ಏಳನೇ ಸಾಮಾನ್ಯ ಸಭೆಯಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ
ವೇಣೂರು: ‘ಸೌಹಾರ್ದ ಸಹಕಾರಿಗಳ ನಡೆ – ಸುಸ್ಥಿರ ಅಭಿವೃದ್ಧಿಯ ಕಡೆʼ ಎಂಬ ಸಹಕಾರ ತತ್ವದ ಉದಾತ್ತ ಮನೋಭಾವನೆಯ ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣ ನಮ್ಮ ಧ್ಯೇಯ. ಇದನ್ನು ರೂಢಿಸಿಕೊಂಡು, ಎಲ್ಲರೊಟ್ಟಿಗೆ ಕೂಡಿ ಬಾಳುವ, ಬೆಳೆಯುವ, ಮತ್ತೊಬ್ಬರನ್ನು ಬೆಳೆಸುವ, ಚಿಂತನೆಯಿಂದ ಬೆಳೆದಂತಹ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯು, ಇನ್ನೂ ಸಮಾಜಮುಖಿ ಕೆಲಸಗಳನ್ನು ಮಾಡಿ ಯಶಸ್ವಿಯಾಗಿ ಬೆಳೆಯುವಂತಾಗಲಿ ಎಂದು ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪಕರಾದ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಏಳನೇ ಸಾಮಾನ್ಯ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷರಾದ ಸುಧಾಕರ ನೂಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ ರೂ.4,74,00,000 ಠೇವಣಿ ಹೊಂದಿದ್ದು, ವರದಿ ಸಾಲಿನಲ್ಲಿ ರೂ. 3,97,00,000 ಸಾಲ ನೀಡಿದ್ದು, ಸಹಕಾರಿಯ ಒಟ್ಟು ದುಡಿಯುವ ಬಂಡವಾಳ ರೂ. 5,38,00,000 ಹೊಂದಿದ್ದು, ವರದಿ ಸಾಲಿನಲ್ಲಿ ರೂ.29,55,000 ಲಾಭ ಹೊಂದಿದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡಲಾಗುವುದು. ಕರಿಂಜೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಘವು, ಎರಡು ಶಾಖೆಗಳನ್ನು ಹೊಂದಿ 2700ಕ್ಕಿಂತ ಅಧಿಕ ಸದಸ್ಯರನ್ನು ಹೊಂದಿದೆ. ಕರಿಂಜೆ ಸ್ವಾಮೀಜಿಯವರ ಆಶೀರ್ವಾದ ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಿಂದ ಸಂಘವು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅತ್ಯುತ್ತಮ ಇಬ್ಬರು ಪಿಗ್ಮಿ ಸಂಗ್ರಾಹಕರನ್ನು ಗೌರವಿಸಲಾಯಿತು. 25 ಮಂದಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಹಕಾರಿಯ ಉಪಾಧ್ಯಕ್ಷರಾದ ಪ್ರಕಾಶ್ ಬಿ.ಎನ್., ನಿರ್ದೇಶಕರಾದ ಸೀತಾರಾಮ ಮಡಿವಾಳ , ಹರೀಣ್ ಸುವರ್ಣ, ಪ್ರಮೋದರ, ಶಾಮ ಎಂ, ರಕ್ಷಿತ್ ಆರ್.ಕರ್ಕೇರ, ಮೇಘನಾಥ, ವಿಶ್ವನಾಥ ಶೆಟ್ಟಿ, ಸುಹಾಸಿನಿ, ಹೇಮಲತಾ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು. ನಿರ್ದೇಶಕರಾದ ಸೀತಾರಾಮ ಮಡಿವಾಳ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶೋಭಾ ಸೀತಾರಾಮ ವಂದಿಸಿದರು. ಸೇವಾ ಪ್ರತಿನಿಧಿ ರಮೇಶ್ ಎಂ. ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com




