Top News

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪಿಗ್ಮಿ ಕಲೆಕ್ಟ್‌ ಮಾಡುತ್ತಲೇ ವೃಕ್ಷ ತಪಸ್ವಿಯಾದ ಸಹಕಾರಿ
    News

    ಪಿಗ್ಮಿ ಕಲೆಕ್ಟ್‌ ಮಾಡುತ್ತಲೇ ವೃಕ್ಷ ತಪಸ್ವಿಯಾದ ಸಹಕಾರಿ

    adminBy adminJune 5, 2025

    ದುಡಿಮೆಯ ಒಂದು ಭಾಗ ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟ ಧೀಮಂತ ವ್ಯಕ್ತಿ

    ಮಂಗಳೂರು: ಕಡಲತಡಿಯ ಮಂಗಳೂರಿನ ಪಡುವಣ ತಟ ನೀರಿನಿಂದಾವೃತವಾಗಿದ್ದರೂ ಇಲ್ಲಿನ ಬಿಸಿಲಿನ ಝಳ ಎಂಥವರನ್ನೂ ಕಂಗೆಡಿಸಬಲ್ಲದು. ಇಂಥ ಬಿರು ಬಿಸಿಲಿನಲ್ಲಿ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡೇ ಸಾಗಿ ಸಹಕಾರಿ ಸಂಘವೊಂದರ ಪಿಗ್ಮಿ ಸಂಗ್ರಹಿಸುವ ಕೆಲಸ ಮಾಡುವುದು ಸುಲಭದ ಮಾತಲ್ಲ.  ಅದರಲ್ಲೂ ದಿನದಿಂದ ದಿನಕ್ಕೆ ಏರುತ್ತಿರುವ ಪ್ರಖರ ಬಿಸಿಲಿನ ಝಳ ನೆತ್ತಿ ಮೇಲೆ ಬಿದ್ದರೆ ಬೆವರು ಕಿತ್ತು ಬರುವಷ್ಟರ ಮಟ್ಟಿಗೆ ವಾತಾವರಣ ಬದಲಾಗಿರುವ ಈ ಕಾಲಘಟ್ಟದಲ್ಲಿ ನಡೆದುಕೊಂಡೇ ಪಿಗ್ಮಿ ಸಂಗ್ರಹ ಮಾಡುವುದು ಎಂದರೆ ಸುಲಭದ ಮಾತಲ್ಲ. ಆದರೆ ಈ ಎಲ್ಲ ಸವಾಲುಗಳನ್ನು ಎದುರಿಸಿ ತಾವು ನಡೆದುಕೊಂಡು ತೆರಳುವ ಹಾದಿಯಲ್ಲಿ ತಾಪಮಾನ ಕಡಿಮೆ ಮಾಡುವ ಉದ್ದೇಶದಿಂದ ಸ್ಥಳಾವಕಾಶ ಇರುವಲ್ಲೆಲ್ಲ ಗಿಡಗಳನ್ನು ನೆಟ್ಟು ಪೋಷಿಸಿ ಅದರ ನೆರಳಡಿಯಲ್ಲೇ ಆಶ್ರಯ ಪಡೆದುಕೊಂಡು ಪಿಗ್ಮಿ ಸಂಗ್ರಹದ ಕೆಲಸ ಮಾಡುತ್ತಿರುವ ಸಹಕಾರ ಕ್ಷೇತ್ರದ ಕೆಲಸಗಾರ ಮಾಧವ ಉಳ್ಳಾಲ್‌ ಇಂದು ನಿಜವಾದ ವೃಕ್ಷ ತಪಸ್ವಿ ಎನಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    https://chat.whatsapp.com/EbVKVnWB6rlHT1mWtsgbch

    ತಮ್ಮ ಜೀವನಕ್ಕೆ ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರೂ ಮಾಧವ ಉಳ್ಳಾಲರು ಲಕ್ಷಾಂತರ ಗಿಡಗಳಿಗೆ ಜಾಗ ಕಲ್ಪಿಸಿ ಗಿಡ ನೆಟ್ಟು ಅದಕ್ಕೆ ನೀರು ಹಾಕಿ ಪೋಷಿಸಿ ಬೆಳೆಸಿದವರು. ಪರಿಸರದ ಬಗ್ಗೆ ಅಪಾರ ಕಾಳಜಿ ವಹಿಸಿಕೊಂಡು ತಾವು ದುಡಿದದ್ದಕ್ಕೆ ಪಡೆಯುವ ವೇತನದಿಂದಲೇ ಲಕ್ಷಾಂತರ ಗಿಡಗಳನ್ನು ನೆಟ್ಟು ಬೆಳೆಸಿದ ಸಾಹಸಿ ಶ್ರೀ ರಾಮಕೃಷ್ಣ ಕೋ ಆಪರೇಟಿವ್‌ ಸೊಸೈಟಿ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕರಾಗಿರುವ ಮಾಧವ ಉಳ್ಳಾಲ್‌ ಅವರು. ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಪರಿಸರವನ್ನೇ ಹಸಿರು ಮಾಡುವುದೇ ಸರಿಯಾದ ಉತ್ತರ ಎಂದು ಮನಗಂಡು ರಸ್ತೆಯ ಬದಿ, ರುದ್ರಭೂಮಿ, ದೇವಸ್ಥಾನ, ದೈವಸ್ಥಾನ ಮೊದಲಾದೆಡೆ ಹಲವಾರು ವರ್ಷಗಳಿಂದ ತನ್ನ ಉದ್ಯೋಗದಿಂದ ಬರುವ ಆದಾಯದ ಒಂದು ಭಾಗವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟು ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. 

    ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೋಡಿ ಎಂಬಲ್ಲಿ ನಾರಾಯಣ -ಕಮಲಾ ದಂಪತಿಯ ಪುತ್ರರಾಗಿ 1964ರಲ್ಲಿ ಜನಿಸಿದ ಮಾಧವರು, ಬಿಇಎಂ ಶಾಲೆ, ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಉಳ್ಳಾಲದ ಭಾರತ್ ಹೈಸ್ಕೂಲ್‌ನಲ್ಲಿ ಎಂಟನೇ ತರಗತಿ ಮುಗಿಸಿ ಮುಂದೆ ಮಂಗಳೂರಿನ ಸಂತ ಅಲೋಶಿಯಸ್ ರಾತ್ರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದರು. ಭಾರತ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಕಲಿಯುತ್ತಿರುವಾಗ ಬೋಂದೆಲ್‌ನ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ತರಕಾರಿ ಬೆಳೆಯುವ ಪ್ರಾತ್ಯಕ್ಷಿಕೆ ಇದ್ದಾಗ ನೆಟ್ಟ ಗಿಡದಿಂದ ಪ್ರೇರಣೆ ಪಡೆದ ಮಾಧವ ಉಳ್ಳಾಲರು ಮುಂದೆ ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಹಸಿರು ಪರಿಸರವೇ ಉತ್ತರ ಎಂದು ಮನಗಂಡು ಬದಿ, ರುದ್ರಭೂಮಿ, ದೇವಸ್ಥಾನ, ದೈವಸ್ಥಾನ ಮೊದಲಾದೆಡೆ ಸಹಸ್ರಾರು ಗಿಡಗಳನ್ನು ಬೆಳೆಸುತ್ತಲೇ ಬಂದಿದ್ದಾರೆ.

    ಪಿಗ್ಮಿ ಕಲೆಕ್ಟರ್ ಆಗಿ ಉದ್ಯೋಗ ಆರಂಭಿಸಿದ ಮಾಧವರು, ಮಂಗಳೂರಿನ ವಿವಿಧ ಕಡೆಗೆ ಠೇವಣಿ ಇಡುವವರ ಬಳಿ ತೆರಳಿ ಅವರ ಮನವೊಲಿಸಿ ಹಣ ಹೂಡಿಕೆ ಮಾಡುವ ಕೆಲಸ ಮಾಡುತ್ತಿದ್ದರು. ರಾಮಕೃಷ್ಣ ಕೋ-ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಸೇರಿದ ಬಳಿಕ  ವಿವಿಧ ಕಡೆಗೆ ಠೇವಣಿ ಸಂಗ್ರಹ್ಕಕೆ ತೆರಳುವಾಗ ರಸ್ತೆ ಬದಿ ನೆರಳು ಇರುತ್ತಿರಲಿಲ್ಲ. ಪ್ರಾಣಿ ಪಕ್ಷಿಗಳಿಗೆ ಆಹಾರ ಕೂಡ ಸಿಗುತ್ತಿರಲಿಲ್ಲ. ಇದು ಮಾಧವ ಉಳ್ಳಾಲ ಅವರಲ್ಲಿ ಒಂದು ಜಾಗೃತಿಗೆ ಕಾರಣವಾಯಿತು.  ಅತಿಯಾದ ಬಿಸಿಲಿನ ಜೊತೆಗೆ ಪರಿಸರ ಮಾಲಿನ್ಯದ ನಿಯಂತ್ರಣಕ್ಕೂ ಎಂದುಕೊಂಡು ಗಿಡಗಳನ್ನು ಬೆಳೆಸತೊಡಗಿದರು. ಅವರು ಪಿಗ್ಮಿ ಕಲೆಕ್ಷನ್‌ಗೆಂದೇ ತೆರಳುತ್ತಿದ್ದ ದಾರಿ ಅಂದರೆ ಹಂಪನಕಟ್ಟೆಯಿಂದ ಜ್ಯೋತಿ, ಬಲ್ಮಠ ರಸ್ತೆ ಬದಿ ಗಿಡಗಳನ್ನು ನೆಡತೊಡಗಿದರು. 2007ರಲ್ಲಿ ಹಂಪನಕಟ್ಟೆಯಿಂದ ಜ್ಯೋತಿ, 2008ರಲ್ಲಿ ಜ್ಯೋತಿಯಿಂದ ಹಂಪನಕಟ್ಟೆ ತನಕ ಗಿಡಗಳನ್ನು ನೆಟ್ಟರು. ಇದರಿಂದ ನಗರದ ಸೌಂದರ್ಯವೂ ಹೆಚ್ಚಿದ್ದಲ್ಲದೆ, ಸ್ವಲ್ಪವಾದರೂ ತಾಪಮಾನ ಕಡಿಮೆಯಾಗಿದೆ.

