ಜೇನು ಚಾಕಲೇಟ್ ಲೋಕಾರ್ಪಣೆ ಮಾಡಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯ
ಸುಳ್ಯ: ಜೇನು ಕೃಷಿ ಕ್ಷೇತ್ರಕ್ಕೆ ಆಧುನಿಕ ರೂಪ ನೀಡಿ ಜೇನು ಕೃಷಿಯನ್ನು ಲಾಭದಾಯಕವಾಗಿ ಮಾಡುವ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರಿ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ವತಿಯಿಂದ ಸುಳ್ಯದ ಬಂಗ್ಲೆಗುಡ್ಡೆಯಲ್ಲಿ ನಿರ್ಮಿಸಿದ ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಜೇನು ಚಾಕಲೇಟ್ ಲೋಕಾರ್ಪಣೆ ಮಾಡಿ ಮಾತನಾಡಿದರು. ಶುದ್ಧ ಜೇನು ತುಪ್ಪ ಆರೋಗ್ಯಕ್ಕೆ ಉತ್ತಮ. ಆದುದರಿಂದ ಗುಣಮಟ್ಟದ ಜೇನು ಉತ್ಪಾದನೆಗೆ ಪ್ರಯತ್ನ ಮಾಡಬೇಕು. ಜೇನು ಕೃಷಿಗೆ ಬೆಳೆ ಸಾಲ, ಬೆಳೆ ವಿಮೆ ನೀಡುವ ಬಗ್ಗೆ ಸರಕಾರದ ಹಂತದಲ್ಲಿ ನಿರ್ಧಾರ ಆಗಬೇಕು. ಆ ರೀತಿಯ ಪ್ರಯತ್ನಕ್ಕೆ ತಮ್ಮ ಸಹಕಾರ ಇದೆ ಎಂದು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಮಿಶ್ರ, ಪೂರಕ ಕೃಷಿಗೆ ಒತ್ತು ನೀಡಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸುಸ್ಥಿರವಾಗಿರಲು ಮತ್ತು ಲಾಭದಾಯಕವಾಗಿಸಲು ರೈತರು ಒಂದೇ ರೀತಿಯ ಕೃಷಿಯನ್ನು ಅವಲಂಬಿಸದೆ ಮಿಶ್ರ ಹಾಗೂ ಪೂರಕ ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದರು. ದೇಶದ 50 ಕೋಟಿ ಜನ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಜಿಡಿಪಿಗೆ ಶೇ.30ರಷ್ಟನ್ನು ನೀಡುವ ಕೃಷಿ ಕ್ಷೇತ್ರ ಅತೀ ಹೆಚ್ಚು ಉದ್ಯೋಗವನ್ನೂ ನೀಡುತ್ತಿದೆ. 26 ಕೋಟಿ ಜನ ತೊಡಗಿಸಿಕೊಂಡಿರುವ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ಕ್ಷೇತ್ರ ಜಿಡಿಪಿಗೆ ಶೇ.18ನ್ನು ನೀಡುತ್ತಿದೆ. ಕೃಷಿಯಲ್ಲಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು. ಆಗ ಉತ್ತಮ ಮಾರುಕಟ್ಟೆ ಮತ್ತು ದರ ದೊರೆಯಲು ಸಾಧ್ಯ. ನಾವು ಉತ್ಪಾದಿಸುವ ಆಹಾರ ವಸ್ತುಗಳು ವಿದೇಶಕ್ಕೆ ರಫ್ತಾಗುವ ಗುಣಮಟ್ಟದ್ದಾಗಿರಬೇಕು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಹಾರ ಪರೀಕ್ಷಾ ಪ್ರಯೋಗಾಲಯ ಆಗಬೇಕು. ಇದರಿಂದ ಆಹಾರ ಉತ್ಪಾದನೆಯ ಗುಣಮಟ್ಟ ಹೆಚ್ಚಾಗಲು ಮತ್ತು ಆರೋಗ್ಯ ಸಂರಕ್ಷಣೆಗೆ ಸಹಾಯಕ ಎಂದು ಅವರು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪೂರಕವಾಗಿ ಕೃಷಿ ಕ್ಷೇತ್ರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಆದ್ಯತೆ ನೀಡಬೇಕು. ಜೇನು ವ್ಯವಸಾಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಇವೆ, ಆದುದರಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಜೇನು ಉತ್ಪಾದಿಸಲು ಒತ್ತು ನೀಡಿ ಎಂದು ಹೇಳಿದರು. ಪ್ರಮುಖ ಬೆಳೆಯ ಜೊತೆಗೆ ಜೇನು ಕೃಷಿಯಂತೆ ಇತರ ಹಲವು ಪೂರಕ ಹಾಗೂ ಮಿಶ್ರ ಬೆಳೆಯನ್ನು ಬೆಳೆಸಿ ಎಂದ ಅವರು ಮಿಶ್ರ ಕೃಷಿಯಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ ನಾಮಫಲಕ ಅನಾವರಣ ಮಾಡಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ನಿರ್ದೇಶಕರಾದ ಜಿ.ಪಿ.ಶ್ಯಾಮ ಭಟ್ಟ, ಡಿ.ತನಿಯಪ್ಪ, ಎಚ್.ಸುಂದರ ಗೌಡ, ಇಂದಿರಾ.ಕೆ, ಪಾಂಡುರಂಗ ಹೆಗ್ಡೆ, ಹರೀಶ್ ಕೋಡ್ಲ, ಪುರುಷೋತ್ತಮ ಭಟ್ ಎಂ, ಶಿವಾನಂದ, ಮನಮೋಹನ, ಪುಟ್ಟಣ್ಣ ಗೌಡ ಕೆ,ಗೋವಿಂದ ಭಟ್ ಪಿ, ಶಂಕರ ಪೆರಾಜೆ, ಸರಸ್ವತಿ ವೈ.ಪಿ, ಸುಶೀಲಾ ಉಪಸ್ಥಿತರಿದ್ದರು.
ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷ ಚಂದ್ರ ಕೋಲ್ಚಾರು ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಪಿ.ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಕೆ.ಟಿ.ವಿಶ್ವನಾಥ, ಸುಪ್ರೀತ್ ಮೋಂಟಡ್ಕ ಮತ್ತಿತರರು ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com