ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಗಳಲ್ಲಿ ಇಡಲು ಅವಕಾಶ
ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ಅಂಗೀಕಾರ
ಬೆಂಗಳೂರು: ಸೌಹಾರ್ದ ಸಹಕಾರ ಸಂಘಗಳ ಒಟ್ಟು ಠೇವಣಿಯ ಶೇ.20ರಷ್ಟು ಮೊತ್ತವನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯ (ಎಸ್ಎಲ್ಆರ್) ಪ್ರಮಾಣ ರೂಪದಲ್ಲಿ ಕಾಯ್ದಿರಿಸುವ ‘ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ಮಸೂದೆ 2025 ಅನ್ನು ಮಂಗಳವಾರ ವಿಧಾನಸಭೆ ಅಂಗೀಕರಿಸಿದೆ.
https://chat.whatsapp.com/EbVKVnWB6rlHT1mWtsgbch
ಸೌಹಾರ್ದ ಸಹಕಾರ ಸಂಘಗಳಲ್ಲಿ ಹೆಚ್ಚಿನ ಆರ್ಥಿಕ ಶಿಸ್ತು ಮತ್ತು ಹೊಣೆಗಾರಿಕೆಯ ಮೂಲಕ ಸೌಹಾರ್ದ ಸಹಕಾರ ಸಂಘಗಳನ್ನು ಹೆಚ್ಚುವರಿ ಬಲವರ್ಧನೆಗೊಳಿಸುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ಪ್ರಸ್ತುತ ಸೌಹಾರ್ದ ಸಹಕಾರಿ ಸಂಘಗಳು ತಮ್ಮಲ್ಲಿನ ಠೇವಣಿಯ ಎಲ್ಲ ಮೊತ್ತವನ್ನೂ ಸಾಲದ ರೂಪದಲ್ಲಿ ನೀಡಬಹುದಾಗಿದೆ. ಈಗ ತಿದ್ದುಪಡಿ ಮಸೂದೆಯಡಿ ಸೌಹಾರ್ದ ಸಹಕಾರಿಗಳಲ್ಲಿ ಬರುವ ಠೇವಣಿಯಲ್ಲಿ ಶೇ.20ರಷ್ಟನ್ನು ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕ್ಗಳಲ್ಲಿ ಠೇವಣಿ ಇಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಸಂಘಗಳಲ್ಲಿ ಅಕ್ರಮ, ವಂಚನೆ ಮತ್ತು ದುರ್ವಿನಿಯೋಗ ಮಾಡುವುದು ತಡೆಯಾಗಲಿದೆ.
ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಪ್ರತಿ ಸಹಕಾರಿಯೂ ಸಹಕಾರಿ ವರ್ಷದ ಪ್ರತಿ ತ್ರೈಮಾಸಿಕದ ಅಂತ್ಯಕ್ಕೆ ಹೊಂದಿರುವ ಒಟ್ಟು ಠೇವಣಿಯ ಶೇ.20ರಷ್ಟನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯ ರೂಪದಲ್ಲಿ ಕಡ್ಡಾಯವಾಗಿ ರಿಜಿಸ್ಟ್ರಾರ್ ಅವರ ಪೂರ್ವಾನುಮತಿಯೊಂದಿಗೆ ನಿರ್ವಹಣೆ ಮಾಡಲು ಈ ತಿದ್ದುಪಡಿಯಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 6,546 ಸೌಹಾರ್ದ ಸಹಕಾರಿ ಸಂಘಗಳು
