ಸಿಬ್ಬಂದಿ, ನೌಕರರ ನೇಮಕಾತಿ, ವರ್ಗಾವಣೆಗೆ ಸಂಬಂಧಿಸಿದ ಕಾಯ್ದೆ ತಿದ್ದುಪಡಿ ಕಾನೂನುಬಾಹಿರ ಎಂದಿದ್ದ ಕೋರ್ಟ್, ಹೈಕೋರ್ಟ್ಗೆ ಮೇಲ್ಮನವಿ
ಬೆಂಗಳೂರು: ಸಹಕಾರ ಸಂಘಗಳಲ್ಲಿ ಸಿಬ್ಬಂದಿ-ನೌಕರರ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತುಕ್ರಮದ ಅಧಿಕಾರ ಈ ವಿಷಯಗಳಲ್ಲಿ ರಾಜ್ಯ ಸರ್ಕಾರವು ಸಹಕಾರ ಸಂಘಗಳ ವಿರುದ್ಧ ಎರಡನೇ ಹಂತದ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದೆ.
ಈ ವಿಷಯದಲ್ಲಿ ಮೊದಲ ಹಂತದ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ರಾಜ್ಯ ಸರಕಾರ ಇದೀಗ ಸಹಕಾರ ಸಂಘಗಳ ವಿರುದ್ಧ ಎರಡನೇ ಹಂತದ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಅದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರ ಸಂಘಗಳಲ್ಲಿ ಸಿಬ್ಬಂದಿ-ನೌಕರರ ನೇಮಕಾತಿಗೆ ಸಂಬಂಧಿಸಿದ ವೃಂದ ರಚನೆ, ನೇಮಕಾತಿ ಮಾಡಿಕೊಳ್ಳುವುದು, ನೌಕರರ ವರ್ಗಾವಣೆ, ಅವರ ವಿರುದ್ಧ ಆರೋಪಗಳು ಕೇಳಿ ಬಂದಾಗ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಸರಕಾರ ಮೊಟಕುಗೊಳಿಸಿತ್ತು ಇದರ ವಿರುದ್ಧ ಸಹಕಾರ ಸಂಘಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಸರಕಾರದ ಕ್ರಮ ಕಾನೂನುಬಾಹಿರವೆಂದು ಸಾರಿದ್ದ ನ್ಯಾಯಾಲಯ ಸಹಕಾರ ಸಂಘಗಳ ಪರವಾಗಿ ಕಳೆದ ವರ್ಷ ತೀರ್ಪು ನೀಡಿತ್ತು. ಆ ತೀರ್ಪು ರದ್ದುಪಡಿಸುವಂತೆ ಕೋರಿ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿದೆ.

ಸಹಕಾರ ಸಂಘಗಳಲ್ಲಿ ಚಾಲ್ತಿಯಲ್ಲಿದ್ದ ನೇಮಕಾತಿ ವೃಂದ ರಚನೆ, ನೇಮಕಾತಿ ಮಾಡಿಕೊಳ್ಳುವುದು, ನೌಕರರ ವರ್ಗಾವಣೆ, ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹಕಾರ ಸಂಘಗಳಿಂದ ಮೊಟಕುಗೊಳಿಸಲು ಸಂಘಗಳ ಕಾಯ್ದೆ-1919ರ ಮೂಲ ಕಾಯ್ದೆ ಸೆಕ್ಷನ್ 128 -ಎಗೆ ತಿದ್ದುಪಡಿ ತಂದು ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ-2023ರನ್ನು ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕೃಷಿ ಸಹಕಾರ ಸಂಘ ಹಾಗೂ ರಾಜ್ಯದ ಇತರ ಸಹಕಾರ ಸಂಘಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಸರಕಾರ ತಂದಿದ್ದ ತಿದ್ದುಪಡಿ ಸಂವಿಧಾನಬಾಹಿರ ಎಂದು ಹೇಳಿದ್ದ ಹೈಕೋರ್ಟ್, ಆ ತಿದ್ದುಪಡಿಯನ್ನು ರದ್ದುಪಡಿಸಿ 2024ರ ಆಗಸ್ಟ್ನಲ್ಲಿ ತೀರ್ಪು ಪ್ರಕಟಿಸಿತ್ತು. ಮೊದಲ ಹಂತದಲ್ಲಿ ಹಿನ್ನಡೆ ಕಂಡಿದ್ದ ರಾಜ್ಯ ಸರಕಾರ, ಎರಡನೇ ಹಂತದ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128-ಎಗೆ ತಿದ್ದುಪಡಿ ತರುವ ಮೂಲಕ ಸಹಕಾರ ಸಂಘಗಳ ನಿಬಂಧಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನೇಮಕ ಅಧಿಕಾರಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದ್ದಾರೆಯೇ ಹೊರತು, ಸಹಕಾರ ಸಂಘಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಲ್ಲದೆ, ಸರಕಾರಿ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ದೊಡ್ಡ ಪ್ರಮಾಣದ ಹಣ ಸಹಕಾರ ಸಂಘಗಳ ಮೂಲಕ ಪಾವತಿಯಾಗುತ್ತದೆ. ಇಲ್ಲೇನಾದರೂ ಆರ್ಥಿಕ ಅವ್ಯವಹಾರ ಆದರೆ ಅದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಉಳಿದಂತೆ ಸರಕಾರದ ತಿದ್ದುಪಡಿಯಿಂದ ಸಂವಿಧಾನದ ಪರಿಚ್ಛೇದ 19ರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಸಹಕಾರ ಸಂಘಗಳನ್ನುರಚಿಸಿ, ಅವುಗಳನ್ನು ನಿರ್ವಹಿಸುವುದು ಸಂವಿಧಾನದ ಪರಿಚ್ಛೇದ 19(1)(ಸಿ) ಪ್ರಕಾರ ನಾಗರಿಕರ ಮೂಲಭೂತ ಹಕ್ಕು ಆಗಿದೆ. ಆದರೆ, ಸರ್ಕಾರ ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್ 128 -ಎಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದತ್ತವಾದ ಆ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದೆ. ಸ್ಥಳೀಯರು ತಾವೇ ಸೇರಿಕೊಂಡು ಮಾಡುತ್ತ ಬಂದಿರುವ ಸಹಕಾರ ಸಂಘಗಳಲ್ಲಿನ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತು ಕ್ರಮ ಮತ್ತಿತರ ಆಡಳಿತಾತ್ಮಕ ವಿಚಾರಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ನೋಡಿಕೊಳ್ಳುತ್ತಿದ್ದವು. ಆದರೆ ಅದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಈ ತಿದ್ದುಪಡಿಯು ಸಂವಿಧಾನಬಾಹಿರವಾಗಿದೆ ಎಂದು ಸಹಕಾರ ಸಂಘಗಳ ವಾದವಾಗಿದೆ.