    ರುದ್ರಭೂಮಿ, ದೇವಸ್ಥಾನ, ಶಾಲೆ ವಠಾರದಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಮಾಧವ ಉಳ್ಳಾಲರು ಆದ್ಯತೆ ನೀಡುತ್ತಿದ್ದಾರೆ. ರಸ್ತೆ ಬದಿ ಗಿಡಗಳನ್ನು ನೆಟ್ಟರೆ ಕಡಿದು ಹಾಕುವ ಅಪಾಯವಿದೆ. ಅದಕ್ಕಾಗಿ ದೇವಸ್ಥಾನ, ರುದ್ರಭೂಮಿಗೆ ಆದ್ಯತೆ ಕೊಟ್ಟಿದ್ದಾರೆ.  ಉಳ್ಳಾಲದ ಉಳಿಯ ವೀರಭದ್ರಸ್ವಾಮಿ ದೇವಸ್ಥಾನ, ಎಕ್ಕೂರು ಶಾಲೆ, ಕೊಣಾಜೆ ರುದ್ರಭೂಮಿ, ಕಾಸರಗೋಡು, ಮಂಜೇಶ್ವರ ಮೊದಲಾದೆಡೆ ಗಿಡ ನೆಟ್ಟು ಪೋಷಿಸಿದ್ದಾರೆ. ಮಂಗಳೂರು ಸಬ್‌ಜೈಲಲ್ಲಿ ತೆಂಗಿನ ಮರ ನೆಡಲಾಗಿದೆ. ಇಲ್ಲೆಲ್ಲ ಸಾಗುವಾನಿ, ಮುತ್ತುಗ, ಹಲಸು, ಮಾವು, ಹೆಬ್ಬಲಸು ಇವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ.   ಬೆಳಗ್ಗೆ 6 ಗಂಟೆಯಿಂದ ನೀರು ಹಾಕುವ ಕೆಲಸಕ್ಕೆ ಹೋಗುತ್ತಾರೆ. ದೂರದ ಊರುಗಳಲ್ಲಿ ರೋಟರಿ, ಲಯನ್ಸ್, ಸಹ್ಯಾದ್ರಿ ಸಂಚಯನ ಮೊದಲಾದ ಸಂಸ್ಥೆಗಳು ನೆರವಿಗೆ ಬಂದಿವೆ.  ಗಿಡ ನೆಟ್ಟ ಮೊದಲ ನಾಲ್ಕು ವರ್ಷ ಅದನ್ನು ಆರೈಕೆ ಮಾಡಬೇಕು. ನೀರು ಹಾಕುವುದು, ಬುಡ ಬಿಡಿಸುವುದು, ಗೆಲ್ಲು ಕತ್ತರಿಸುವುದು ಮಾಡಬೇಕು. ನಾಲ್ಕು ವರ್ಷಗಳ ನಂತರ ಅದುವೇ ಬೆಳೆಯುತ್ತದೆ ಎನ್ನುತ್ತಾರೆ ಮಾಧವ ಉಳ್ಳಾಲ್.