ನೋಂದಣಿಯಾಗಿವೆ. ಈ ಪೈಕಿ 958 ಸಂಘಗಳು ಈಗಾಗಲೇ ಪರಿಸಮಾಪ್ತಿ (ಬರ್ಖಾಸ್ತುಗೊಳಿಸಿ ಸುಪರ್ದಿಗೆ ತೆಗೆದುಕೊಳ್ಳುವ ಸ್ಥಿತಿ) ಆಗಿದ್ದರೆ, 32 ಸಮಸ್ಯಾತ್ಮಕ ಸ್ಥಿತಿಯಲ್ಲಿವೆ. 12 ಸಂಘಗಳ ವಿರುದ್ಧ ಎಫ್ಐಆರ್, ಒಂಬತ್ತು ಸಂಘಗಳ ವಿರುದ್ಧ ತನಿಖೆ ನಡೆಯುತ್ತಿದೆ. ಆದ್ದರಿಂದ ಸೌಹಾರ್ದ ಸಹಕಾರಿ ಸಂಘಗಳ ಸ್ಥಿತಿ ಸುಧಾರಿಸಿ, ಆರ್ಥಿಕ ಶಿಸ್ತು ತರಲು ಈ ತಿದ್ದುಪಡಿ ಅಗತ್ಯವಾಗಿದೆ. ಇದರಲ್ಲಿ ಮೂರು ವರ್ಷಕ್ಕೊಮ್ಮೆ ಸಂಘದ ವ್ಯವಹಾರಗಳ ಆಡಿಟ್ ವರದಿಯನ್ನು ಸರಕಾರವೇ ಪರಾಮರ್ಶಿಸಲು ಅವಕಾಶ ನೀಡಲಾಗಿದೆ ಎಂದು ಎಚ್. ಕೆ ಪಾಟೀಲ್ ತಿಳಿಸಿದರು.
ವಿಧಾನಸಭಾ ಪ್ರತಿಪಕ್ಷ ಉಪನಾಯಕ ಬಿಜೆಪಿಯ ಅರವಿಂದ ಬೆಲ್ಲದ ಮಾತನಾಡಿ, ‘ಪ್ರತಿ ಮೂರು ತಿಂಗಳಿಗೊಮ್ಮೆ ಎಸ್ಎಲ್ಆರ್ ದರ ನಿಗದಿಪಡಿಸಿ ಠೇವಣಿ ಮಾಡಲು ರಿಜಿಸ್ಟ್ರಾರ್ ಅನುಮತಿ ಕಡ್ಡಾಯ’ ಎಂಬ ನಿಯಮವನ್ನು ಸಡಿಲಗೊಳಿಸಿ ಮಾಡುವುದು ಸೂಕ್ತ’ ಎಂದು ಸಲಹೆ ವರ್ಷಕ್ಕೊಮ್ಮೆ ದರ ನಿಗದಿಪಡಿಸುವಂತೆ ಸಲಹೆ ನೀಡಿದರು. ಇದಕ್ಕೆ ಪೂರಕವಾಗಿ ಸದಸ್ಯರಾದ ಯಶಪಾಲ್ ಸುವರ್ಣ, ಬಾಲಕೃಷ್ಣ, ಜಿ.ಟಿ. ಪಾಟೀಲ್ ಮೊದಲಾದವರು, ‘ಅಪೆಕ್ಸ್ ಬ್ಯಾಂಕ್ ಅಥವಾ ಡಿಸಿಸಿಯಲ್ಲಿ ಮಾತ್ರ ಠೇವಣಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿ ಬಡ್ಡಿದರ ಕಡಿಮೆ ಇರುವುದರಿಂದ ಸೌಹಾರ್ದ ಸಹಕಾರಿಗಳಿಗೆ ನಷ್ಟ ಉಂಟಾಗುತ್ತದೆ. ಈ ನಿಟ್ಟಿನಲ್ಲೂ ಪರಿಶೀಲಿಸುವುದು ಉತ್ತಮ’ ಎಂದು ಹೇಳಿದರು. ಇವೆರಡರ ಬಗ್ಗೆಯೂ ಪರಿಶೀಲಿಸಿ ಸೂಕ್ತ ತಿದ್ದುಪಡಿಯೊಂದಿಗೆ ಮಸೂದೆಗೆ ಅನುಮೋದನೆ ನೀಡಬೇಕು ಎಂದು ಕೋರಿದರು. ಅದನ್ನು ಸದನ ಅಂಗೀಕರಿಸಿತು.

