ವಿಶ್ವಕರ್ಮ ಬ್ಯಾಂಕ್ ಸಿಬ್ಬಂದಿಗಳ ಜೊತೆ ಸಂವಾದದಲ್ಲಿ ಪದ್ಮಶ್ರೀ ಡಾ.ಕೆ.ಎಸ್ ರಾಜಣ್ಣ ಅಭಿಪ್ರಾಯ
ಮಂಗಳೂರು: ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಛಲ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಾಗ ಮೇರು ಸಾಧನೆಯನ್ನು ಮಾಡುವುದಕ್ಕೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಅವರು ಹೇಳಿದರು.
ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಭಾನುವಾರ ಜರುಗಿದ ಬ್ಯಾಂಕಿನ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಮಾಜಸೇವಕ ದಿವಂಗತ ಬೊಳೂರು ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
https://chat.whatsapp.com/EbVKVnWB6rlHT1mWtsgbch
ಅಬಲರ ಜೀವನಕ್ಕೆ ಅನುಕಂಪ ಬೇಡ. ಅಬಲರು ಅಥವಾ ದುರ್ಬಲರು ಎಂದು ಯಾರನ್ನಾದರೂ ನೋಡುವುದು ಸರಿಯಾದ ಕ್ರಮವಲ್ಲ. ಅಬಲರನ್ನು ಸಬಲರನ್ನಾಗಿ ಮಾಡುವ ಸೂಕ್ತ ಸೌಲಭ್ಯವನ್ನು ವ್ಯವಸ್ಥೆಯು ಒದಗಿಸಬೇಕು. ಆಗ ವಿಕಲಚೇತನರು ಸೇರಿದಂತೆ ಸಮಾಜದ ದುರ್ಬಲ ಹಿಂದುಳಿದ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅವರು ಬ್ಯಾಂಕಿನ ನಿರ್ದೇಶಕರನ್ನು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಪದ್ಮಶ್ರೀ ಪುರಸ್ಕೃತ ಡಾ. ಕೆ. ಎಸ್ ರಾಜಣ್ಣ ಅವರ ಜೀವನವು ಹೇಗೆ ಪ್ರತಿಯೊಬ್ಬರ ಜೀವನಕ್ಕೆ ಅಮಿತ ಜೀವನೋತ್ಸಾಹವನ್ನು ತುಂಬುವ ಜೀವನ ಎಂದು ವಿವರಿಸಿದರು. ಏಳು ತಿಂಗಳ ಮಗುವಾಗಿದ್ದಾಗಲೇ ತನ್ನ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡ ಕೆ. ಎಸ್. ರಾಜಣ್ಣ ಅವರನ್ನು ಇಂದು ಜಗತ್ತೇ ಗುರುತಿಸಿದೆ. ಪದ್ಮಶ್ರೀ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಧಾನಿಯವರು ಕೆ. ಎಸ್. ರಾಜಣ್ಣ ಅವರನ್ನು ಅಭಿನಂದಿಸಿ “ನೀವು ನನ್ನ ದೇಶದ ಹೆಮ್ಮೆ” ( You are proud of My Nation) ಎಂದು ಹೇಳಿರುವುದು ಅವರ ಸಾಧನೆಗಳಿಗೆ ಸಾಕ್ಷಿಯಾಗಿದೆ. ಹನ್ನೆರೆಡು ವರ್ಷದ ಬಾಲಕನಾಗಿದ್ದಾಗಲೇ ಚಿತ್ರಕಲೆ ಸ್ಪರ್ಧೆಯಲ್ಲಿ ಅಂದಿನ ರಾಜ್ಯಪಾಲರಾಗಿದ್ದ ದಿವಂಗತ ರಘುವೀರ್ ಅವರು ಇವರ ಕಡು ಬಡತನದ ಹಿನ್ನಲೆ ಗಮನಿಸಿ 25 ಎಕರೆಗಳಷ್ಟು ಜಮೀನನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಘೋಷಿಸಿದಾಗ ಅದನ್ನು ರಾಜಣ್ಣ ಅವರು ತನಗೆ ವಿದ್ಯೆ ಕಲಿಸಿದ ಮೇಲುಕೋಟೆಯ ವಿಕಲಚೇತನರ ವಿದ್ಯಾಸಂಸ್ಥೆ ಕರುಣಾಗ್ರಹಕ್ಕೆ ನೀಡುವಂತೆ ಮಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜ್ಯದ ವಿಕಲಚೇತನರ ಆಯೋಗದ ಆಯುಕ್ತರಾಗಿದ್ದ ಡಾ. ಕೆ. ಎಸ್. ಅವರು ರಾಜ್ಯದ ವಿಕಲಚೇತನ ಸಮುದಾಯದ ಧ್ವನಿಯಾಗಿ ಕೆಲಸ ಮಾಡಿದ್ದರು. ತಾವೇ ಪ್ರಾರಂಭ ಮಾಡಿದ ಉದ್ದಿಮೆಯಲ್ಲಿ ಸುಮಾರು 200ಕ್ಕೂ ಅಧಿಕ ಅಂಗವಿಕಲರಿಗೆ ಉದ್ಯೋಗ ನೀಡುವ ಕಾರ್ಯವನ್ನು ಮಾಡಿದ್ಧಾರೆ. ಪ್ಯಾರಾ ಒಲಿಂಪಿಕ್ ನಲ್ಲಿ ಡಿಸ್ಕಸ್ ಮತ್ತು ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನವನ್ನು ಗೆದ್ದಿರುವುದಲ್ಲದೆ, ದಿನವಿಡೀ ನೀರಿನಲ್ಲಿ ತೇಲುವ ಸಾಮರ್ಥ್ಯವನ್ನು ಪ್ರದರ್ಶಿಸಿ ವಿಶ್ವದಾಖಲೆ ಮಾಡಿರುವ ಅವರು ಅದ್ಭುತ ಈಜುಪಟುವಾಗಿದ್ದಾರೆ. ತಮ್ಮ ಈ ಎಲ್ಲಾ ಸಾಧನೆಗಳಿಗಾಗಿ ಮೈಸೂರು ಮತ್ತು ಮಂಡ್ಯ ಈ ಎರಡೂ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಇವರು ನಮ್ಮೆಲ್ಲರಿಗೂ ಜೀವನದ ಪಾಠವನ್ನು ಮಾಡಿದ್ದಾರೆ ಎಂದು ಪರಿಚಯಿಸಿದರು.
ತಮ್ಮ ಧರ್ಮಪತ್ನಿ ಶ್ರೀಮತಿ ಭಾಗ್ಯಲಕ್ಷ್ಮಿ ಅವರೊಂದಿಗೆ ಭಾಗವಹಿಸಿದ ಡಾ.ಕೆ.ಎಸ್ ರಾಜಣ್ಣ ಅವರು ಬ್ಯಾಂಕಿನ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ ಅವರೊಂದಿಗೆ ಮುಕ್ತವಾಗಿ ಬೆರೆತು ಸಹಭೋಜನವನ್ನು ಮಾಡಿದರು. ಬಳಿಕ ಲೆಕ್ಕಪರಿಶೋಧಕ ಸಿಎ ನಾಗರಾಜ್ ಆಚಾರ್ ಅವರಿಂದ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಬ್ಯಾಂಕ್ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಿ., ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅದ್ಯಂತಾಯ, ನಿರ್ದೇಶಕರಾದ ಭಾಸ್ಕರ ಆಚಾರ್ಯ, ಸೀತಾರಾಮ ಆಚಾರ್ಯ, ಜಯಪ್ರಕಾಶ ಆಚಾರ್ಯ, ಸುಮಂಗಲಾ, ವಾಣಿಶ್ರೀ, ಯಶೋಧಾ ಮೊದಲಾದವರು ಭಾಗವಹಿಸಿದ್ದರು.