲಿ ಹದಿನಾಲ್ಕು ಟ್ರಾಲರ್ಗಳನ್ನು ಒದಗಿಸಲಾಗುವುದು, ಸಹಕಾರ ಸಚಿವಾಲಯ, ಮೀನುಗಾರಿಕೆ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಮೂಲಕ ಇನ್ನೂ ಹಲವು ಯೋಜಿಸಲಾಗಿದೆ ಎಂದು ಅಮಿತ್ ಷಾ ಬಣ್ಣಿಸಿದರು. ಪ್ರತಿಯೊಂದು ಟ್ರಾಲರ್ ದೋಣಿಯನ್ನು ಆಳಸಮುದ್ರದಲ್ಲಿ 25 ದಿನಗಳ ಕಾಲ ಕಾರ್ಯಾಚರಣೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು 20 ಟನ್ ಮೀನುಗಳನ್ನು ಸಾಗಿಸುವ ಸಾಮರ್ಥ್ಯ ಮತ್ತು 25 ದಿನ ಮೀನುಗಾರರಿಗೆ ಬೋಟ್ನೊಳಗಡೆಯೇ ವಾಸಿಸಲು ಮತ್ತು ಊಟ ಮಾಡಲು ಸೌಲಭ್ಯಗಳನ್ನು ಹೊಂದಿರಲಿದೆ. ಸಾಗಣೆ ಮತ್ತು ಸಮನ್ವಯಕ್ಕಾಗಿ ಹಡಗುಗಳಿಗೆ ದೊಡ್ಡ ಮಾತೃ ಹಡಗುಗಳು ಬೆಂಬಲ ನೀಡಲಿವೆ. ಇದು ಮೀನು ಹಿಡಿಯುವಿಕೆಯಿಂದ ದಡಕ್ಕೆ ಸಂಪೂರ್ಣ ಸಹಕಾರಿ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದು ಅಮಿತ್ ಷಾ ಮಾಹಿತಿ ನೀಡಿದರು.
ಮೀನುಗಾರಿಕೆಯಲ್ಲಿ ಹೊಸ ಸಹಕಾರಿ ಚಳವಳಿ ಬಡ ಮೀನುಗಾರರಿಗೆ ಸಮೃದ್ಧಿಯ ವಾಹನವಾಗಲಿದೆ ಎಂದು ಬಣ್ಣಿಸಿದ ಅಮಿತ್ ಷಾ, ಸರ್ಕಾರವು ಮೀನು ಸಂಸ್ಕರಣೆ ಮತ್ತು ತಂಪಾಗಿಸುವ ಕೇಂದ್ರಗಳನ್ನು ಹಾಗೂ ರಫ್ತು ಮತ್ತು ಸಂಗ್ರಹಣಾ ಹಡಗುಗಳನ್ನು ರಚಿಸುತ್ತದೆ, ಇವೆಲ್ಲವೂ ಸಹಕಾರಿ ಸಂಸ್ಥೆಗಳ ಮೂಲಕವೇ ನಡೆಯುತ್ತವೆ. ಇವು ಮೀನುಗಾರರಿಗೆ ನೇರವಾಗಿ ಮಾರುಕಟ್ಟೆ ಪ್ರವೇಶಿಸಲು ಮತ್ತು ಲಾಭದ ದೊಡ್ಡ ಪಾಲನ್ನು ಪಡೆಯಲು ಸಹಾಯ ಮಾಡಲಿದೆ ಎಂದು ತಿಳಿಸಿದರು.
ನಿಜವಾದ ಪ್ರಗತಿಯನ್ನು ಜಿಡಿಪಿಯಿಂದ ಮಾತ್ರ ಅಳೆಯಲಾಗುವುದಿಲ್ಲ ಎಂದು ಹೇಳಿದ ಮಿತ್ ಷಾ, ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು, ಸಮತೋಲಿತ ಆಹಾರ ಒದಗಿಸಲು, ಆರೋಗ್ಯ ರಕ್ಷಣೆ ಖಚಿತಪಡಿಸಿಕೊಳ್ಳಲು ಮತ್ತು ಸ್ವಾವಲಂಬನೆಯಿಂದ ಬದುಕಲು ಸಾಧ್ಯವಾದಾಗ ಮಾತ್ರ ಒಂದು ರಾಷ್ಟ್ರವು ಸಮೃದ್ಧವಾಗಿರುತ್ತದೆ. ಸಹಕಾರಿ ಸಂಸ್ಥೆಗಳು ಮಾತ್ರ ಈ ಮಾನವ ಕೇಂದ್ರಿತ ಬೆಳವಣಿಗೆಯನ್ನು ಸಾಧಿಸಲು ಪ್ರಬಲವಾದ ಕಾರ್ಯವಿಧಾನವಾಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಮತ್ತು ಕೇಂದ್ರದ ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