    ಬಂಟ ಕೇಪುಳ, ಆನೆಮುಂಗು, ಕದಂಬ, ನಾಗಲಿಂಗಪುಷ್ಪ, ಚಳ್ಳೆಹಣ್ಣು ಇತ್ಯಾದಿ ಅಳಿವಿನಂಚಿನಲ್ಲಿರುವ ಪ್ರಬೇಧಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಜತೆಗೆ ಪಕ್ಷಿಗಳಿಗೆ ಆಹಾರ ಒದಗಿಸಬಲ್ಲ ನೇರಳೆ, ಮಾವು, ಹಲಸು, ಹೆಬ್ಬಲಸು ಮರಗಳನ್ನೂ ನೆಡುತ್ತಿದ್ದಾರೆ. ಮರಗಳನ್ನು ನೆಟ್ಟು ಪೋಷಿಸುವ ವಿಷಯಕ್ಕೆ ಸಂಬಂಧಿಸಿ ಜನರಲ್ಲಿಯೇ ಜಾಗೃತಿ ಮೂಡುವಂತಾಗಲು ವೃಕ್ಷ ರಕ್ಷಾ ಆಂದೋಲನ ಕೈಗೊಂಡಿದ್ದಾರೆ. ಜನರಿಂದಲೇ ಮರಕ್ಕೆ ನೀರು ಹಾಕಿಸಿ ಅದಕ್ಕೆ ರಕ್ಷಾಬಂಧನ ಕಟ್ಟಿಸುವುದರಿಂದ ಅವರಿಗೂ ಆ ಮರದ ಬಗ್ಗೆ ಜವಾಬ್ದಾರಿ ಬರುತ್ತದೆ. ಜನರ ಕಚೇರಿ ಅಥವಾ ಮನೆ ಮುಂದಿರುವ ಮರಕ್ಕೆ ಅಲ್ಲಿಯ ಜನರಿಂದಲೇ ನೀರು ಹಾಕಿಸಿ ರಕ್ಷೆ ಕಟ್ಟಿಸಿದ್ದರಿಂದ ಅವರಾಗಿಯೇ ಆ ಮರದ ರಕ್ಷಣೆಗೆ ನಿಲ್ಲುತ್ತಾರೆ.

    ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಚಿಂತನೆಯೊಂದಿಗೆ ಪರಿಸರ ರಕ್ಷಣೆಗೂ ಹೆಚ್ಚು ಪ್ರಾಮುಖ್ಯತೆ ನೀಡಿದವರು. ಆದ್ದರಿಂದ ಅವರ ಹೆಸರಲಿನಲ್ಲಿ ನಂತೂರಿನಿಂದ ತೊಕ್ಕೊಟ್ಟುವರೆಗೆ ಸುಮಾರು 2500 ಗಿಡಗಳನ್ನು ನೆಟ್ಟು (ಬ್ರಹ್ಮಶ್ರೀ ನಾರಾಯಣಗುರು ಸಾಲುಮರ) ಪೋಷಿಸುತ್ತಿದ್ದಾರೆ. ಲಯನ್ಸ್ ಕ್ಲಬ್ ಜತೆಗೂಡಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗೆ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಬೆಳದಿಂಗಳು ಫೌಂಡೇಶನ್ ಸಹಕಾರದಲ್ಲಿ ಚರ್ಚ್, ದೇವಸ್ಥಾನ, ಮಸೀದಿ, ದರ್ಗಾ, ದೈವಸ್ಥಾನ, ಬಸದಿ, ಗರೋಡಿಗಳ ವಠಾರದಲ್ಲಿ ಔಷಧೀಯ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ರಾಜ್ಯಮಟ್ಟದ ವೃಕ್ಷ ಮಿತ್ರ ಪ್ರಶಸ್ತಿ, ಜೀವಿಶಾಸ್ತ್ರ ವಿಭಾಗದಿಂದ ಪ್ರಶಸ್ತಿ, ಉಳ್ಳಾಲ ಪುರಸಭೆಯಿಂದ ಸ್ವಚ್ಛ ಭಾರತ ರಾಯಭಾರಿಯಾಗಿ ಆಯ್ಕೆ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2013), ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನವನ್ನೂ ಮಾಡಲಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Atmashakthi Vividhoddesha Sahakari Sangha June 5 Madhava Ullal Pigmi Colletor Shri Ramakarishna Co Operative Society World Environment Day
    Previous Articleಅಡಕೆ ಹಾಳೆಯ ಪ್ಲೇಟ್‌ನಿಂದ ಕ್ಯಾನ್ಸರ್‌ ಹರಡುತ್ತದೆ ಎಂಬುದೇ ಹಾಸ್ಯಾಸ್ಪದ
    Next Article ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    Related Posts

    News

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025
    News

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025
    News

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಗದಗ ಜಿಲ್ಲಾ ಸಹಕಾರ ಸಂಘಗಳ ವತಿಯಿಂದ ಸಹಕಾರದಿಂದ ಸ್ವಚ್ಛತಾ ಅಭಿಯಾನ

    June 6, 2025

    ನಿರೀಕ್ಷೆಗೂ ಮೀರಿ ರೆಪೋ ದರ ಕಡಿತಗೊಳಿಸಿದ ಆರ್‌ಬಿಐ

    June 6, 2025

    ಜೂನ್‌ 8ರಂದು ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಕ್ಷಯ ಸೌಧ ಕಟ್ಟಡ ಉದ್ಘಾಟನೆ

    June 5, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.