ತೆರಿಗೆ ಕಟ್ಟುವ ಪ್ರಕ್ರಿಯೆ ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರ ಅಭಿಪ್ರಾಯ
ಮಂಗಳೂರು: ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದಲ್ಲಿ ಜಾರಿಗೆ ಬರುತ್ತಿರುವ GST 2.0 ಸುಧಾರಣಾ ಕ್ರಮವು ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದುಕೊಡಲಿದೆ. ಇದು ತೆರಿಗೆ ಕಟ್ಟುವ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪಿಸುವುದರ ಜೊತೆಗೆ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಆರ್ಥಿಕ ಹಿತಾಸಕ್ತಿಗೆ ಅನುಕೂಲಕರವಾಗಲಿದೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ದೇಶದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ ಹಂತಗಳನ್ನು ಕಡಿಮೆ ಮಾಡಿದ್ದು ಹಲವು ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಗಣನೀಯವಾಗಿ ಇಳಿಕೆ ಮಾಡಿದೆ. ದೈನಂದಿನ ಬಳಕೆಯ ಹಲವಾರು ವಸ್ತುಗಳು, ಸೇವಾ ವಲಯದ ಹಲವು ಪ್ರಕಲ್ಪಗಳ ಬೆಲೆ ಇಳಿಕೆಯಾಗಲಿದ್ದು ಇದರಿಂದ ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೊಳ್ಳಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಾಗಲಿದೆ. ದೇಶೀಯ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಿ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಬೇಡಿಕೆ ಹೆಚ್ಚಳದಿಂದ ದೇಶದ ಜಿಡಿಪಿ ದರವೂ ಏರುಗತಿಯಲ್ಲಿ ಸಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಜಿಎಸ್ಟಿ ಇಳಿಕೆಯಿಂದ ಸಹಜವಾಗಿ ಮಧ್ಯಮ ವರ್ಗಕ್ಕೆ ಅನೇಕ ಲಾಭಗಳು ಸಿಗಲಿವೆ. ದಿನನಿತ್ಯ ಬಳಕೆಯ ಹಲವಾರು ವಸ್ತುಗಳ ಮೇಲಿನ ತೆರಿಗೆ ಕಡಿಮೆಯಾಗುವ ಮೂಲಕ ದೈನಂದಿನ ಬದುಕಿನಲ್ಲಿ ಖರ್ಚು -ವೆಚ್ಚಗಳು ಇಳಿಕೆಯಾಗಲಿದೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಕಾಗದದ ಮೇಲಿನ ಕಾರ್ಯದ ಭಾರ ಕಡಿಮೆಯಾಗಲಿದ್ದು ಇದರಿಂದ ಸೇವಾ ವಲಯದಲ್ಲಿ ಪರೋಕ್ಷವಾಗಿ ವೆಚ್ಚ ಕಡಿಮೆಯಾಗಲಿದೆ. ಒಟ್ಟಾರೆಯಾಗಿ ಜಿಎಸ್ಟಿ ಇಳಿಕೆಯಿಂದ ಬೆಲೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಆರ್ಥಿಕ ಭಾರವೂ ಇಳಿಕೆಯಾಗಲಿದೆ.

ದೈನಂದಿನ ಅವಶ್ಯಕ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ಜೀವನಮಟ್ಟವೂ ಸುಧಾರಣೆಯಾಗಲಿದೆ. ಜನ ಹೆಚ್ಚು ಖರ್ಚು ಮಾಡಿದಷ್ಟು ಬೇಡಿಕೆ ಹೆಚ್ಚುತ್ತದೆ. ಹೆಚ್ಚಿನ ಬೇಡಿಕೆಯಿಂದ ಹೆಚ್ಚಿನ ಉತ್ಪಾದನೆಗೆ ದಾರಿಯಾಗುತ್ತದೆ. ಉತ್ಪಾದನೆ ಹೆಚ್ಚಾದಾಗ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಪರೋಕ್ಷವಾಗಿ ಇದರಿಂದ ಸರ್ಕಾರದ ಆದಾಯ ಹೆಚ್ಚಾಗುತ್ತದೆ. ಸರ್ಕಾರದ ಆದಾಯ ಹೆಚ್ಚುವುದರಿಂದ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ನೆರವು ಸಿಗಲಿದೆ ಎಂದು ಡಾ. ಎಸ್ ಆರ್ ಹರೀಶ್ ಆಚಾರ್ಯ ವಿಶ್ಲೇಷಣೆ ಮಾಡಿದ್ದಾರೆ.
ಇಂದಿನಿಂದ ಜಾರಿಗೆ ಬರಲಿರುವ ಜಿಎಸ್ಟಿ ಇಳಿಕೆಯು ಆರ್ಥಿಕ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡುತ್ತದೆ. ಗ್ರಾಹಕ ಕೇಂದ್ರಿತ ಸರಕುಗಳು, ಚಿಲ್ಲರೆ ವ್ಯಾಪಾರ, ವಾಹನಗಳು, ಸಿಮೆಂಟ್, ವಿಮೆ ಮತ್ತು ನವೀಕರಿಸಬಹುದಾದ ಇಂಧನಗಳ ಮೇಲಿನ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ. ಜಿಎಸ್ಟಿ ಸುಧಾರಣೆಗಳಿಂದ ಬ್ಯಾಂಕಿಂಗ್ ವಲಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಒಟ್ಟಾರೆ ಆರ್ಥಿಕ ಬೆಳವಣಿಗೆ ಹೆಚ್ಚಾದಾಗ, ಬ್ಯಾಂಕಿಂಗ್ ವಲಯಕ್ಕೂ ಲಾಭ ಸಿಗುತ್ತದೆ. ಅಂದರೆ ಉತ್ಪಾದನೆ ಹೆಚ್ಚಿದಂತೆ ಹೂಡಿಕೆಗಳು ಹೆಚ್ಚಾಗುತ್ತವೆ.
“ಒಂದು ರಾಷ್ಟ್ರ – ಒಂದು ತೆರಿಗೆ” ಎಂಬ ಧ್ಯೇಯವನ್ನು ಇನ್ನಷ್ಟು ಬಲಪಡಿಸಿ, ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಗೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಜಿಎಸ್ಟಿ ಇಳಿಕೆಯು ದಾರಿ ಮಾಡಿಕೊಡಲಿದೆ ಎಂದು ಡಾ. ಎಸ್ ಆರ್ ಹರೀಶ್ ಆಚಾರ್ಯ ತಿಳಿಸಿದ್ದಾರೆ.

